ಬಿರು ಬೇಸಿಗೆ, ಆಟದ ಮೈದಾನವಾದ ಕೆಆರ್ ಎಸ್ ಜಲಾಶಯ!
ಮಂಡ್ಯ,ಮಾರ್ಚ್,23: ಸದಾ ನೀರಿನಿಂದ ತುಂಬಿ ತುಳುಕುತ್ತಿದ್ದ, ತನ್ನ ಮೋಡಿಯಿಂದ ಪ್ರವಾಸಿಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತಾ, ಮನದಲ್ಲಿ ಹರ್ಷವನ್ನು ಪುಟಿದೇಳುವಂತೆ ಮಾಡುತ್ತಿದ್ದ ಕೆಆರ್ ಎಸ್ ಜಲಾಶಯ ಬಿರು ಬೇಸಿಗೆಯಿಂದ ಖಾಲಿ ಖಾಲಿಯಾಗಿದೆ. ಪರಿಣಾಮ ದೂರದಿಂದ ನೋಡುವವರಿಗೆ ಆಟದ ಮೈದಾನವೇನೋ ಎಂಬಂತೆ ಭಾಸವಾಗುತ್ತಿದೆ.
ದಿನದಿಂದ ದಿನಕ್ಕೆ ಜಲಾಶಯದ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, 83 ಅಡಿಗೆ ಇಳಿದಿದೆ. ಅಷ್ಟೇ ಅಲ್ಲ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿಯೂ ಕಂಠಿತವಾಗಿದೆ. ಇದೀಗ ಒಳಹರಿವು ಸುಮಾರು 250 ಕ್ಯೂಸೆಕ್ಸ್ ಗಿಂತಲೂ ಕಡಿಮೆಯಾಗಿದೆ.[ಬರಿದಾದ ಬೆಂಗಳೂರು ಅಂತರ್ಜಲ, 1000ಅಡಿ ಆಳದಲ್ಲೂ ಹನಿ ನೀರಿಲ್ಲ]
ಕಾವೇರಿ ಕಣಿವೆಯಲ್ಲಿ ಮಳೆ ಬಾರದೆ ಹೋದರೆ ಮುಂದೆ ಮೈಸೂರು, ಮಂಡ್ಯ, ಬೆಂಗಳೂರಿನ ಜನರು ಭೀಕರ ಜಲಕ್ಷಾಮವನ್ನು ಎದುರಿಸಬೇಕಾಗುತ್ತದೆ. ವರುಣನ ಕೃಪೆ ಮಾತ್ರ ಈ ಭಾಗದ ಮಂದಿಯನ್ನು ತಂಪಿನಲ್ಲಿ ಇರಿಸಬಲ್ಲದು. ಬರಗಾಲದ ಆತಂಕದಿಂದ ದೂರ ನಿಲ್ಲಿಸಬಲ್ಲದು.
ಕೊಡಗಿಗೆ ದಯಪಾಲಿಸದ ವರುಣ
ಸಾಮಾನ್ಯವಾಗಿ ಕೊಡಗು ವ್ಯಾಪ್ತಿಯಲ್ಲಿ ಮಾರ್ಚ್ ವೇಳೆಗೆ ವರುಣನ ಕೃಪಾ ದೃಷ್ಟಿ ಇರುತ್ತಿತ್ತು. ಆದರೆ ಈ ಬಾರಿ ವರುಣ ಮುನಿಸಿಕೊಂಡಿದ್ದಾನೆ. ಕಾಫಿ ಬೆಳೆಗಾರರಿಗೆ ಫೆಬ್ರವರಿ ಅಥವಾ ಮಾರ್ಚಿನಲ್ಲಿ ಮಳೆ ಸುರಿದರೆ ಕಾಫಿ ಹೂ ಅರಳಿ ಮುಂದಿನ ವರ್ಷಕ್ಕೆ ಫಸಲು ಬರಲಿದೆ. ಆದರೆ ಈ ಬಾರಿ ಮಳೆ ಸುರಿದಿಲ್ಲ.[ಕುಡಿಯುವ ನೀರಿಗಾಗಿ 3ನೇ ಮಹಾಯುದ್ಧ ಬೇಕೆ?]
