ಅಪಘಾತಕ್ಕೀಡಾದ ವಿದ್ಯಾರ್ಥಿನಿಗೆ ಶಿಕ್ಷಣ ಸಚಿವ ಸುರೇಶ್ಕುಮಾರ್ ನೆರವಿನ ಹಸ್ತ!
ಬೆಂಗಳೂರು, ಫೆ. 02: ನಿಮ್ಹಾನ್ಸ್ನ ನ್ಯೋರೋ ಸೆಂಟರ್ ವಾರ್ಡ್ನಲ್ಲಿ ಮಂಗಳವಾರ ಒಂದು ಕ್ಷಣ ಮೌನದ ವಾತಾವರಣ. ಜೊತೆಗೆ ಸುತ್ತಲಿನವರ ಕಣ್ಣಾಲಿಗಳಲ್ಲಿ ನೀರು ತೊಟ್ಟಿಕ್ಕಿ ಕಣ್ಣೊರೆಸಿಕೊಳ್ಳುವಂತಾಗಿತ್ತು. ವಿಧಾನಮಂಡಲದ ಅಧಿವೇಶನ ಮಧ್ಯೆಯೇ ಬಿಡುವು ಮಾಡಿಕೊಂಡು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸತತ ಎರಡನೇ ದಿನವೂ ಆಸ್ಪತ್ರೆಯ ವಾರ್ಡ್ಗೆ ಭೇಟಿ ನೀಡಿ, ವಿದ್ಯಾರ್ಥಿನಿಯ ಹಣೆಯ ಮೇಲೆ ಕೈಯಿಟ್ಟು ಧೈರ್ಯ ಹೇಳಿ ಸಮಾಧಾನ ಪಡಿಸುತ್ತಿದ್ದರೆ, ಬಾಲಕಿಯ ಕಣ್ಣುಗಳಲ್ಲಿ ಆಶ್ರುಧಾರೆ.
ಬಿಗಿಯಾಗಿ ಸಚಿವರ ಕೈಹಿಡಿದುಕೊಂಡ ಬಾಲಕಿ ಯಶಸ್ವಿನಿ ನೀವು ಒಮ್ಮೆ ನಮ್ಮ ಶಾಲೆಗೆ ಬರಬೇಕೆಂದು ಕೇಳಿದಾಗ, ನೀನು ಗುಣಮುಖಳಾಗಿ ಶಾಲೆಗೆ ಹೋದ ತಕ್ಷಣ ನಾನು ನಿನ್ನನ್ನು ನೋಡಲು ನಿನ್ನ ಶಾಲೆಗೇ ಬರುತ್ತೇನೆ. ಆದಷ್ಟು ಬೇಗ ನೀನು ಗುಣಮುಖವಾಗು ಎಂದು ಸುರೇಶ್ ಕುಮಾರ್ ಅವರು ಧೈರ್ಯ ತುಂಬಿದರು.
ಅಪಘಾತಕ್ಕೀಡಾಗಿದ್ದ ವಿದ್ಯಾರ್ಥಿನಿ
ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ಬರೆಯಲು ತೆರಳುವಾಗ ಕೆಂಗೇರಿ ಬಳಿ ರಸ್ತೆ ಅಪಘಾತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡು ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುದ್ದಿ ತಿಳಿಯುತ್ತಲೇ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ, ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಬಾಲಕಿ ಚಿಕಿತ್ಸೆಗೆ ಒಂದು ಲಕ್ಷ ರೂ. ಮಂಜೂರು ಮಾಡುವಂತೆ ಆದೇಶಿಸಿದ್ದರು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಮತ್ತೊಂದು ಮಾನವೀಯ ಮುಖ ಅನಾವರಣ!
ಮಂಗಳವಾರ ಅಧಿಕಾರಿಗಳು ಸಿದ್ಧಪಡಿಸಿದ್ದ ಒಂದು ಲಕ್ಷ ರೂ. ಚೆಕ್ ತೆಗೆದುಕೊಂಡು ಯಾರಿಗೂ ಹೇಳದೇ ನೇರವಾಗಿ ತಾವೊಬ್ಬರೇ ಆಸ್ಪತ್ರೆಗೆ ತೆರಳಿದ ಸುರೇಶ್ ಕುಮಾರ್, ಬಾಲಕಿಯ ಕೈಲಿ ಚೆಕ್ ನೀಡಿ, ಆಕೆಯ ತಂದೆ ತಾಯಿಯರ ಬಳಿ ಮಾತನಾಡಿ ಸಮಾಧಾನ ಪಡಿಸಿದರು.
ವಿದ್ಯಾರ್ಥಿನಿಗೆ ನೆರವಿನ ಹಸ್ತ
ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಬಾಲಕಿಯ ತಂದೆ ಸೆಕ್ಯೂರಿಟಿ ಉದ್ಯೋಗ ಮಾಡುತ್ತಿದ್ದು, ಆರ್ಥಿಕವಾಗಿ ದುರ್ಬಲರಿರುವುದರಿಂದ ಬಾಲಕಿ ನೆರವಿಗೆ ಮಾಡಬೇಕೆಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದರು.
