ಮಡೆಸ್ನಾನ ಪದ್ದತಿ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ನವದೆಹಲಿ, ಸೆ 24: ಪವಿತ್ರ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಚಾಲ್ತಿಯಲ್ಲಿರುವ ನಿರ್ದಿಷ್ಟ ಸಮುದಾಯದ ಜನ ಉಂಡುಬಿಟ್ಟ ಎಂಜಲೆಲೆಯ ಮೇಲೆ ಭಕ್ತಾದಿಗಳು ನಡೆಸುವ ಉರುಳು ಸೇವೆ (ಮಡೆ ಮಡೆಸ್ನಾನ) ಪದ್ದತಿಯನ್ನು ನಿಲ್ಲಿಸಬೇಕೆಂದು ರಾಜ್ಯ ಉಚ್ಚ ನ್ಯಾಯಾಲಯ ನೀಡಿದ್ದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ.
ದೇವರ ನೈವೇದ್ಯ ಹಾಕಲಾದ ಎಲೆಗಳ ಮೇಲೆ ಭಕ್ತಾದಿಗಳು ಉರುಳುವ ಪದ್ದತಿಯನ್ನು ಅಳವಡಿಸಿಕೊಳ್ಳಲಿ. ಗರ್ಭಗುಡಿಯಲ್ಲಿ ದೇವರಿಗೆ ಅನ್ನವನ್ನು ನೈವೇದ್ಯ ನೀಡಿ ನಂತರ ನೈವೇದ್ಯವನ್ನು ದೇವಾಲಯದಲ್ಲಿ ಆವರಣದಲ್ಲಿಟ್ಟು ಅದರಲ್ಲಿ ಭಕ್ತರಿಗೆ ಉರುಳುಸೇವೆ ಮಾಡಲು ಅವಕಾಶ ನೀಡಬಹುದು ಎನ್ನುವ ಹೈಕೋರ್ಟ್ ನೀಡಿದ್ದ ಸಲಹೆಗೆ , ಸುಪ್ರೀಂಕೋರ್ಟ್ ತನ್ನ ಸಹಮತಿ ಸೂಚಿಸಿದೆ.
ಇದರಿಂದ ಸಾಕಷ್ಟು ಚರ್ಚೆ, ವಾದ ವಿವಾದಗಳಿಗೆ ಕಾರಣವಾಗಿದ್ದ ಮಡೆಸ್ನಾನ ವಿವಾದಕ್ಕೆ ಸುಪ್ರೀಂ ತೆರೆ ಎಳೆದಿದ್ದು, ದಶಕಗಳಿಂದ ನಡೆದುಕೊಂಡು ಬರುತ್ತಿರುವ ಮಡೆಸ್ನಾನ ಪದ್ದತಿ ಇನ್ನು ಇತಿಹಾಸದ ಪುಟ ಸೇರಲಿದೆ. (ಮಡೆಸ್ನಾನ ಬೇಡ ಎಡೆಸ್ನಾನವಿರಲಿ ಎಂದ ಪೇಜಾವರ ಶ್ರೀ )
ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಹರಕೆ ರೂಪದಲ್ಲಿ ಉರುಳುವ ಮಡೆ ಮಡೆಸ್ನಾನ 'ಅನಿಷ್ಠ' ಪದ್ದತಿಯನ್ನು ಕೂಡಲೇ ನಿಷೇಧಿಸಬೇಕೆಂದು ನಿಡುಮಾಮಿಡಿ ಶ್ರೀ, ದೊರೆಸ್ವಾಮಿ ಅಯ್ಯಂಗಾರ್, ಪ್ರೊ. ಗೋವಿಂದ ರಾವ್, ಮರುಳುಸಿದ್ದಪ್ಪ, ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ಹನ್ನೊಂದು ಮಂದಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯವು ಮಡೆ ಮಡೆಸ್ನಾನ ನಿಷೇಧಿಸಬೇಕು ಎನ್ನುವ ಪ್ರಗತಿಪರರ ಮತ್ತು ವಿಚಾರವಾದಿಗಳ ವಾದವನ್ನು ಆಲಿಸಿ, ಸರಕಾರದ ನಿಲುವನ್ನು ಕೇಳಿ, ಮಡೆಸ್ನಾನ ಪದ್ದತಿ ಬೇಡ, ಬದಲಿಗೆ ಎಡೆಸ್ನಾನ ಪದ್ದತಿ ಇರಲಿ ಎಂದು ಆದೇಶ ನೀಡಿತ್ತು.
ರಾಜ್ಯ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆ ಸರ್ವೋಚ್ಚ ನ್ಯಾಯಾಲದ ಮೊರೆ ಹೋಗಿ ಅಲ್ಲಿಂದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತಂದಿತ್ತು. ಅರ್ಜಿ ವಿಚಾರಣೆ ಕೈಗೊಂಡ ನ್ಯಾ. ಮದನ್ ಲೋಕುರ್ ಮತ್ತು ನ್ಯಾ. ನಾಗಪ್ಪನ್ ಅವರನ್ನೊಳಗೊಂಡ ನ್ಯಾಯಪೀಠ ಮೊದಲಿಗೆ ಹೈರ್ಕೋರ್ಟಿಗೆ ತಡೆಯಾಜ್ಞೆ ತಡೆ ನೀಡಿದ್ದರೂ ನಂತರ ಹೈಕೋರ್ಟಿನ ತೀರ್ಪನ್ನು ಎತ್ತಿ ಹಿಡಿದಿದೆ.
ಮಡೆಸ್ನಾನದಲ್ಲಿ ಭಾಗವಹಿಸಿ, ಕುಕ್ಕೆ ಸುಬ್ರಮಣ್ಯ ದೇವಾಲಯದ ಪಕ್ಕದಲ್ಲಿ ಹರಿಯುವ ಕುಮಾರಧಾರ ನದಿಯಲ್ಲಿ ಪುಣ್ಯಸ್ನಾನ ಮಾಡಿದರೆ ಚರ್ಮರೋಗ ನಿವಾರಣೆಯಾಗುತ್ತದೆ ಎನ್ನುವುದು ನಂಬಿಕೆ.