ಹೀಗಾಗಿ ಸ್ಪಿಂಕ್ಲರ್ ಮಾಡಿ ಕಾಫಿ ಹೂ ಬರಿಸುತ್ತಿದ್ದು, ಈ ಕಾರ್ಯಕ್ಕೂ ನೀರು ಇಲ್ಲದಾಗಿದೆ. ಕೆಲವು ಕಾಫಿ ಬೆಳೆಗಾರರು ಕಾವೇರಿ ಸೇರಿದಂತೆ ಉಪ ನದಿಗಳ ನೀರನ್ನು ಸ್ಪಿಂಕ್ಲರ್ ಮಾಡಲು ಬಳಸುತ್ತಿರುವುದರಿಂದ ನದಿಗಳು ಬರಿದಾಗಿವೆ. ಇನ್ನಷ್ಟು ಮಾಹಿತಿ ಇಲ್ಲಿದೆ
ಬೇಸಿಗೆ ಆರಂಭದಲ್ಲೇ ಆತಂಕ
ಇವತ್ತು ನಾವು ನೋಡುತ್ತಿರುವ ಕೆಆರ್ ಎಸ್ ನ ನೋಟ ಮೊದಲೆಲ್ಲಾ ಬೇಸಿಗೆ ಕಾಲದ ಕೊನೆಯ ಮತ್ತು ಮಳೆಗಾಲದ ಮೊದಲ ದಿನಗಳಲ್ಲಿ ಕಾಣುತ್ತಿತ್ತು. ಆಗ ಆತಂಕ ಪಡುವ ಸ್ಥಿತಿಯೂ ಇರುತ್ತಿರಲಿಲ್ಲ. ಆದರೆ ಪ್ರತಿವರ್ಷ ಬೇಸಿಗೆಯ ಕೊನೆಯಲ್ಲಿ ಕಂಡು ಬರುತ್ತಿದ್ದ ದೃಶ್ಯ ಈ ಬಾರಿ ಬೇಸಿಗೆಯ ಆರಂಭದಲ್ಲಿಯೇ ಕಾಣಿಸಿದೆ.
ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ
ಈ ನಡುವೆ ಬರಿದಾಗುತ್ತಿರುವ ಕೆಆರ್ ಎಸ್ ದೃಶ್ಯವನ್ನು ನೋಡಲು ಪ್ರವಾಸಿಗರು ಬರುತ್ತಿದ್ದಾರೆ. ಕೆಆರ್ ಎಸ್ ಮೇಲ್ಭಾಗಕ್ಕೆ ತೆರಳಲು ಅವಕಾಶವಿಲ್ಲದ ಕಾರಣ ಹಿನ್ನೀರಿಗೆ ತೆರಳುತ್ತಿದ್ದಾರೆ. ಕಣ್ಣು ಹಾಯಿಸಿದುದ್ದಕ್ಕೂ ಬರೀ ನೀರೇ ಕಂಡು ಬರುತ್ತಿದ್ದ ದೃಶ್ಯವನ್ನು ನೋಡಿದವರಿಗೆ ಇದೀಗ ಖಾಲಿ ಖಾಲಿ ಜಲಾಶಯವನ್ನು ನೋಡಲು ಅದೇನೋ ಖುಷಿ.
ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಂದ ಪರಿಸ್ಥಿತಿಯ ಅವಲೋಕನ
ದಿನದಿಂದ ದಿನಕ್ಕೆ ನೀರಿನ ಮಟ್ಟ ಇಳಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ, ಮೈಸೂರು ಪ್ರಾದೇಶಿಕ ಆಯುಕ್ತರಾದ ಎ.ಎಂ. ಕುಂಜಪ್ಪ, ಮಂಡ್ಯ ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್, ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ ಅವರು ಕೆಆರ್ಎಸ್ ಜಲಾಶಯಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ.
ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಹೇಳುವುದೇನು?
ಈ ಸಂದರ್ಭ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಶಂಕರೇಗೌಡ ಅವರು ಹಿಂದಿನ ಅಭಾವದ ವರ್ಷಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿದ್ದು, ಕುಡಿಯುವ ನೀರು ಸರಬರಾಜಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಮುಂದಿನ ಜೂನ್ ಅಂತ್ಯದವರೆಗೂ ಕುಡಿಯಲು ಸಾಕಾಗುವಷ್ಟು ನೀರು ಸಂಗ್ರಹ ಇದೆ ಎಂದು ಹೇಳಿದ್ದಾರೆ. ಇದರಿಂದ ಮೈಸೂರು ಮತ್ತು ಬೆಂಗಳೂರು ನಗರದ ಜನ ನಿಟ್ಟುಸಿರು ಬಿಡುವಂತಾಗಿದೆ.
ಕೆಆರ್ ಎಸ್ ಅಣೆಕಟ್ಟು ಪರಿಶೀಲನೆಗೆ ಬಂದವರು ಯಾರು?
ಜಿಲ್ಲಾಧಿಕಾರಿಗಳ ತಂಡ ಭೇಟಿ ನೀಡಿದ ಸಂದರ್ಭ ಕೆ.ಆರ್.ಎಸ್. ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ಬಸವರಾಜೇಗೌಡ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್ ಪುಟ್ಟಸ್ವಾಮಿ ಬಂದಿದ್ದರು.