ಶಾಲಾ ಶುಲ್ಕ: ಪೋಷಕರು-ಶಿಕ್ಷಕರಿಗೆ ಅನುಕೂಲವಾಗುವ ಸೂತ್ರ ಪ್ರಕಟಿಸಿದ ಸುರೇಶ್ ಕುಮಾರ್!
ಬೆಂಗಳೂರು, ಫೆ. 23: ಪೋಷಕರು ಮತ್ತು ಶಿಕ್ಷಕರಿಗೆ ಅನುಕೂಲವಾಗುವ ಸೂತ್ರ ಇಂದಿನ ಸಂದರ್ಭದ ಅವಶ್ಯಕತೆಯಾಗಿದ್ದು, ಈ ಹಿನ್ನೆಲೆಯಲ್ಲಿಯೇ ಶಾಲಾ ಶುಲ್ಕ ಕುರಿತಂತೆ ಆಲೋಚನೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಮಂಗಳವಾರ ವಿವಿಧ ಖಾಸಗಿ ಶಾಲಾ ಸಂಘಟನೆಗಳ ಆಶ್ರಯದಲ್ಲಿ ಶಾಲಾ ಶುಲ್ಕ ಕಡಿತ ಆದೇಶ ಮರುಪರಿಶೀಲನೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ಲ್ಲಿ ನಡೆದ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ, ಸಿಬ್ಬಂದಿ ಮತ್ತು ಆಡಳಿತ ಮಂಡಳಿಗಳ ಪ್ರತಿನಿಧಿಗಳ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಖಾಸಗಿ ಶಾಲಾ ಶಿಕ್ಷಕರ ಮತ್ತು ಪೋಷಕರ ಹಿತದೃಷ್ಟಿಯಿಂದ ಈ ಶೈಕ್ಷಣಿಕ ವರ್ಷಕ್ಕೆ ಸೀಮಿತಗೊಳಿಸಿ ಸರ್ಕಾರ ಶೇ. 30ರ ಶುಲ್ಕ ಕಡಿತದ ನಿರ್ಧಾರ ಕೈಗೊಂಡಿತ್ತು, ಇದು ಖಾಸಗಿ ಶಾಲೆಗಳ ಹಿತದೃಷ್ಟಿಯಿಂದಲೂ ಒಳಿತಿನ ನಿರ್ಧಾರವಾಗಿತ್ತು ಎಂದರು.
ಇಂತಹ ಒಂದು ನಿರ್ಧಾರ ಕೈಗೊಳ್ಳುವ ಮೊದಲು ಹತ್ತಾರು ಬಾರಿ ಶಾಲಾ ಸಂಘಟನೆಗಳು ಮತ್ತು ಪೋಷಕರ ಸಂಘಟನೆಗಳೊಂದಿಗೆ ಸಮಾಲೋಚನೆ ಮಾಡಲಾಗಿತ್ತು. ಎರಡೂ ಕಡೆಯ ವಾದಗಳನ್ನು ಆಲಿಸಿ ಎಲ್ಲರಿಗೂ ಸಮ್ಮತವಾಗುವ ನಿರ್ಧಾರವೊಂದನ್ನು ಕೈಗೊಳ್ಳಲಾಗಿತ್ತು. ಈ ನಿರ್ಧಾರದ ನಂತರವೇ ಪೋಷಕರು ಶಾಲೆಗಳಿಗೆ ಶುಲ್ಕ ಪಾವತಿಸಲು ಆರಂಭಿಸಿದರು. ಇದರಿಂದ ಖಾಸಗಿ ಶಾಲೆಗಳಿಗೆ ಅನುಕೂಲವಾಯಿತಲ್ಲದೇ ಇದರಿಂದ ಶಾಲಾ ಶಿಕ್ಷಕರಿಗೆ ಆ ಶುಲ್ಕದಿಂದ ಸಂಗ್ರಹವಾದ ಹಣದಿಂದ ವೇತನ ಪಾವತಿಸಲೂ ಸಹಕಾರಿಯಾಯಿತು ಎಂದರು.
ಶಿಕ್ಷಕರ ಹಿತದೃಷ್ಟಿಯಿಂದಲೇ ಈ ಆದೇಶ
ಸರ್ಕಾರ ಶಿಕ್ಷಕರ ಹಿತದೃಷ್ಟಿಯಿಂದಲೇ ಈ ಆದೇಶ ಹೊರಡಿಸಿತ್ತು. ಈ ಕೋವಿಡ್ ವಿಷಮ ಕಾಲಘಟ್ಟದಿಂದಾಗಿ ಸಮಸ್ಯೆ ಸೃಷ್ಟಿಯಾಯಿತು. ಶಿಕ್ಷಕರ ಕಷ್ಟವನ್ನು ನಾನು ಕಣ್ಣಾರೆ ನೋಡಿದ್ದೇನೆ. ಶಿಕ್ಷಕರು ನರೇಗಾದಂತಹ ಕೆಲಸ ಮಾಡಿ ಬದುಕಿದ್ದಾರೆ. ಹಣ್ಣ ತರಕಾರಿ ಮಾರುತ್ತಿದ್ದಾರೆ. ಅದರೊಂದಿಗೆ ಇರುವ ಕೆಲಸ ಕಳೆದುಕೊಂಡು ಪೋಷಕರೂ ಆರ್ಥಿಕವಾಗಿ ಜರ್ಝರಿತರಾಗಿದ್ದಾರೆ. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆಯಿಂದಾಗಿ ನಾವು ಶೇ. 30ರಷ್ಟು ಶುಲ್ಕ ಕಡಿತದ ನಿರ್ಧಾರ ಮಾಡಿದ್ದೆವು ಎಂದರು.
ನಾನಂತೂ ಶಿಕ್ಷಕರ ವಿರುದ್ಧವಿಲ್ಲ
ಖಾಸಗಿ ಶಾಲಾ ಶಿಕ್ಷಕರಿಗೆ ಯಾವುದಾದರೂ ರೂಪದಲ್ಲಿ ನೆರವಾಗಬೇಕೆಂದು ನಾವು ಏನೆಲ್ಲಾ ಪ್ರಯತ್ನ ಮಾಡಿದೆವು. ಈ ಕುರಿತು ಸರ್ಕಾರಿ ನೌಕರರ ಸಂಘ, ಆರ್ಥಿಕ ಇಲಾಖೆಯೊಂದಿಗೂ ಮಾತನಾಡಿದೆವು. ಆರ್ಥಿಕ ಪರಿಸ್ಥಿತಿಯ ದುಸ್ಥಿತಿಯ ಹಿನ್ನೆಲೆಯಲ್ಲಿ ಅದಾವದೂ ಈ ವರ್ಷ ಕೈಗೂಡಲಿಲ್ಲ. ಕಾರ್ಮಿಕ ಇಲಾಖೆ ಮೂಲಕವೂ ಕೊನೆಗೆ ಫುಡ್ ಕಿಟ್ ನೀಡಲು ಸಹ ಚಿಂತಿಸಿದೆವು. ಕಾರ್ಮಿಕ ಇಲಾಖೆ ನಿಯಮಗಳು ಅದಕ್ಕೆ ಪೂರಕವಾಗಿರಲಿಲ್ಲ. ನಾನಂತೂ ಶಿಕ್ಷಕರ ವಿರುದ್ಧವಿಲ್ಲ. ನನಗೆ ಶಿಕ್ಷಕರ ಸಮಸ್ಯೆ ಬೇರೆಲ್ಲರಿಗಿಂತಲೂ ಚೆನ್ನಾಗಿ ಅರಿವಿದೆ. ಶುಲ್ಕ ವಿಚಾರದಲ್ಲಿ ನನಗಾಗಲಿ, ಸರ್ಕಾರಕ್ಕಾಗಿ ಯಾವುದೇ ಪ್ರತಿಷ್ಠೆಯಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.
ಪೋಷಕರ ಮತ್ತು ಶಾಲೆಗಳ ಮಧ್ಯದ ನಂಬುಗೆ ಮತ್ತು ವಿಶ್ವಾಸಗಳು ಈಗ ಇಲ್ಲವಾಗಿರುವುದರಿಂದ ಇಬ್ಬರೂ ಒಂದು ಸರ್ವಸಮ್ಮತ ನಿರ್ಧಾರಕ್ಕೆ ಬರಲಿಲ್ಲವಾದ್ದರಿಂದ ಅನಿವಾರ್ಯವಾಗಿ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು ಎಂದು ಸುರೇಶ್ ಕುಮಾರ್ ತಿಳಿಸಿದರು.
ಪೋಷಕರ ಸಂಘಟನೆಗಳಿಲ್ಲ!
