ಧರಣಿ ನಿರತ ಉಪನ್ಯಾಸಕರಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭಾವನಾತ್ಮಕ ಮನವಿ!
ಬೆಂಗಳೂರು, ಅ. 16: ಸರ್ಕಾರದ ಭರವಸೆಯ ಹೊರತಾಗಿಯೂ ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಪಿಯು ಬೋರ್ಡ್ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ಉಪನ್ಯಾಸಕರಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮತ್ತೊಮ್ಮೆ ಭಾವನಾತ್ಮಕ ಮನವಿ ಮಾಡಿದ್ದಾರೆ. ಈಗಾಗಲೇ ಹಲವು ಬಾರಿ ಮನವಿ ಮಾಡಿ, ಯಾವುದೇ ತೊಂದರೆ ಆಗದಂತೆ ಕೌನ್ಸೆಲಿಂಗ್ ಮುಗಿಸಿರುವ ಎಲ್ಲ 1203 ಉಪನ್ಯಾಸಕರಿಗೆ ನೇಮಕಾತಿ ಆದೇಶ ಪತ್ರ ಕೊಡುವುದಾಗಿ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ಸಚಿವ ಸುರೇಶ್ ಕುಮಾರ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಕ್ವಾರಂಟೈನ್ನಲ್ಲಿ ಇರುವುದರಿಂದ ಧರಣಿ ನಿರತ ಉಪನ್ಯಾಸಕರನ್ನು ಭೇಟಿ ಮಾಡುವುದು ಸಾಧ್ಯವಾಗಿಲ್ಲ ಎಂದೂ ಹೇಳಿದ್ದಾರೆ. ಸುರೇಶ್ ಕುಮಾರ್ ಅವರ ಮನವಿಯ ಮೇರೆಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಅವರು ಪಿಯು ಬೋರ್ಡ್ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ಭಾವಿ ಉಪನ್ಯಾಸಕರನ್ನು ಖುದ್ದಾಗಿ ಭೇಟಿ ಮಾಡಿ ಭರವಸೆ ನೀಡಿದ್ದಾರೆ. ಆದರೂ ಉಪನ್ಯಾಸಕರು ಮಾತ್ರ ತಮ್ಮ ಪಟ್ಟು ಸಡಲಿಸುತ್ತಿಲ್ಲ. ಹೀಗಾಗಿ ಈ ಬಾರಿ ಸುರೇಶ್ ಕುಮಾರ್ ಅವರು ಮತ್ತೊಮ್ಮೆ ಮನವಿ ಮಾಡಿದ್ದಾರೆ. ಅವರು ತಮ್ಮ ಸಂದೇಶದಲ್ಲಿ ಏನೆಲ್ಲ ಹೇಳಿದ್ದಾರೆ? ಮುಂದಿದೆ.
ನಿಮ್ಮ ಪ್ರತಿಭಟನೆ ಮುಂದುವರೆದಿರುವುದು ನನಗೆ ವೇದನೆಯಾಗಿದೆ
ಆತ್ಮೀಯ ಪದವಿಪೂರ್ವ ಉಪನ್ಯಾಸಕ ಅಭ್ಯರ್ಥಿಗಳೇ, ನನಗೆ ವೈದ್ಯರು ಅನುಮತಿ ಕೊಟ್ಟಿದ್ದರೆ ನಾನೇ ತಮ್ಮನ್ನೆಲ್ಲಾ ಬಂದು ಭೇಟಿಮಾಡುತ್ತಿದ್ದೆ. ತಮ್ಮ ಮಧ್ಯೆ ಕುಳಿತು ಮಾತನಾಡುತ್ತಿದ್ದೆ. ಆದರೆ ಅದರೆ ಈಗ ಅವಕಾಶವಿಲ್ಲ. ನಿಮ್ಮ ಪ್ರತಿಭಟನೆ ಇನ್ನೂ ಮುಂದುವರೆದಿರುವುದು ನಿಜಕ್ಕೂ ನನಗೆ ವೇದನೆಯಾಗಿದೆ. ಇಷ್ಟೆಲ್ಲ ಮನವಿಗಳ ಬಳಿಕವೂ, ಹೀಗೆ ಹಠ ಮಾಡುವುದು ಒಳಿತಲ್ಲ.
