ಮೈತ್ರಿಯಾ ಗೌಡ ಪ್ರಕರಣ: ಕಾರ್ತಿಕ್ ಗೌಡಗೆ ಮತ್ತೆ ಸಂಕಷ್ಟ
ಬೆಂಗಳೂರು, ಆಗಸ್ಟ್ 10: ಅತ್ಯಾಚಾರ ಮತ್ತು ವಂಚನೆ ಆರೋಪ ಪ್ರಕರಣದಿಂದ ನಿರಾಳರಾಗಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಮಗ ಕಾರ್ತಿಕ್ ಗೌಡ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ನಟಿ ಮೈತ್ರಿಯಾ ಗೌಡ ಅವರು ನೀಡಿದ್ದ ದೂರಿನ ಅಡಿಯಲ್ಲಿ ತನಿಖೆಯನ್ನು ಮತ್ತೆ ಆರಂಭಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಮೈತ್ರಿಯಾ ಕೇಸ್ : ಕಾರ್ತಿಕ್ ಗೌಡ ವಿರುದ್ಧದ ಚಾರ್ಜ್ ಶೀಟ್ ರದ್ದು
ಮೈತ್ರಿಯಾ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಸಾಕ್ಷ್ಯವಿದ್ದರೆ ತನಿಖೆ ನಡೆಸಿ. ಮತ್ತೆ ತನಿಖೆ ನಡೆಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ ಕಾರ್ತಿಕ್ ಗೌಡ ವಂಚನೆ ಮಾಡಿದ್ದಾರೆ ಎಂದು ಮೈತ್ರಿಯಾ ಗೌಡ ಆರೋಪಿಸಿದ್ದರು. ಅಲ್ಲದೆ, ಕಾರ್ತಿಕ್ ತಮ್ಮನ್ನು ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ. ಹಿಂದೂ ಧರ್ಮದ ಪ್ರಕಾರ ತಮ್ಮಿಬ್ಬರ ಮದುವೆಯಾಗಿದೆ. ಅವರು ಪತ್ನಿ ಎಂದು ಒಪ್ಪಿಕೊಂಡು ಎಲ್ಲ ಹಕ್ಕುಗಳನ್ನು ನೀಡಬೇಕು ಎಂದು ಮೈತ್ರಿಯಾ ಪ್ರತಿಪಾದಿಸಿದ್ದರು.
ಮೈತ್ರಿಯಾ- ಕಾರ್ತೀಕ್ ಗೌಡಗೆ ಸಂಧಾನ ಪಾಠ ಹೇಳಿದ ಹೈಕೋರ್ಟ್
ಈ ವಿವಾದದ ನಡುವೆಯೇ ಕಾರ್ತಿಕ್ ಗೌಡ ಅವರಿಗೆ ಮದುವೆಯಾಗಿತ್ತು. ಮದುವೆಗೆ ತಡೆಯೊಡ್ಡುವಂತೆ ಕೋರಿ ಮೈತ್ರಿಯಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಬಳಿಕ ಅವರ ವಿರುದ್ಧದ ಅತ್ಯಾಚಾರ, ವಂಚನೆ ಆರೋಪದ ಚಾರ್ಜ್ಷೀಟ್ ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು.
ಅಲ್ಲದೆ, ಈ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿತ್ತು. ಕಾರ್ತಿಕ್ ಗೌಡ ಈಗಾಗಲೇ ಮದುವೆಯಾಗಿದ್ದಾರೆ. ಕುಟುಂಬದ ನೆಮ್ಮದಿಗಾಗಿ ಪ್ರಕರಣವನ್ನು ಪರಸ್ಪರ ಕುಳಿತು ಇತ್ಯರ್ಥ ಮಾಡಿಕೊಳ್ಳಿ. ಆಸ್ತಿ, ಹಣಕ್ಕಿಂತ ಮಾನಸಿಕ ನೆಮ್ಮದಿ ಮುಖ್ಯ ಎಂದು ಕೋರ್ಟ್ ಹೇಳಿತ್ತು.
ಆದರೆ, ಇದನ್ನು ಮೈತ್ರಿಯಾ ಗೌಡ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು.