ಕರ್ನಾಟಕಕ್ಕೆ ತೇಜಸ್, ಮಹಾರಾಜ ಎಕ್ಸ್ ಪ್ರೆಸ್: ಸುರೇಶ್ ಪ್ರಭು
ಮುಂಬೈ-ಗೋವಾ ನಡುವೆ ಸಂಚರಿಸುವ ತೇಜಸ್ ರೈಲಿನ ಪ್ರಯೋಜನ ಕರ್ನಾಟಕ ಕರಾವಳಿಗೂ ಸಿಗಲಿದೆ. ಉತ್ತರಪ್ರದೇಶದಲ್ಲಿ ಸಂಚರಿಸುತ್ತಿದ್ದ ಮಹಾರಾಜ ಎಕ್ಸ್ ಪ್ರೆಸ್ ರೈಲನ್ನು ಕರ್ನಾಟಕಕ್ಕೆ ತರಲಾಗುತ್ತದೆ
ಕಾರವಾರ, ಜೂನ್ 02: 'ಮುಂಬೈ-ಗೋವಾ ನಡುವೆ ಸಂಚರಿಸುವ ತೇಜಸ್ ರೈಲಿನ ಪ್ರಯೋಜನ ಕರ್ನಾಟಕ ಕರಾವಳಿಗೂ ಸಿಗಲಿದೆ. ಉತ್ತರಪ್ರದೇಶದಲ್ಲಿ ಸಂಚರಿಸುತ್ತಿದ್ದ ಮಹಾರಾಜ ಎಕ್ಸ್ ಪ್ರೆಸ್ ರೈಲನ್ನು ಕರ್ನಾಟಕಕ್ಕೆ ತರಲಾಗುತ್ತದೆ' ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಘೋಷಿಸಿದ್ದಾರೆ.
ಸುರೇಶ್ ಪ್ರಭು ಅವರು ಗುರುವಾರ(ಜೂನ್ 01)ದಂದು ಜಿಲ್ಲಾ ರಂಗಮಂದಿರದಲ್ಲಿ ಕಾರವಾರ ವಿಭಾಗದ ರೈಲ್ವೆ ಪ್ರಯಾಣಿಕರ ವಿವಿಧ ಸೌಲಭ್ಯಗಳ ಹಾಗೂ ಸವಲತ್ತುಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. [ಕೊಂಕಣ ರೈಲ್ವೆ ಮಾಹಿತಿ ಪಡೆಯಲು ಹೊಸ ಸಹಾಯವಾಣಿ]
ಕಾರವಾರದ ಬಗ್ಗೆ : ಬಹಳಷ್ಟು ಅಭಿವೃದ್ಧಿಯಾಗಿದ್ದರೂ ಕಾರವಾರ ತನ್ನತನವನ್ನು ಉಳಿಸಿಕೊಂಡು ಬಂದಿದೆ. ಕಾರವಾರದ ಅಭಿವೃದ್ಧಿಗೆ ಕೊಂಕಣ ರೈಲ್ವೆ ಪ್ರಮುಖ ಕೊಡುಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಡುಗೆ ನೀಡಲಿದೆ. ಕೇಂದ್ರ ಸರ್ಕಾರ ಎಲ್ಲಾ ಪ್ರಮುಖ ಬಂದರುಗಳನ್ನು ಸಂಪರ್ಕಿಸುವ ಸಾಗರಮಾಲಾ ಯೋಜನೆ ಅನುಷ್ಟಾನಗೊಳಿಸುತ್ತಿದ್ದು, ಇದರ ಲಾಭ ಕಾರವಾರ ಬಂದರಿಗೆ ಸಹ ಲಭಿಸಲಿದೆ ಎಂದರು.
ಕೊಂಕಣ ರೈಲ್ವೆ ನಿಗಮದ ಚೇರಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಸಂಜಯ ಗುಪ್ತಾ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿನಯ ಪಾಟೀಲ್, ತಾಲೂಕು ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ನಾಯ್ಕ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.[ದೀಪಸ್ತಂಭಗಳ ಬೆಳಕಲ್ಲಿ ಅಡಗಿದೆ ಕರಾವಳಿ ಪ್ರವಾಸೋದ್ಯಮ ಅಭಿವೃದ್ದಿ]
ಪ್ರವಾಸೋದ್ಯಮಕ್ಕೆ ಒತ್ತು
ರಾಜ್ಯ ಸರ್ಕಾರ ಸಹಯೋಗ ನೀಡಿದರೆ ಪ್ರವಾಸೋದ್ಯಮ ಪ್ಯಾಕೇಜ್ ರೂಪಿಸಲು ರೈಲ್ವೇ ಇಲಾಖೆ ಸಿದ್ಧವಿದೆ ಐಆರ್ಸಿಟಿಸಿ ಸಹಯೋಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ಯಾಕೇಜ್ ರೂಪಿಸಿದರೆ ಎಲ್ಲಾ ನೆರವು ಒದಗಿಸಲಾಗುವುದು ಎಂದು ಕೇಂದ್ರ ರೈಲ್ವೇ ಸಚಿವ ಸುರೇಶ ಪ್ರಭು ಅವರು ಹೇಳಿದರು.
|
ತೇಜಸ್, ಮಹಾರಾಜ ಎಕ್ಸ್ ಪ್ರೆಸ್
ಈಗಾಗಲೇ ಐಷಾರಾಮಿ ರೈಲು ಸೇವೆ ತೇಜಸ್ ಮುಂಬೈಯಿಂದ ಗೋವಾ ಸೇವೆ ಆರಂಭಿಸಿದ್ದು, ಇದರ ಪ್ರಯೋಜನ ಕಾರವಾರಕ್ಕೂ ಲಭಿಸಲಿದೆ. ಉತ್ತರಪ್ರದೇಶದಲ್ಲಿ ಸಂಚರಿಸುತ್ತಿದ್ದ ಮಹಾರಾಜ ಎಕ್ಸ್ ಪ್ರೆಸ್ ರೈಲನ್ನು ಕರ್ನಾಟಕದಲ್ಲೂ ಓಡಿಸುವ ಯೋಜನೆ ಇದೆ ಎಂದರು. ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕಾಗಿ ಗ್ರೀನ್ ಟ್ರಿಬ್ಯುನಲ್ ಅನುಮತಿಯನ್ನು ಕಾಯಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
|
ಗೋವಾ, ಉಡುಪಿಯಲ್ಲಿ ಕೇಂದ್ರ
ಕೊಂಕಣ ರೈಲ್ವೆ ಆರಂಭಕ್ಕೆ ಕೊಡುಗೆ ನೀಡಿದ್ದ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರಿನಲ್ಲಿ ಗೋವಾದಲ್ಲಿ ಹಾಗೂ ರಾಮಕೃಷ್ಣ ಹೆಗಡೆ ಹೆಸರಿನಲ್ಲಿ ಉಡುಪಿಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕೌಶಲ್ಯ ಅಭಿವೃದ್ಧಿ ಕೇಂದ್ರ ಆರಂಭಿಸಲು ಸಹಕಾರ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರ ಸಹಕಾರ ನೀಡಬೇಕಾಗಿದೆ ಎಂದು ಅವರು ಮನವಿ ಮಾಡಿದರು.
|
ಶಾಸಕ ಸತೀಶ್ ಸೈಲ್ ಮಾತನಾಡಿ
ಶಾಸಕ ಸತೀಶ್ ಸೈಲ್ ಅವರು ಮಾತನಾಡಿ ಜಿಲ್ಲೆಯ ಬಹುವರ್ಷಗಳ ಬೇಡಿಕೆಯಾದ ಅಂಕೋಲಾ-ಹುಬ್ಬಳ್ಳಿ ರೈಲು ಸೇವೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಆರಂಭಿಸಲು ರಾಜ್ಯ ಸರ್ಕಾರ ಮಾತ್ರವಲ್ಲ ರೈಲ್ವೇ ಇಲಾಖೆ ಉತ್ಸುಕವಾಗಿವೆ. ಯೋಜನೆ ಆರಂಭಿಸಲು ಇರುವ ಅಡೆತಡೆಗಳ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸಭೆ ನಿಗದಿಪಡಿಸಲಾಗಿದೆ ಎಂದರು.