ಕಳಸಾ ಬಂಡೂರಿ ಹೋರಾಟಕ್ಕೆ ಐಟಿಬಿಟಿ ಕನ್ನಡಿಗರ ಕಿಚ್ಚು
ಕರ್ನಾಟಕದ ಬೆಳಗಾವಿಯಲ್ಲಿ ಹುಟ್ಟಿ, ಗೋವಾದ ಮೂಲಕ ಅರಬ್ಬಿ ಸಮುದ್ರವನ್ನು ಸೇರುವ ಮಹದಾಯಿ ನದಿಯ ನೀರನ್ನು ಬಳಸಿಕೊಳ್ಳಲು ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಜನರು ನಡೆಸುತ್ತಿರುವ 'ಕಳಸಾ ಬಂಡೂರಿ' ಹೋರಾಟಕ್ಕೆ ಭರ್ತಿ ಒಂದು ವರ್ಷ.
ಕಳಸಾ ಬಂಡೂರಿ ಎಂಬ ಎರಡು ನಾಲೆಗಳ ಮೂಲಕ, ಬೆಳಗಾವಿ ಜಿಲ್ಲೆಯ ಕಣಕುಂಬಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಜಲಾಶಯದ ಮೂಲಕ ಈ ಮೂರು ಜಿಲ್ಲೆಗಳಿಗೆ ನೀರು ಹರಿಸಬೇಕೆಂಬುದು ಈ ಹೋರಾಟಗಾರರ ಆಗ್ರಹ. ವರ್ಷಪೂರ್ತಿ ಹೋರಾಟ ನಡೆಸಲಾಗಿದೆಯೇ ಹೊರತು, ಪ್ರತಿಫಲ ಏನೂ ಸಿಕ್ಕಿಲ್ಲ. [ಏನಿದು ಕಳಸಾ-ಬಂಡೂರಿ ಯೋಜನೆ?]
ಈ ಹೋರಾಟಕ್ಕೆ ಕನ್ನಡಪರ ಚಳವಳಿಗಾರರು, ಕನ್ನಡ ಚಿತ್ರನಟರು ಬೆಂಬಲ ಸೂಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹೋರಾಟದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರಿನ ಐಟಿ-ಬಿಟಿ ಕನ್ನಡ ಬಳಗದ ಕಟ್ಟಾಳುಗಳು ವಿನೂತನ ಹೋರಾಟಕ್ಕೆ ಕನ್ನಡಿಗರನ್ನು ಅಣಿಗೊಳಿಸುತ್ತಿದ್ದಾರೆ. ಐಟಿಬಿಟಿ ಕನ್ನಡ ಬಳಗದ ವಿನಂತಿ ಕೆಳಗಿನಂತಿದೆ. [ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು]
ರಾಜ್ಯಾದ್ಯಂತ ಅನೇಕ ಹೋರಾಟಗಳು, ಬಂದ್ಗಳು ನಡೆದರೂ ದಪ್ಪ ಚರ್ಮದ ರಾಜಕಾರಣಿಗಳಿಗೆ/ಸರಕಾರಗಳಿಗೆ/ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿದಂತೆ ಕಂಡಿಲ್ಲ. ಜುಲೈ 14ರಂದು ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆ ಬಂದ್ಗೆ ಬಂಡೂರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ. ಸಲೀಂ ಸಂಗನಮಲ್ಲಾ ಕರೆ ನೀಡಿದ್ದಾರೆ. [ಕಳಸಾ ಬಂಡೂರಿ: ಜುಲೈ 14ಕ್ಕೆ ಉತ್ತರ ಕರ್ನಾಟಕ ಬಂದ್]
ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಉದ್ದೇಶದಿಂದ ಪ್ರಪಂಚದ್ಯಾಂತ ಇರುವ ಕನ್ನಡಿಗರು "I Support Kalasa Banduri ಕಳಸಾ ಬಂಡೂರಿ ಜಾರಿಯಾಗಲಿ" ಎಂದು ಸೆಲ್ಫಿ ವಿಡಿಯೋ ಮಾಡಿ ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್/ವಾಟ್ಸಾಪ್/ಟ್ವಿಟ್ಟರ್ ಗಳಲ್ಲಿ ಶೇರ್ ಮಾಡಬಹುದೆಂದು ಐಟಿಬಿಟಿ ಕನ್ನಡಿಗರು ಕೋರಿದ್ದಾರೆ.
ವಿಡಿಯೋವನ್ನು/ಲಿಂಕ್ ಅನ್ನು ನೀವು ಈ ಕೆಳಗಿನ ನಂಬರ್ ಗಳಿಗೂ ವಾಟ್ಸಾಪ್ನಲ್ಲಿ ಹಂಚಿಕೊಳ್ಳಬಹುದು +919590849208, 8867734326
ಈಗಾಗಲೇ ಶಿವರಾಜ್ ಕುಮಾರ್, ದೊಡ್ಡಣ್ಣ ಸೇರಿದಂತೆ ಕನ್ನಡ ನಾಡಿನ ವಿವಿಧ ರಂಗದ ಅನೇಕ ಮಹನೀಯರು ವಿಡಿಯೋ ಕಳುಹಿಸಿಕೊಟ್ಟಿದ್ದಾರೆ. ಈ ಅಭಿಯಾನಕ್ಕೆ ಧ್ವನಿಯಾಗಿ, ಕನ್ನಡ ನಾಡಿನ ಒಂದೂವರೆ ಕೋಟಿಗೂ ಹೆಚ್ಚು ಜನರ ಕುಡಿಯುವ ನೀರಿನ ಯೋಜನೆಯಾದ ಕಳಸಾ-ಬಂಡೂರಿಯನ್ನು ಬೆಂಬಲಿಸಬೇಕಾಗಿ ವಿನಂತಿ.