ಕೋಲಾರದಲ್ಲಿ ಜಲಾಶಯ ನಿರ್ಮಾಣಕ್ಕೆ ತಗಾದೆ: ತಮಿಳುನಾಡಿಗೆ ಮುಖಭಂಗ
ನವದೆಹಲಿ, ನವೆಂಬರ್ 14: ಕೋಲಾರ ಮಾಲೂರು ಬಳಿ ಪೆನ್ನಾರ್ ನದಿಗೆ ನಿರ್ಮಿಸಲಾಗುತ್ತಿರುವ ಮಾರ್ಕಂಡೇಯ ಜಲಾಶಯ ಕಾಮಗಾರಿಗೆ ತಗಾದೆ ವ್ಯಕ್ತಪಡಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ತಿರಸ್ಕರಿಸಿದೆ.
ಯರಗೋಳ ಗ್ರಾಮದ ಬಳಿ ತಮಿಳುನಾಡಿಗೆ ನೈಸರ್ಗಿಕವಾಗಿ ಹರಿದುಬರುವ ಪೆನ್ನಾರ್ ಕಣಿವೆ ನೀರನ್ನು ಮಾರ್ಕಂಡೇಯ ಜಲಾಶಯ ಯೋಜನೆ ಮೂಲಕ ತಡೆಯಲಾಗುತ್ತಿದೆ ಎಂದು ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.
ಕೋಲಾರ ಜಿಲ್ಲೆಯಲ್ಲಿ 240 ಕೋಟಿ ವೆಚ್ಚದಲ್ಲಿ ಕರ್ನಾಟಕ ಮಾರ್ಕಂಡೇಯ ಜಲಾಶಯ ಯೋಜನೆಯನ್ನು ಆರಂಭಿಸುತ್ತಿದೆ. ಇದರಿಂದ ತಮಿಳುನಾಡಿನ ಆರು ಜಿಲ್ಲೆಗಳಿಗೆ ಹರಿಯುವ ಪೆನ್ನಾರ್ ನದಿಯ ಹರಿವನ್ನು ತಡೆಯಲಾಗುತ್ತಿದೆ. ಈ ಯೋಜನೆಯಿಂದ ನಮ್ಮ ಜಿಲ್ಲೆಗಳ ಆ ಭಾಗದ ಜನರ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳಿಗೆ ತೊಂದರೆಯಾಗಲಿದೆ. ಕೆ.ಸಿ. ವ್ಯಾಲಿ, ಕಾವೇರಿ ಮತ್ತು ಪೆನ್ನಾರ್ ಯೋಜನೆಗಳಿಂದ ನದಿಗಳ ಪಾತ್ರ ಕಿರಿದಾಗುತ್ತಿದೆ. ಈ ಯೋಜನೆ ಆರಂಭಿಸುವ ಮುನ್ನ ಕರ್ನಾಟಕ ನಮ್ಮ ಅನುಮತಿ ಪಡೆದುಕೊಳ್ಳಬೇಕು ಎಂದು ತಮಿಳುನಾಡು ಪ್ರತಿಪಾದಿಸಿತ್ತು.
ತಮಿಳುನಾಡಿನ ತಕರಾರನ್ನು ಪರಿಶೀಲಿಸಿದ ನ್ಯಾಯಮೂರ್ತಿ ಉದಯ್ ಲಲಿತಾ ಅವರ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿತು.