ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಮತ್ತೊಂದು ಮಾನವೀಯ ಮುಖ ಅನಾವರಣ!
ಬೆಂಗಳೂರು, ಫೆ. 01: ತಮ್ಮ ನಡುವಳಿಕೆ ಮೂಲಕ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮತ್ತೊಂದು ಮಾನವೀಯತೆಯ ಕೆಲಸ ಮಾಡಿದ್ದಾರೆ. ಸದಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪರವಾಗಿ ಯೋಚನೆ ಮಾಡುವ ಅವರು, ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಭೇಟಿಯಾಗಿದ್ದಾರೆ.
ಕೊರೊನಾ ವೈರಸ್ ಆರಂಭದಿಂದ ಹಿಡಿದು ಈವರಗೆ ಎಲ್ಲ ಇಲಾಖೆಗಳಿಗಿಂತ ಶಿಕ್ಷಣ ಇಲಾಖೆಯನ್ನು ಹೆಚ್ಚು ಕ್ರೀಯಾಶೀಲವಾಗಿರಿಸಿರುವ ಸುರೇಶ್ ಕುಮಾರ್ ಅವರ ಕಳಕಳಿಗೆ ಸಾಕ್ಷಿ. ಇದೀಗ ಕಷ್ಟಕಾಲದಲ್ಲಿನ ವಿದ್ಯಾರ್ಥಿನಿಯನ್ನು ಭೇಟಿ ಮಾಡುವ ಮೂಲಕ ಮತ್ತೊಮ್ಮೆ ತಮ್ಮ ನಡೆಯಿಂದ ಗಮನ ಸೆಳೆದಿದ್ದಾರೆ.
ಇಂದು ವಿಧಾನಸಭೆ ಕಲಾಪದ ಬಿಡುವಿಲ್ಲದ ಕೆಲಸದ ಮಧ್ಯೆಯೂ ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿನಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ವಿದ್ಯಾರ್ಥಿನಿಗೆ ಆತ್ಮವಿಶ್ವಾಸ ತುಂಬುವ ಮೂಲಕ ಮಾದರಿಯಾಗಿದ್ದಾರೆ.
ನಿಮ್ಹಾನ್ಸ್ನಲ್ಲಿ ಚಿಕಿತ್ಸೆ
ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ಬರೆಯಲು ತೆರಳುತ್ತಿದ್ದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕೆಂಗೇರಿ ಬಳಿ ರಸ್ತೆ ಅಪಘಾತಕ್ಕೊಳಗಾಗಿದ್ದರು. ತೀವ್ರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿಗೆ ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಲಾಗುತ್ತಿದೆ. ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯ ಆರೋಗ್ಯವನ್ನು ಸೋಮವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿಚಾರಿಸಿದರು.
ಇನ್ನೂ ಎರಡು ಶಸ್ತ್ರಚಿಕಿತ್ಸೆ ಆಗಬೇಕಿದೆ
ಅಪಘಾತದಿಂದಾಗಿ ವಿದ್ಯಾರ್ಥಿನಿ ಯಶಸ್ವಿನಿ ಎಂಬುವರಿಗೆ ಕತ್ತಿನ ಬೆನ್ನುಮೂಳೆಯ ಎರಡು ವರ್ಟೆಬ್ರಿಯಾಗಳು ತೀವ್ರವಾಗಿ ಘಾಸಿಗೊಳಾಗಿವೆ. ಹೀಗಾಗಿ ಎರಡು ಶಸ್ತ್ರ ಚಿಕಿತ್ಸೆಯ ಅಗತ್ಯವಿರುವುದರಿಂದ ಸದರಿ ವಿದ್ಯಾರ್ಥಿನಿಗೆ ಅಗತ್ಯವಿರುವ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಆಸ್ಪತ್ರೆಯ ನಿರ್ದೇಶಕರಿಗೆ ಸಚಿವ ಸುರೇಶ್ ಕುಮಾರ್ ಮನವಿ ಮಾಡಿಕೊಂಡರು.
ಆಸ್ಪತ್ರೆಗೆ ಬಂದ ಅಧಿಕಾರಿಗಳು
ಆಸ್ಪತ್ರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆಸಿದ ಸಚಿವರು, ವಿದ್ಯಾರ್ಥಿನಿಯ ಚಿಕಿತ್ಸೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಕ್ಷಣವೇ ಒಂದು ಲಕ್ಷ ರೂ. ನೀಡಬೇಕೆಂದು ಸ್ಥಳದಲ್ಲಿಯೇ ನಿರ್ದೇಶನ ನೀಡಿದರು. ಆಸ್ಪತ್ರೆಯಿಂದಲೇ ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸುರೇಶ್ ಕುಮಾರ್, ಸದರಿ ವಿದ್ಯಾರ್ಥಿನಿಯ ತಂದೆ ಸೆಕ್ಯೂರಿಟಿ ನೌಕರಿ ಮಾಡುತ್ತಿದ್ದು, ತೀವ್ರ ಬಡತನದಲ್ಲಿರುವುದರಿಂದ ಇಲಾಖೆ ವತಿಯಿಂದಲೂ ಸಾಧ್ಯವಾದಷ್ಟು ನೆರವು ನೀಡಬೇಕೆಂದು ಕೋರಿದರು. ನಗರ ಸಂಚಾರಿ ಜಂಟಿ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದಾಗ ಅವರೂ ಸಹ ಯಶಸ್ವಿನಿ ಚಿಕಿತ್ಸೆಗೆ ವೈಯಕ್ತಿಕವಾಗಿ ಸಹಾಯ ಮಾಡಲು ಮುಂದೆ ಬಂದರು.
Recommended Video
ನಿನ್ನ ಹೆಸರೇ ಯಶಸ್ವಿನಿ!
ಬಾಲಕಿಯನ್ನು ಮಾತನಾಡಿಸಿದ ಸುರೇಶ್ ಕುಮಾರ್, ಧೈರ್ಯವಾಗಿರು ಚಿಕಿತ್ಸೆ ಯಶಸ್ವಿಯಾಗಿ ನೀನು ಮೊದಲಿನಂತಾಗುತ್ತೀಯಾ, ನಿನ್ನ ಹೆಸರೇ 'ಯಶಸ್ವಿನಿ', ಚಿಕಿತ್ಸೆಯಲ್ಲಿ ಯಶಸ್ಸು ನಿನ್ನದಾಗುತ್ತದೆ. ಯಾವುದಕ್ಕೂ ಹೆದರ ಬೇಡ ಎಂದು ಧೈರ್ಯ ತುಂಬಿದರು. ಬಾಲಕಿಯ ತಂದೆ ತಾಯಿಯೊಂದಿಗೂ ಮಾತನಾಡಿದ ಸಚಿವರು, ತಮ್ಮ ಮಗಳು ಚೇತರಿಸಿಕೊಂಡು ಮೊದಲಿನಂತಾಗುತ್ತಾಳೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು.