ಅರಣ್ಯ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಆಗ್ರಹಿಸಿದ ಯುವ ಕವಿಗಳು
ಕೊಟ್ಟಿಗೆಹಾರ, ಜೂನ್ 30: ಕವಿಗಳೆಂದರೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡು ಪ್ರಕೃತಿಯ ವರ್ಣನೆ, ಸಮಾಜದ ಅಂಕುಡೊಂಕುಗಳನ್ನು ಕಥೆ ಕವಿತೆಗಳ ಮೂಲಕ ಪದಗಳಲ್ಲಿ ಕಟ್ಟಿಕೊಡುತ್ತಾರೆ. ಆದರೆ, ಮೂಡಿಗೆರೆ ತಾಲ್ಲೂಕಿನ ಯುವ ಕವಿಗಳು ಕೇವಲ ಪ್ರಕೃತಿಯ ವರ್ಣನೆಯ ಕವಿತೆಗಳು ಸೇರಿದಂತೆ ಬರವಣಿಗೆ ಮಾತ್ರ ಸೀಮಿತವಾಗದೆ ಬಲ್ಲಾಳರಾಯನ ದುರ್ಗದಲ್ಲಿ ಸ್ಚಚ್ಚತಾ ಕಾರ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಬಲ್ಲಾಳರಾಯನ ದುರ್ಗಕ್ಕೆ ಬಂದ 10 ಮಂದಿ ತಾಲ್ಲೂಕಿನ ಯುವಕವಿಗಳ ತಂಡ ಬಲ್ಲಾಳರಾಯನ ದುರ್ಗಕ್ಕೆ ಸಾಗುವ ಹಾದಿಯ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಸಂಗ್ರಹಿಸಿ ರಾಣಿಝರಿಯ ಬಳಿ ಇರುವ ಕಸದ ತೊಟ್ಟಿಗೆ ಹಾಕಿದರು.
ರಾಜ್ಯದ ಮೂಲೆಮೂಲೆಯಿಂದ ಬಂದ ಪ್ರವಾಸಿಗರಿಗೆ ಮೀಸಲು ಅರಣ್ಯದೊಳಗೆ ಸ್ವಚ್ಚತೆ ಕಾಪಾಡುವಂತೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಂತೆ ಮನವಿ ಮಾಡಿದರು.
ಬಲ್ಲಾಳರಾಯನ ದುರ್ಗ ಮತ್ತು ರಾಣಿಝರಿಯ ನಿಸರ್ಗ ಸೌಂದರ್ಯವನ್ನು ಸವಿಯಲು ರಾಜ್ಯದ ವಿವಿದೆಡೆಯಿಂದ ಪ್ರತಿದಿನ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಕೆಲ ಪ್ರವಾಸಿಗರು ತಾವು ತಂದ ತಿಂಡಿ ತಿನಿಸುಗಳ ಪೊಟ್ಟಣ ಮತ್ತು ನೀರು ಮತ್ತು ತಂಪುಪಾನೀಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ಬಲ್ಲಾಳರಾಯನ ದುರ್ಗಕ್ಕೆ ಸಾಗುವ ಹಾದಿಯ ಇಕ್ಕೆಲಗಳಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಬಾಟಲಿಗಳು ಕಾಣ ಸಿಗುತ್ತದೆ. ಅರಣ್ಯ ಈ ಬಗ್ಗೆ ಗಮನ ಹರಿಸಬೇಕು ಎಂದು ಯುವಕವಿಗಳು ಒತ್ತಾಯಿಸಿದ್ದಾರೆ.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಮೂಡಿಗೆರೆ ತಾಲ್ಲೂಕಿನ ಯುವಕವಿಗಳಾದ ಅಲ್ತಾಪ್ ಬಿಳುಗುಳ, ಸನ್ಮತಿ ಹಾರ್ಮಕ್ಕಿ, ನಜೀರ್ ಹಾನುಬಾಳು, ನಂದೀಶ್ ಬಂಕೇನಹಳ್ಳಿ, ಮಲ್ಲಿಕಾ ಮತ್ತಿಕಟ್ಟೆ, ಎಂ.ಎಸ್.ನಾಗರಾಜ್, ಯೋಗಿತಾ, ಪೂಜಿತಾ, ಸಪ್ವಾನ್ ಬಿಳುಗುಳ, ಅಶೋಕ್, ಸ್ಮಿತೇಶ್ ಇದ್ದರು.