ಎಚ್ಡಿಕೆ Vs ಸುಮಲತಾ: ದಳಪತಿಗಳಿಂದ ಹಿಂದಿನ ವಿಡಿಯೋ ಬಿಡುಗಡೆ
ಬೆಂಗಳೂರು, ಜುಲೈ 10: ಕೃಷ್ಣರಾಜಸಾಗರ ಅಣೆಕಟ್ಟಿನ ವಿಚಾರದಲ್ಲಿ ಆರಂಭವಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವಿನ ವಾಕ್ಸಮರ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ.
Recommended Video
"ನಾವು ಹೋರಾಟ ಮಾಡಬೇಕಾದ ವಿಚಾರ ಬಹಳಷ್ಟಿವೆ. ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಮಗೆ ಬಹುದೊಡ್ಡ ನ್ಯಾಯ ಸಿಗಬೇಕಿದೆ. ನನ್ನ ಹೋರಾಟವನ್ನು ಈಗಾಗಲೇ ಅತ್ತ ಕೇಂದ್ರೀಕರಿಸಿದ್ದೇನೆ"ಎಂದು ಕುಮಾರಸ್ವಾಮಿಯವರು ಟ್ವೀಟ್ ಮಾಡುವ ಮೂಲಕ ಈ ವಿಚಾರವನ್ನು ಬೆಳೆಸಲು ಇಷ್ಟವಿಲ್ಲ ಎಂದು ಸಾರಿದ್ದಾರೆ.
ತಂದೆ ಮುಂದೆ ಕಣ್ಣೀರಿಟ್ಟು ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ?
ಆದರೆ, ದಳಪತಿಗಳು ಮತ್ತೆಮತ್ತೆ ಹೇಳಿಕೆಯನ್ನು ನೀಡುತ್ತಿದ್ದು, ಸುಮಲತಾ ಬೆನ್ನಿಗೆ ನಿಂತಿರುವ ರಾಕ್ಲೈನ್ ವೆಂಕಟೇಶ್ ಅವರ ನಿವಾಸದ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದ್ದಾರೆ.
ಇವೆಲ್ಲದರ ನಡುವೆ, ಅಂಬರೀಶ್ ಅಂತಿಮ ಸಂಸ್ಕಾರದ ವೇಳೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಸರಿಯಾಗಿ ಸ್ಪಂದಿಸಿಲ್ಲ ಎನ್ನುವ ಸುಮಲತಾ ಹೇಳಿಕೆಗೆ ಸಂಬಂಧಿಸಿದಂತೆ, ಜೆಡಿಎಸ್ ಮುಖಂಡರು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಕದನ ವಿರಾಮ ಘೋಷಿಸಿದ ಎಚ್ಡಿಕೆ: ಸಾ.ರಾ ಮಹೇಶ್ ಪ್ರಯತ್ನ ಫಲಕೊಟ್ಟಿತಾ?
ಸುಮಲತಾ ಅವರು ನೀಡಿದ್ದ ಹೇಳಿಕೆಯನ್ನು ಜನತೆ ನಂಬಬಾರದು
ಅಂಬರೀಶ್ ಅವರ ಅಂತಿಮ ಸಂಸ್ಕಾರದ ನಂತರ ಸುಮಲತಾ ಅವರು ಕುಮಾರಸ್ವಾಮಿಯವರಿಗೆ ಧನ್ಯವಾದ ಹೇಳುವ ವಿಡಿಯೋವನ್ನು ಜೆಡಿಎಸ್ ಮುಖಂಡ ಟಿ.ಎ.ಶರವಣ ಬಿಡುಗಡೆ ಮಾಡಿದ್ದಾರೆ. ಸುಮಲತಾ ಅವರು ನೀಡಿದ್ದ ಹೇಳಿಕೆಯನ್ನು ಜನತೆ ನಂಬಬಾರದು ಎನ್ನುವ ಕಾರಣಕ್ಕಾಗಿ ಈ ವಿಡಿಯೋ ಬಿಡುಗಡೆ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.
