ಶಾಲಾ ಶುಲ್ಕ ಸಮಸ್ಯೆ ಪರಿಹಾರಕ್ಕೆ ವಿಶೇಷ ಆದೇಶ ಮಾಡಿದ ಸುರೇಶ್ ಕುಮಾರ್
ಬೆಂಗಳೂರು, ಫೆ. 04: ಕೊರೊನಾ ವೈರಸ್ ಸಂಕಷ್ಟದ ಮಧ್ಯೆ ಇದೀಗ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿವೆ. ಜೊತೆಗೆ ಸಮಸ್ಯೆಗಳು ಎದುರಾಗಿವೆ. ಶಾಲಾ ಶುಲ್ಕದ ವಿಚಾರವಾಗಿ ವಿದ್ಯಾರ್ಥಿಗಳ ಪೋಷಕರು ಹಾಗೂ ಶಾಲಾ ಆಡಳಿತ ಮಧ್ಯೆ ಸಮರಕ್ಕೆ ಕಾರಣವಾಗಿದೆ. ಕೊರೊನಾ ವೈರಸ್ನಿಂದಾಗಿ ಶಾಲಾ ಆಡಳಿತ ಮಂಡಳಿಗಳು ಹಾಗೂ ವಿದ್ಯಾರ್ಥಿಗಳು ಪೋಷಕರು ಆದಾಯವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಆದಾಯವಿಲ್ಲದೆ ಮಕ್ಕಳ ಶಾಲಾ ಶುಲ್ಕ ಭರಿಸುವುದು ಹೇಗೆ ಎಂಬುದು ಪೋಷಕರ ಪ್ರಶ್ನೆ. ಶುಲ್ಕ ಕಟ್ಟದಿದ್ದರೆ ನಾವು ಶಿಕ್ಷಕರಿಗೆ ವೇತನ ಕೊಡುವುದು ಹೇಗೆ? ಎಂಬುದು ಶಾಲಾ ಆಡಳಿತ ಮಂಡಳಿಗಳ ವಾದ.
ಇಬ್ಬರ ವಾದಗಳು ಕೂಡ ಅರ್ಹವಾಗಿವೆ. ಆದರೆ ಶಾಲೆಗಳು ಬಂದ್ ಆಗಿದ್ದಾಗ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ವೇತನ ಪಾವತಿ ಮಾಡಿ ಎಂಬುದು ಕೂಡ ಸತ್ಯ. ಹೀಗಾಗಿ ಈ ವಿವಾದವನ್ನು ಪರಿಹರಿಸಲು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮಹತ್ವದ ನಿರ್ಧಾರ ಮಾಡಿದ್ದಾರೆ. ಆ ಮೂಲಕ ಸಮಸ್ಯೆ ಪರಿಹರಿಸಲು ಮುಂದಾಗಿದ್ದಾರೆ.
ಸಮಿತಿಗಳ ರಚನೆ
ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳ ಶುಲ್ಕಗಳ ಕುರಿತ ಪೋಷಕರ ತರಕಾರುಗಳ ಪರಿಹಾರಕ್ಕೆ ಅಧಿಕಾರಯುಕ್ತ ಸಮಿತಿಗಳನ್ನು ರಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್-19ರ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು 2019-20ನೇ ಸಾಲಿನ ಬೋಧನಾ ಶುಲ್ಕದ ಶೇ. 70ರಷ್ಟು ಮೊತ್ತವನ್ನು ಒಟ್ಟಾರೆ ಶುಲ್ಕವನ್ನಾಗಿ ಪಡೆಯಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಜ. 29ರಂದು ಆದೇಶ ಹೊರಡಿಸಿದೆ. ಆ ಆದೇಶದ ಭಾಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಈ ಸಂಬಂಧದ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಯುಕ್ತ ಸಮಿತಿಗಳನ್ನು ರಚಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಲಯವಾರು ಸಮಿತಿಗಳು
ಬೆಂಗಳೂರಿನಲ್ಲಿ 6 ವಲಯಗಳಲ್ಲಿ ಪ್ರತ್ಯೇಕ ಸಮಿತಿಗಳು, ಮೈಸೂರು ಜಿಲ್ಲೆಯಲ್ಲಿ 2 ಸೇರಿದಂತೆ ರಾಜ್ಯದ ಎಲ್ಲ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಂದೊಂದು ಸಮಿತಿಯನ್ನು ರಚಿಸಲಾಗಿದೆ. ಇಲಾಖಾ ನಿರ್ದೇಶಕರು, ಸಹ ನಿರ್ದೇಶಕರು, ಡಿಡಿಪಿಐ, ಡಯಟ್ ಪ್ರಾಚಾರ್ಯರು, ಡಯಟ್ನ ಹಿರಿಯ ಉಪನ್ಯಾಸಕರನ್ನೊಳಗೊಂಡ ವಿವಿಧ ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದೆ.
ರಾಜ್ಯದ ಎಲ್ಲ ಶೈಕ್ಷಣಿಕ ಜಿಲ್ಲೆಗಳಲ್ಲಿ ಸಮಿತಿಗಳನ್ನು ರಚಿಸುವ ಮೂಲಕ ಶಾಲಾ ಶುಲ್ಕದ ಸಮಸ್ಯೆ ಪರಿಹರಿಸಲು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮುಂದಾಗಿದ್ದಾರೆ.
ಪೋಷಕರ ಸಮಸ್ಯೆ
ಪೋಷಕರು ಪ್ರಸ್ತುತ ವರ್ಷದ ಶುಲ್ಕ ಪಾವತಿಯ ಸಂಬಂಧದ ಸಮಸ್ಯೆಗಳನ್ನು ಈ ಸಮಿತಿಯ ಮುಂದೆ ಪ್ರಸ್ತಾಪಿಸಿ ಪರಿಹರಿಸಕೊಳ್ಳಬಹುದೆಂದು ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಇಂತಹ ಸಮಸ್ಯೆಗಳ ಸಂದರ್ಭದಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸುವ ಸಂಬಂಧದಲ್ಲಿ ಪೋಷಕರು, ಶಾಲೆಗಳು ಯಾವ ಕ್ರಮಗಳನ್ನು ಅನುಸರಿಸಬೇಕು ಮತ್ತು ಅರ್ಜಿ ಸ್ವೀಕರಿಸುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮಿತಿಗಳ ಕರ್ತವ್ಯಗಳ ಕುರಿತು ಸವಿವರ ಕ್ರಮಗಳನ್ನು ಸುತ್ತೋಲೆಯಲ್ಲಿ ವಿವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Recommended Video
ಶಿಕ್ಷಣ ಸಂಸ್ಥೆಗಳು ನಿಲುವು
ಈ ಶೈಕ್ಷಣಿಕ ಸಾಲಿನ ಶುಲ್ಕವನ್ನು ಭರಿಸುವಂತೆ ಈಗಾಗಲೇ ಶಿಕ್ಷಣ ಸಂಸ್ಥೆಗಳು ಪೋಷಕರ ಮೇಲೆ ಒತ್ತಡ ಹಾಕುತ್ತಿವೆ. ಬಹುತೇಕ ಕಡೆಗಳಲ್ಲಿ ಸಂಪೂರ್ಣ ಶುಲ್ಕವನ್ನು ಪೋಷಕರು ಕಟ್ಟಿದ್ದಾರೆ. ಈಗ ಅದನ್ನು ಹಿಂದಕ್ಕೆ ಪಡೆಯಲು ಅವಕಾಶವಿದೆ ಎಂದು ಸರ್ಕಾವೇನೊ ಆದೇಶ ಮಾಡಿದೆ. ಆದರೆ ಅದು ಆಗದ ಕೆಲಸ ಎಂಬುದು ಜನರ ಅಭಿಪ್ರಾಯ.
ಹೀಗಾಗಿ ಶಿಕ್ಷಣ ಸಚಿವರ ಆದೇಶದ ಅನ್ವಯ ಸಮಿತಿಗಳು ರಚನೆಗೊಂಡಲ್ಲಿ ಸ್ವಲ್ಪ ಮಟ್ಟಿಗಿನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬುದು ಪೋಷಕರು ಹಾಗೂ ಪಾಲಕರ ಅಭಿಪ್ರಾಯ. ಆದರೆ ಸಮಿತಿಗಳು ಕಟ್ಟುನಿಟ್ಟಾಗಿ ಕ್ರಮಕ್ಕೆ ಮುಂದಾದಲ್ಲಿ ಮಾತ್ರ ಶುಲ್ಕದ ವಿಚಾರವಾಗಿ ಸರ್ಕಾರ ಮಾಡಿರುವ ಆದೇಶಕ್ಕೆ ಕಿಮ್ಮತ್ತು ಬರಲಿದೆ. ಹೀಗಾಗಿ ಇದೀಗ ರಚನೆ ಆಗಿರುವ ಸಮಿತಿಗಳ ಮೇಲೆ ಮಹತ್ವದ ಜವಾಬ್ದಾರಿಯಿದೆ.