ಬಳ್ಳಾರಿಯಲ್ಲಿ ಕಮಲ ಅರಳಲು ನೀರೆರೆದಿದ್ದ ಸುಷ್ಮಾ ಸ್ವರಾಜ್
ಬೆಂಗಳೂರು, ಆಗಸ್ಟ್ 7: ಅಂದು ಕರ್ನಾಟಕದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಕರಾವಳಿ ಮಲೆನಾಡಿನ ಕೆಲ ಭಾಗಗಳಿಗೆ ಬಿಜೆಪಿ ಸೀಮಿತವಾಗಿತ್ತು.
ಆದಾಗ್ಯೂ ಆಗಷ್ಟೇ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕವಾಗಿ ಹುರುಪಿನಲ್ಲಿದ್ದ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿಯನ್ನು ಹುಡುಕುತ್ತಿದ್ದಾಗ ತಾವು ಸ್ಪರ್ಧೆಗೆ ಸಿದ್ಧ ಎಂದು ಹೇಳಿದವರು ಇದೇ ಸುಷ್ಮಾ ಸ್ವರಾಜ್.
ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ
ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ದುಮುಕಿದ್ದ ಸೋನಿಯಾ ಗಾಂಧಿಗೆ ಶಾಕ್ ನೀಡಲು ಸುಷ್ಮಾ ಸಿದ್ಧರಾಗಿದ್ದರು. ಈ ನಿರ್ಧಾರ ಕಾಂಗ್ರೆಸ್ ಪಾಳಯದಲ್ಲೂ ಆತಂಕಕ್ಕೆ ಕಾರಣವಾಗಿತ್ತು. ಅಷ್ಟಕ್ಕೂ ಬಳ್ಳಾರಿಯಲ್ಲಿ ಬಿಜೆಪಿ ಅಸ್ತಿತ್ವವೇ ಇರಲಿಲ್ಲ. ಒಮ್ಮೆಯೂ ಬಿಜೆಪಿ ಅಭ್ಯರ್ಥಿ ಅಲ್ಲಿ ಗೆದ್ದಿರಲಿಲ್ಲ. ಕಾಂಗ್ರೆಸ್ನ ಭದ್ರಕೋಟೆ ಎನ್ನುವ ಕಾರಣಕ್ಕಾಗಿಯೇ ಬಳ್ಳಾರಿಯನ್ನು ಸೋನಿಯಾ ಗಾಂಧಿ ಆಯ್ಕೆಮಾಡಿಕೊಂಡಿದ್ದರು.
ಆದರೆ ಸುಷ್ಮಾ ಸ್ವರಾಜ್ ಅಲ್ಲಿಗೆ ಬಂದು ಸ್ಪರ್ಧಿಸಿ ಕಾಂಗ್ರೆಸ್ಗೆ ಶಾಕ್ ನೀಡಿದ್ದರು. ಸೋಲುವುದು ನಿಶ್ಚಿತ ಎಂದು ಗೊತ್ತಿದ್ದರೂ ಕರ್ನಾಟಕದಲ್ಲಿ ಬಿಜೆಪಿಗೆ ಜೀವ ನೀಡುವ ಉದ್ದೇಶದಿಂದ ಅಂತಹ ಒಂದು ಸ್ಪರ್ಧೆಯ ನಿರ್ಧಾರ ತೆಗೆದುಕೊಂಡಿದ್ದರು. ಅಂತಿಮವಾಗಿ ಫಲಿತಾಂಶ ಬಂದಾಗ ಸುಷ್ಮಾ ಸ್ವರಾಜ್ 56,100 ಮತಗಳಿಂದ ಸೋತಿದ್ದರು.
ಬಿಜೆಪಿಗೆ ಮೊದಲ ಬಾರಿಗೆ ಶೇ.44.7ಕ್ಕೂ ಹೆಚ್ಚಿನ ಮತ ದೊರೆತಿತ್ತು. ಆಗ ಚುನಾವಣಾ ಭಾಷಣದ ಸಂದರ್ಭದಲ್ಲಿ ನಾನು ನಿಮ್ಮ ಸೊಸೆ ನನ್ನನ್ನು ಆಶೀರ್ವದಿಸಿ ಎಂದು ಜನರಲ್ಲಿ ಕೇಳಿಕೊಂಡಿದ್ದರು. ಆದರೆ ಜನ ಗೆಲ್ಲಿಸಲಿಲ್ಲ ಎನ್ನುವ ಕಾರಣಕ್ಕೆ ಬಳ್ಳಾರಿಯನ್ನು ಅವರು ಮರೆಯಲಿಲ್ಲ.
LIVE: ಸುಷ್ಮಾ ಸ್ವರಾಜ್ ನಿಧನ: ಏಮ್ಸ್ ಆಸ್ಪತ್ರೆಗೆ ಗಣ್ಯರ ದಂಡು
ಚುನಾವಣಾ ಸೋಲಿನ ಸುಮಾರು ವರ್ಷಗಳ ಕಾಲ ಪ್ರತಿ ವರಮಹಾಲಕ್ಷ್ಮೀ ಹಬ್ಬಕ್ಕೂ ಬಳ್ಳಾರಿಗೆ ಬಂದು ಹಬ್ಬವನ್ನು ಆಚರಿಸುತ್ತಿದ್ದರು. ಚುನಾವಣೆಯಲ್ಲಿ ಹೇಳಿದಂತೆ ನಡೆದುಕೊಂಡು ಅವರ ಈ ಕಾಳಜಿಯು ಕರ್ನಾಟಕದಲ್ಲಿ ವಿಶೇಷವಾಗಿ ಬಳ್ಳಾರಿಯಲ್ಲಿ ಬಿಜೆಪಿ ಭದ್ರವಾಗಲು ಸಾಧ್ಯವಾಯಿತು.
ಜನಾರ್ಧನ ರೆಡ್ಡಿ ಸಹೋದರರನ್ನು ಬೆಳೆಸಿದರು ಎನ್ನುವ ಆರೋಪವಿದ್ದರೂ ಕೂಡ ಬಳ್ಳಾರಿಯಲ್ಲಿ ಇಂದು ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿದ್ದರೆ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಿದ್ದರೆ ಅದಕ್ಕೆ ಸುಷ್ಮಾ ಸ್ವರಾಜ್ ಪ್ರಮುಖ ಕಾರಣವಾಗಿದ್ದಾರೆ.
ವಿಪರ್ಯಾಸೆವಂದರೆ ಅವರು ಇಷ್ಟಪಟ್ಟು ಬಳ್ಳಾರಿಗೆ ಬರುತ್ತಿದ್ದ ವರಮಹಾಲಕ್ಷ್ಮೀ ಹಬ್ಬಕ್ಕೆ ಕೇವಲ ಮೂರು ದಿನಗಳಿರುವಾಗ ಅಸುನೀಗಿದ್ದಾರೆ.