ನಮ್ಮ ಕುಮಾರಣ್ಣನಿಗೆ ನಾನು ಕೈಜೋಡಿಸಿ ನಮಸ್ಕಾರ ಹೇಳುತ್ತೇನೆ
ಆ ವಿಡಿಯೋದಲ್ಲಿ, "ಅಂಬರೀಶ್ ಅವರ ಅಂತಿಮ ಪಯಣ ಏನಿತ್ತೋ, ಅವರನ್ನು ಅರಸನನ್ನಾಗಿ ಕಳುಹಿಸಿಕೊಟ್ಟಿದ್ದೀರಾ. ಅದಕ್ಕೆ ಮುಖ್ಯವಾಗಿ ನಮ್ಮ ಕುಮಾರಣ್ಣನಿಗೆ ನಾನು ಕೈಜೋಡಿಸಿ ನಮಸ್ಕಾರ ಹೇಳುತ್ತೇನೆ. ಅಂಬರೀಶ್ ರಾಜನಾಗಿಯೇ ಬಾಳಿದರು, ರಾಜನಾಗಿಯೇ ಹೋದರು"ಎಂದು ಸುಮಲತಾ ಹೇಳಿದ್ದರು.
ಅಂಬರೀಶ್ ಅವರ ಅಭಿಮಾನಿಗಳ ಪರವಾಗಿ ನಿಮಗೆ ಕೃತಜ್ಞತೆ ಹೇಳುತ್ತೇನೆ
"ರಾಜಕಾರಣದಲ್ಲಿರಬಹುದು, ಸಿನಿಮಾ ರಂಗದಲ್ಲಿರಬಹುದು ಅಂಬರೀಶ್ ಅವರಿಗೆ ಬೆಂಬಲ ಕೊಟ್ಟ ಎಲ್ಲರಿಗೂ ನನ್ನ ಧನ್ಯವಾದಗಳು. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡು ಕುಮಾರಣ್ಣನವರು ಅಂತಿಮ ವಿಧಿವಿಧಾನಗಳನ್ನು ನಡೆಸಿಕೊಟ್ಟಂತಹ ರೀತಿಗಾಗಿ ಸಮಸ್ತ ಅಂಬರೀಶ್ ಅವರ ಅಭಿಮಾನಿಗಳ ಪರವಾಗಿ ನಿಮಗೆ ಕೃತಜ್ಞತೆ ಹೇಳುತ್ತೇನೆ"ಎಂದು ಸುಮಲತಾ ಹೇಳಿದ್ದರು.
ನಾಡಿನ ಜನತೆಗೆ ಸತ್ಯ ಗೊತ್ತಾಗಲಿ ಎನ್ನುವ ಕಾರಣಕ್ಕಾಗಿ ವಿಡಿಯೋ ಬಿಡುಗಡೆ
"ಅಂದು ಕುಮಾರಣ್ಣನವರ ಬಗ್ಗೆ ಗೌರವದ ಮಾತಾನ್ನಾಡಿದ್ದ ಸುಮಲತಾ ಅವರು, ಇಂದು ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆಯನ್ನು ನಾವೇ ಮಾಡಿಕೊಂಡಿದ್ದು ಎಂದು ಹೇಳುತ್ತಾರೆ. ಅಂಬರೀಶ್ ಅವರ ಅಭಿಮಾನಿಯಾಗಿ ಕುಮಾರಣ್ಣ ಅಂದು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ನಾಡಿನ ಜನತೆಗೆ ಕುಮಾರಣ್ಣನವರಿಂದ ಏನೂ ತಪ್ಪಾಗಿಲ್ಲ ಎನ್ನುವುದು ಗೊತ್ತಾಗಲಿ ಎನ್ನುವ ಕಾರಣಕ್ಕಾಗಿ ಈ ವಿಡಿಯೋ ಬಿಡುಗಡೆ ಮಾಡುತ್ತಿದ್ದೇವೆ"ಎಂದು ಶರವಣ ಅವರು ಹೇಳಿದ್ದಾರೆ.