'ಪಕ್ಕೆಲುಬು' ವಿಡಿಯೋ ಹರಿಬಿಟ್ಟ ಶಿಕ್ಷಕನ ವಿರುದ್ಧ ಶಿಕ್ಷಣ ಸಚಿವ ಗರಂ
ಬೆಂಗಳೂರು, ಜನವರಿ 09: 'ಪಕ್ಕೆಲುಬು' ಎಂದು ಉಚ್ಛಾರಿಸಲು ಸಾಧ್ಯವಾಗದೆ 'ಕಪ್ಪೆಬುಲು' ಎಂದು ಉಚ್ಛರಿಸುತ್ತಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೋವನ್ನು ಹಲವು ಮಂದಿ ಶೇರ್ ಮಾಡಿದ್ದಾರೆ. ಕೆಲವರು ಹಾಸ್ಯ ಮಾಡಿ ನಕ್ಕಿದ್ದಾರೆ. ಈ ವಿಡಿಯೋ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೂ ಬಂದಿದ್ದು, ವಿದ್ಯಾರ್ಥಿಯನ್ನು ಅಪಹಾಸ್ಯಕ್ಕೆ ವಸ್ತು ಮಾಡಿಕೊಂಡ ಶಿಕ್ಷಕನ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಮೋದಿ ಜೊತೆ ಸಂವಾದಕ್ಕೆ ರಾಜ್ಯದ ಸರ್ಕಾರಿ ಶಾಲೆ ಬಾಲಕಿ ಆಯ್ಕೆ
ವಿದ್ಯಾರ್ಥಿ ಉಚ್ಛಾರಣೆ ದೋಷದಿಂದ 'ಪಕ್ಕೆಲುಬು' ಶಬ್ದ ಉಚ್ಛಾರಣೆ ಮಾಡಲಾಗದೆ ಕಷ್ಟಪಡುತ್ತಿರುವುದನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಶಿಕ್ಷಕನನ್ನು ಪತ್ತೆ ಹಚ್ಚಬೇಕೆಂದು ಆತನ ವಿರುದ್ಧ ಸೈಬರ್ ಕ್ರೈಂ ವಿಭಾಗದಲ್ಲಿಯೂ ದೂರು ನೀಡಬೇಕೆಂದು ಅವರು ಶಿಕ್ಷಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪತ್ರ ಬರೆದಿರುವ ಸುರೇಶ್ ಕುಮಾರ್
ವಿಡಿಯೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪತ್ರ ಬರೆದಿರುವ ಸಚಿವ ಸುರೇಶ್ ಕುಮಾರ್, ವಿದ್ಯಾರ್ಥಿಗಳು ಉಚ್ಛಾರಣೆ ದೋಷ ಇರುವುದು ಸಾಮಾನ್ಯ ಆದರೆ ಅದನ್ನು ತಮಾಷೆಯ ವಸ್ತುವಾಗಿ ಬಳಸಿರುವುದು ಆ ಶಿಕ್ಷಕ ಮಾಡಿರುವ ಅಪರಾಧವೆಂದು ಆಕ್ರೋಶ ಹೊರಹಾಕಿದ್ದಾರೆ.
ಶಾಲಾ ಮುಖ್ಯಸ್ಥರ ಮೇಲೂ ಕ್ರಮಕ್ಕೆ ಸೂಚನೆ
ವಿಡಿಯೋ ಚಿತ್ರೀಕರಿಸಿದ ಶಿಕ್ಷಕನನ್ನು ಪತ್ತೆ ಮಾಡಿ ಆತನ ಮೇಲೆ, ಆ ಶಾಲೆಯ ಮುಖ್ಯಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವ ಸುರೇಶ್ ಕುಮಾರ್, ಇನ್ನು ಮುಂದೆ ವಿದ್ಯಾರ್ಥಿಗಳ ಕಲಿಕಾ ಹಿನ್ನಡೆಯನ್ನು ಹಾಸ್ಯದ ವಸ್ತುವನ್ನಾಗಿ ಮಾಡಿಕೊಳ್ಳುವುದು, ವಿಡಿಯೋ ಚಿತ್ರಿಸಿ ಹಂಚಿಕೊಳ್ಳುವುದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಿಡಿಯೋ: ಸರ್ಕಾರಿ ಶಾಲೆಯ ನೂತನ ಕಲಿಕಾ ಪ್ರಯೋಗ, ವರ್ಣಮಾಲೆಗೆ ಗಾದೆ ಮಾತು
'ಪಕ್ಕೆಲುಬು' ಶಬ್ದ ಉಚ್ಛರಿಸಲು ಕಷ್ಟಪಡುತ್ತಿರುವ ಬಾಲಕ
ವಿಡಿಯೋದಲ್ಲಿ ವಿದ್ಯಾರ್ಥಿಯು ಅಳುತ್ತಾ 'ಪಕ್ಕೆಲುಬು' ಪದವನ್ನು ಉಚ್ಛರಿಸಲು ಶ್ರಮಪಡುತ್ತಿದ್ದಾನೆ. ವಿಡಿಯೋ ರೆಕಾರ್ಡ್ ಮಾಡಿರುವ ಶಿಕ್ಷಕ ಪದವನ್ನು ಉಚ್ಛರಿಸುವಂತೆ ಬಲವಂತ ಹೇರುತ್ತಿದ್ದಾನೆ. ಜೊತೆಗೆ ಬೈಯುತ್ತಿದ್ದಾನೆ ಸಹ.
ವಿಡಿಯೋ ಮಾಡಿದವರ ವಿರುದ್ದ ಆಕ್ರೋಶ
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ವಿಡಿಯೋ ಮಾಡಿದ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಕ್ಕಳ ಕಲಿಕಾ ಹಿಂದುಳಿಕೆಯನ್ನು ಹಾಸ್ಯದ ವಸ್ತುವಾಗಿ ತೋರಿಸಿದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರದ ನೆರಳೇ ಈ ಮಕ್ಕಳಿಗೆ ಕ್ಲಾಸ್ ರೂಂ; ಯರ್ರೇನಹಳ್ಳಿ ಸರ್ಕಾರಿ ಶಾಲೆ ಕಥೆಯಿದು