ಶಿಕ್ಷಕರು ಮತ್ತು ಖಾಸಗಿ ಆಡಳಿತ ಮಂಡಳಿಗಳ ಸಂಘಟನೆಗಳಿವೆ. ಆದರೆ ಪೋಷಕರು ಸಂಘಟಿತರಾಗಿದ್ದರೆ ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಮ್ಮನ್ನು ಕೇಳುತ್ತಿದ್ದರು. ರಾಜ್ಯದ ಒಟ್ಟಾರೆ ಎಲ್ಲ ಪೋಷಕರು ಬರಲು ಸಾಧ್ಯವಾಗಿಲ್ಲ. ನೀವೆಲ್ಲ ಸಂಘಟಿತರಾಗಿ ಬಂದಿದ್ದೀರಿ. ನಾವು ಅಸಂಘಟಿತ ಸಮುದಾಯದ ಪೋಷಕರನ್ನೂ ಗಮನದಲ್ಲಿಟ್ಟುಕೊಳ್ಳಬೇಕಿದೆ. ಹಾಗಂತ ನಾವು ಶಿಕ್ಷಕರ ವಿರುದ್ಧವಿದ್ದೇವೆ ಎಂದೂ ಅರ್ಥವಲ್ಲ ಎಂಬುದನ್ನು ತಾವೆಲ್ಲರೂ ಗಮನಿಸಬೇಕು. ನೀವು ನಿಮ್ಮ ವಿದ್ಯಾರ್ಥಿಗಳ ಪೋಷಕರೊಂದಿಗೆ ಕುಳಿತು ಮಾತನಾಡಿಕೊಂಡು ಸೂತ್ರವೊಂದನ್ನು ತಂದರೆ ನನ್ನದೇನೂ ಅಭ್ಯಂತರವಿಲ್ಲ ಎಂದು ಸಚಿವರು ಹೇಳಿದರು.
ವಿದ್ಯಾರ್ಥಿ ಆತ್ಮಹತ್ಯೆ ಯತ್ನ
ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗದ ಕೋರಮಂಗಲದ ವಿದ್ಯಾರ್ಥಿಗೆ ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರಿಂದ ತರಗತಿಯಲ್ಲಿ ಬಹಿರಂಗವಾಗಿ ಪ್ರಾಚಾರ್ಯರು ಮಾಡಿದ ಅವಮಾನದಿಂದಾಗಿ ವಿದ್ಯಾರ್ಥಿಯೊಬ್ಬ ನೇಣಿಗೆ ಕೊರಳು ಕೊಟ್ಟಿದ್ದನ್ನು ಸ್ಮರಿಸಿದ ಸಚಿವರು, ನಾವು ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಒಂದು ನಿರ್ಧಾರಕ್ಕೆ ಬಂದೆವು ಎಂದು ಸುರೇಶ್ ಕುಮಾರ್ ಹೇಳಿದರು.
ಸಮಸ್ಯೆಯಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಂದ ಹಿತವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ಸೂಕ್ತ ಕಾರ್ಯಕ್ರಮ ರೂಪಿಸಲು ಆಲೋಚಿಸುತ್ತಿದೆ. ಈ ಸಮುದಾಯದ ಹಿತವನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.
ಸುರಕ್ಷಿತ ನಿಯಮಗಳ ಸರಳೀಕರಣ
ನವೀಕರಣಕ್ಕೆ ವಿದ್ಯಾರ್ಥಿ ಸುರಕ್ಷತೆ ಮತ್ತು ಕಟ್ಟಡ ಸುಸ್ಥಿರ ಪ್ರಮಾಣ ಪತ್ರಗಳನ್ನು ಪಡೆಯುವುದು ನಮ್ಮ ಸರ್ಕಾರ ಬಂದ ಮೇಲೆ ಮಾಡಿದ ಆದೇಶವಲ್ಲ. ತಮಿಳುನಾಡಿನ ಕುಂಭಕೋಣಂ ಮತ್ತು ಗುಜರಾತಿನ ವಡೋದರ ಶಾಲೆಗಳ ವಿದ್ಯಾರ್ಥಿಗಳು ಶಾಲಾ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಮಾಡಿದ ಆದೇಶದ ಹಿನ್ನೆಲೆಯಲ್ಲಿ ಸರ್ಕಾರ ಅದನ್ನು ಪಾಲಿಸಬೇಕಿದೆ. ಆದರೂ ತಮ್ಮ ಬೇಡಿಕೆಯಂತೆ ಅವುಗಳನ್ನು ಯಾವ ರೀತಿಯಲ್ಲಿ ಸರಳೀಕರಿಸಬೇಕೆಂಬುದನ್ನು ನಾವೆಲ್ಲ ಇನ್ನೊಂದೆರಡು ದಿನಗಳಲ್ಲಿ ಕುಳಿತು ಚರ್ಚೆ ಮಾಡೋಣ. ಅದಕ್ಕಾಗಿ ಆನ್ಲೈನ್ನಲ್ಲಿ ಎರಡೂ ಇಲಾಖೆಗಳ ಕ್ಲಿಯರೆನ್ಸ್ ಪಡೆದುಕೊಳ್ಳುವಂತೆ ಮಾಡುವ ಚಿಂತನೆಯೂ ಸರ್ಕಾರದ ಮುಂದಿದೆ ಎಂದು ಸಚಿವರು ಹೇಳಿದರು.
ಆರ್ಟಿಇ ಶುಲ್ಕ ಮರುಪಾವತಿ
ಹಾಗೆಯೇ ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ತಡವಾಗಿ ಆರಂಭವಾಗಿರುವುದು ಮತ್ತು ಮಕ್ಕಳ ಶಾಲಾ ಹಾಜರಾತಿಯನ್ನು ಪೋಷಕರು ಮತ್ತು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟು ಪ್ರಸ್ತುತ ವರ್ಷ ಹಾಜರಾತಿ ಕಡ್ಡಾಯವಲ್ಲವೆಂದು ಶಿಕ್ಷಣ ಇಲಾಖೆಯೇ ಆದೇಶಿಸಿರುವ ಹಿನ್ನೆಲೆಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳ ಹಿತದೃಷ್ಟಿಯಿಂದ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಮತ್ತು ಆರ್.ಟಿ.ಇ. ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಹಾಜರಾತಿ ಮತ್ತು ದಾಖಲಾತಿ ಕುರಿತು ನಿಯಮದಲ್ಲಿ ಸಡಿಲಿಕೆ ಮಾಡಿ ವಿನಾಯ್ತಿ ನೀಡಲೂ ಸೂಚನೆ ನೀಡಲಾಗಿದೆ ಎಂದರು.
ಶಾಲಾರಂಭದಲ್ಲಿ ನಾವೇ ಮುಂದು
ಆಂಧ್ರ ಮತ್ತು ಪಂಜಾಬ್ ಹೊರತುಪಡಿಸಿದರೆ ಆರನೇ ತರಗತಿಯಿಂದ ಶಾಲೆ ಆರಂಭ ಮಾಡಿರುವುದು ನಮ್ಮ ರಾಜ್ಯ ಮಾತ್ರ. ನಾವು ಎಲ್ಲರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಇನ್ನೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಒಂದನೇ ತರಗತಿಯಿಂದ ಶಾಲೆ ಆರಂಭಿಸಲೂ ಚಿಂತನೆ ನಡೆಸಿದ್ದೇವೆ. ಹಾಗೆಯೇ ಮಕ್ಕಳ ಮತ್ತು ಶಾಲೆಗಳ ಹಿತದೃಷ್ಟಿಯಿಂದ ಶಾಲಾ ದಾಖಲಾತಿ ಸಮಯವನ್ನೂ ವಿಸ್ತರಿಸಲಾಗಿದೆ. ಇದೆಲ್ಲವನ್ನೂ ನಮ್ಮ ಆಡಳಿತ ಮಂಡಳಿಗಳೂ ಗಮನಿಸಬೇಕಿದೆ ಎಂದೂ ಸುರೇಶ್ ಕುಮಾರ್ ಹೇಳಿದರು.
Recommended Video
ಮಾತುಕತೆಗೆ ನಾನು ಮುಕ್ತ!
ನಾನಂತೂ ಯಾವುದೇ ರೀತಿಯ ಮಾತುಕತೆಗೆ ಮುಕ್ತನಾಗಿದ್ದೇನೆ. ಆದರೆ ನೀವು ಮಕ್ಕಳ ಹಿತದೃಷ್ಟಿಯಿಂದ ಪೋಷಕರೊಂದಿಗೆ ಮಾತನಾಡಿಕೊಂಡು ಸೂತ್ರವೊಂದನ್ನು ತಂದರೆ ನಾನಂತೂ ಎಲ್ಲರಿಗೂ ಹಿತವಾಗುವಂತಹ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ. ಆದರೆ ಈ ಸಂದರ್ಭದಲ್ಲಿ ಆರ್ಥಿಕವಾಗಿ ಜರ್ಝರಿತವಾಗಿರುವ ಪೋಷಕರ ಹಿತ ಮತ್ತು ನಮ್ಮ ಶಿಕ್ಷಕರ ಹಿತಗಳೂ ಮುಖ್ಯವಾಗಬೇಕಿದೆ.
ನಮ್ಮ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸಬೇಕೆಂಬುದು ನಮ್ಮ ಹಾಗೂ ನಿಮ್ಮ ಉದ್ದೇಶವಾಗಿದೆ. ಅದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯೋಣ ಎಂದು ಸುರೇಶ್ ಕುಮಾರ್ ಹೇಳಿದರು.