ಇಂದು ಈ ಕುರಿತು ಬಾಲಕಿಯ ಪೋಷಕರನ್ನು ವಿಚಾರಿಸಿದರು. ಆಸ್ಪತ್ರೆಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಭೇಟಿ ನೀಡಿ ವಿವರ ಪಡೆದುಕೊಂಡು ಹೋಗಿರುವುದಾಗಿ ಸುರೇಶ್ ಕುಮಾರ್ ಅವರ ಗಮನಕ್ಕೆ ತಂದರು. ಸಚಿವರಿಂದ ವಿಷಯ ತಿಳಿದುಕೊಂಡಿದ್ದ ನಗರ ಸಂಚಾರಿ ಜಂಟಿ ಪೊಲೀಸ್ ಆಯುಕ್ತರೂ ಬಾಲಕಿ ಯಶಸ್ವಿನಿ ಚಿಕಿತ್ಸೆಗೆ ತಮ್ಮ ಕೈಲಾದ ಧನಸಹಾಯ ಮಾಡಿದ್ದಾರೆಂದು ಬಾಲಕಿಯ ತಂದೆ ತಿಳಿಸಿದರು.
ಸೋಮವಾರ ಭೇಟಿ ಮಾಡಿದ್ದ ಸಚಿವರು
ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ಬರೆಯಲು ತೆರಳುತ್ತಿದ್ದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕೆಂಗೇರಿ ಬಳಿ ರಸ್ತೆ ಅಪಘಾತಕ್ಕೊಳಗಾಗಿದ್ದರು. ತೀವ್ರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿಗೆ ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಲಾಗುತ್ತಿದೆ. ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯ ಆರೋಗ್ಯವನ್ನು ಸೋಮವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿಚಾರಿಸಿದ್ದರು. ಅಪಘಾತದಿಂದಾಗಿ ವಿದ್ಯಾರ್ಥಿನಿ ಯಶಸ್ವಿನಿ ಎಂಬುವರಿಗೆ ಕತ್ತಿನ ಬೆನ್ನುಮೂಳೆಯ ಎರಡು ವರ್ಟೆಬ್ರಿಯಾಗಳು ತೀವ್ರವಾಗಿ ಘಾಸಿಗೊಳಾಗಿವೆ. ಹೀಗಾಗಿ ಎರಡು ಶಸ್ತ್ರ ಚಿಕಿತ್ಸೆಯ ಅಗತ್ಯವಿರುವುದರಿಂದ ಸದರಿ ವಿದ್ಯಾರ್ಥಿನಿಗೆ ಅಗತ್ಯವಿರುವ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಆಸ್ಪತ್ರೆಯ ನಿರ್ದೇಶಕರಿಗೆ ಸಚಿವ ಸುರೇಶ್ ಕುಮಾರ್ ಮನವಿ ಮಾಡಿಕೊಂಡಿದ್ದರು.
Recommended Video
ಗದ್ಗದಿತರಾದ ಬಾಲಕಿ ಪೋಷಕರು
ತಮ್ಮ ಮಗಳನ್ನು ನೋಡಲು ಸತತ ಎರಡನೇ ದಿನವೂ ಬಂದುದಲ್ಲದೇ ತಮ್ಮ ಇಲಾಖೆಯ ಒಂದು ಲಕ್ಷ ರೂ.ಗಳ ಚೆಕ್ ತಂದು ಮಗಳಿಗೆ ಮತ್ತೊಮ್ಮೆ ಸಮಾಧಾನ ಹೇಳಿದ್ದರಿಂದ ಬಾಲಕಿಯ ಪೋಷಕರಿಗೆ ಕಣ್ಣಾಲಿಗಳು ತುಂಬಿ ಬಂದು ಗಂಟಲು ಗದ್ಗದಿತವಾಗಿ ಮಾತೇ ಹೊರಡದಂತಾದರು.
ಇಡೀ ವಾರ್ಡ್ನ ಪೋಷಕರು, ವೈದ್ಯರು, ದಾದಿಯರು ಸಚಿವರ ಮಾನವೀಯ ವ್ಯಕ್ತಿತ್ವಕ್ಕೆ ಮಾರು ಹೋದರು. ನಂತರ ಆ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟ ಪುಟ್ಟ ಮಕ್ಕಳ ಆರೋಗ್ಯ ವಿಚಾರಿಸಿದರು. ನಿಮ್ಹಾನ್ಸ್ ನಿರ್ದೇಶಕ ಡಾ. ಗುರುರಾಜ್, ನಿವಾಸಿ ವೈದ್ಯಾಧಿಕಾರಿ ಡಾ. ಶ್ರೀಧರ್, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.