ಧರಣಿ ನಿರತ ಉಪನ್ಯಾಸಕರಿಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಮಹತ್ವದ ಭರವಸೆ!
ನಿಮ್ಮ ನೇಮಕಾತಿ ಎಷ್ಟು ವರ್ಷಗಳಿಂದ ಬಾಕಿಯಿತ್ತು, ಅದು ಈ ಹಂತದವರೆಗೆ ಬರುವಲ್ಲಿ ನಾನು ನಿಮಗೆ ಎಷ್ಟು ಸಹಕರಿಸಿದ್ದೇನೆಂಬ ವಿಷಯ ನಿಮಗೆಲ್ಲಾ ತಿಳಿದಿದೆ. ಸಚಿವನಾಗಿ ಖಾತೆ ಹಂಚಿಕೆಗೂ ಮುನ್ನವೇ 21.08.2019 ರಂದು ನಾನು ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ನೀಡಿದ ಸೂಚನೆಗಳು, ನಂತರ ಉದ್ಭವವಾದ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ನಾನು ತೆಗೆದುಕೊಂಡ ಕ್ರಮಗಳು, ಕಡೆಗೆ ಕೌನ್ಸೆಲಿಂಗ್ ನಡೆಸುವ ಪ್ರಕ್ರಿಯೆ ಹೀಗೆ ಪ್ರತಿ ಬಾರಿ ನಿಮಗೆ ಒಳಿತಾಗಲೆಂಬ ಆಶಯವಷ್ಟೇ ನನ್ನಲ್ಲಿ ಇತ್ತು.
ಸಿಎಂ ಬಳಿ ನಾನೇ ಅನುಮತಿ ಪಡೆದುಕೊಂಡಿದ್ದೇನೆ
ಇಡೀ ವಿಶ್ವವನ್ನು ಅಲುಗಾಡಿಸಿರುವ ಕೊರೋನಾ ಮಹಾಮಾರಿ ನಮ್ಮ ಶೈಕ್ಷಣಿಕ ಚಟುವಟಿಕೆಗಳ ಮೇಲೆ, ಆರ್ಥಿಕತೆಯ ಮೇಲೆ ಅಪಾರವಾದ ಪರಿಣಾಮ ಬೀರಿದೆ. ಬೇರಾವ ಇಲಾಖೆಗಳ ನೇಮಕಾತಿಗೆ ಇಂದು ನಮ್ಮ ಸರ್ಕಾರ ಅನುಮತಿಸಿಲ್ಲ. ನಿಮ್ಮದೊಂದು ವಿಶೇಷ ಪ್ರಕರಣವೆಂಬಂತೆ ನಾನು ಮುಖ್ಯಮಂತ್ರಿಗಳೊಂದಿಗೆ, ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಶಾಲಾ ಕಾಲೇಜುಗಳ ಪ್ರಾರಂಭದ ಬಳಿಕ ನೇಮಕಾತಿ ಆದೇಶ ಹೊರಡಿಸುವ ಅನುಮತಿಯನ್ನು ಪಡೆದಿದ್ದೇನೆ. =
ಆರ್ಥಿಕ ಇಲಾಖೆಯ ಆದೇಶದ ಸಂಪೂರ್ಣ ಮಾಹಿತಿ ನಿಮ್ಮೆಲ್ಲರಲ್ಲಿದೆ. ನನ್ನ ಸಹೋದ್ಯೋಗಿ ಉಪಮುಖ್ಯಮಂತ್ರಿಗಳಾದ ಡಾ.ಅಶ್ವತ್ಥನಾರಾಯಣ್ ನಿನ್ನೆಯ ದಿನ ಇದೆಲ್ಲವನ್ನೂ ನಿಮಗೆ ವಿವರಿಸಿದ್ದಾರೆ. ಆದರೂ ನೀವು ನೇಮಕಾತಿ ಆದೇಶ ನೀಡಬೇಕೆಂದು ಹಠ ಹಿಡಿದು ಕೂಡುವುದು ಒಳ್ಳೆಯದಲ್ಲ.
ಹೋರಾಟ ತಾರ್ಕಿಕವಾಗಿರಬೇಕು
ಹೋರಾಟ ತಾರ್ಕಿಕವಾಗಿರಬೇಕು. ಎಲ್ಲ ಭರವಸೆಗಳು ದೊರೆತ ನಂತರವೂ ಹಠ ಹಿಡಿಯುವುದು ಹೋರಾಟದ ಅರ್ಥ ಕಳೆದುಕೊಳ್ಳುವ ಹಾಗೆ ಮಾಡುತ್ತದೆ. ಹೆಣ್ಣಮಕ್ಕಳೂ ಪ್ರತಿಭಟನೆಯಲ್ಲಿದ್ದೀರಿ. ಸಾಂಕ್ರಾಮಿಕದ ಸಂದರ್ಭದಲ್ಲಿ ಎಲ್ಲರ ಆರೋಗ್ಯಗಳೂ ಸೂಕ್ಷ್ಮ ಸ್ಥಿತಿಯಲ್ಲಿ ಇರುತ್ತದೆ. ಯಾರಿಗೂ ಸಮಸ್ಯೆಯಾಗಬಾರದು. ಜೀವದ ಬೆಲೆ ದೊಡ್ಡದು.
ಬರಗೂರು ರಾಮಚಂದ್ರಪ್ಪ ಅವರೊಂದಿಗೆ ಮಾತನಾಡಿದ್ದೇನೆ, ಧರಣಿ ಕೈಬಿಡಿ: ಸುರೇಶ್ ಕುಮಾರ್
ನೀವೆಲ್ಲಾ ಇನ್ನೂ ಯುವಕರು, ವಿಶೇಷವಾಗಿ ಗುರು ಸ್ಥಾನವನ್ನು ಅಲಂಕರಿಸುವವರು. ಹತ್ತಾರು ವರ್ಷ ಇಲಾಖೆಯ ಸೇವೆ ಮಾಡಬೇಕಾದವರು. ಸಾವಿರಾರು, ಲಕ್ಷಾಂತರ ಯುವಕರಿಗೆ ದಾರಿದೀಪವಾಗಬೇಕಾದವರು.
Recommended Video
ನೀವು ಹಾಕುವ ಮೇಲ್ಪಂಕ್ತಿ ಸಮಾಜವನ್ನು ಮುನ್ನಡೆಸಬೇಕು
ನೀವು ಹಾಕುವ ಮೇಲ್ಪಂಕ್ತಿ ಸಮಾಜವನ್ನು ಮುನ್ನಡೆಸಬೇಕೆಂಬುದು ನಿಮ್ಮೆಲ್ಲರ ನೆನಪಿನಲ್ಲಿರಲಿ. ನೇಮಕಾತಿ ಆದೇಶ ನೀಡುವುದರ ಕುರಿತು ನನ್ನ ಮೇಲೆ ನೀವು ಭರವಸೆ ಇಡುವುರಾದಲ್ಲಿ ತಕ್ಷಣವೇ ಈ ಹೋರಾಟವನ್ನ ಕೈಬಿಡಿ. ನಿಮ್ಮ ಬಗ್ಗೆ ಇನ್ನಷ್ಟು ಪ್ರೀತಿಯಿಂದ, ಆಸ್ಥೆಯಿಂದ ಮುಂದಿನ ಕೆಲಸಗಳನ್ನು ಮಾಡಲು ಅದು ನನಗೆ ಶಕ್ತಿ ತುಂಬುತ್ತದೆ ಎಂದು ಮನವಿ ಮಾಡಿದ್ದಾರೆ.
ಸರ್ಕಾರದ ಭರವಸೆಯ ಬಳಿಕವೂ ಧರಣಿ ಮುಂದುವರೆಸಿರುವ ಉಪನ್ಯಾಕರ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೀಗೆ ಮನವಿ ಮಾಡಿಕೊಂಡಿದ್ದಾರೆ.