ಎಚ್ ಡಿ ಕುಮಾರಸ್ವಾಮಿಗೆ ಮಾತಿನೇಟು ಕೊಟ್ಟ ಸುಮಲತಾ ಅಂಬರೀಶ್
Recommended Video
ಮಂಡ್ಯ, ಅಕ್ಟೋಬರ್ 09: ಇಂದು ಅಚ್ಚರಿಯ ರೀತಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮಾತಿನೇಟು ನೀಡಿದರು.
ಚುನಾವಣೆ ಮುಗಿಯುತ್ತಿದ್ದಂತೆಯೇ ನಾನು ಮತ್ತು ನನ್ನ ಮಗ ವಿದೇಶ ಪ್ರಯಾಣಕ್ಕೆ ಹೋಗಿದ್ದೇವೆ ಎಂದು ಕೆಲವರು ಹೆಳಿದ್ದರು. ಆದರೆ ಆಮೇಲೆ ಫಾರಿನ್ ಟೂರಿಗೆ ಹೋಗಿದ್ದು ಯಾರು ಎಂಬುದು ಜನರಿಗೆ ಗೊತ್ತಾಗದೆ. ಅದಕ್ಕೆ ಫೋಟೊ ಸಾಕ್ಷಿಯೂ ಇದೆ ಎಂದು ಸುಮಲತಾ ಅಂಬರೀಶ್ ಹೇಳಿದರು.
ಬಿಜೆಪಿ ಸೇರ್ತಾರಾ ಪಕ್ಷೇತರ ಸಂಸದೆ ಸುಮಲತಾ?
ಸುಮಲತಾ ಅವರು ಬಿಜೆಪಿ ಸೇರುವ ಕುರಿತಂತೆ ಹಬ್ಬಿರುವ ವದಂತಿಯ ಬಗ್ಗೆಯೂ ಈ ಸಂದರ್ಭದಲ್ಲಿ ಅವರು ಪ್ರತಿಕ್ರಿಯೆ ನೀಡಿದರು.
ಸುಮಲತಾ ಮೇಲೆ ವಾಕ್ಪ್ರಹಾರ
ಕಳೆದ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಈ ಕ್ಷೇತ್ರ ಇಡೀ ದೇಶದ ಗಮನವನ್ನೂ ಸೆಳೆದಿತ್ತು. ಪ್ರಚಾರದ ವೇಳೆಯಲ್ಲಿ ಜೆಡಿಎಸ್, ಕಾಂಗ್ರೆಸ್ ನಾಯಕರು ಸುಮಲತಾ ಅವರ ಮೇಲೆ ವಾಕ್ಪ್ರಹಾರ ನಡೆಸಿದ್ದರು.
ವಿದೇಶಿ ಪ್ರಯಾಣದ ಬಗ್ಗೆ
ನಂತರ ಚುನಾವಣೆ ಮುಗಿದ ಮೇಲೆ ಗುಪ್ತಚರ ಮಾಹಿತಿ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಈ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂಬ ಬಗ್ಗೆ ನಿಖರ ಮಾಹಿತಿ ನೀಡಲು ವಿಫಲವಾದವು. ಕೆಲವು ಚಾನೆಲ್ ಗಳು ನಿಖಿಲ್ ಅವರೇ ಗೆಲ್ಲಬಹುದು ಎಂದವು. ಈ ಬೆಳವಣಿಗೆಯ ನಂತರ ಫಲಿತಾಂಶಕ್ಕೂ ಮುನ್ನ ಸುಮಲತಾ ಮತ್ತು ಅವರ ಪುತ್ರ ಅಭಿಷೇಕ್ ಇಬ್ಬರೂ ವಿದೇಶಕ್ಕೆ ತೆರಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು. ಸೋಲಿನ ಭಯಕ್ಕೆ ಅವರು ಪಲಾಯನ ಮಾಡಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದರು. ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಮಲತಾ, 'ನಾನು ಎಲ್ಲಿಯೂ ಹೋಗಿಲ್ಲ. ಹಳೇ ಫ್ಲೈಟ್ ಟಿಕೆಟ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ, ನಾನು ವಿದೇಶಕ್ಕೆ ತೆರಳಿದ್ದೇನೆ ಎನ್ನಲಾಗುತ್ತಿದೆ. ನಾನು ಭಾರತದಲ್ಲೇ, ಮಂಡ್ಯದಲ್ಲೇ ಇದ್ದೇನೆ. ನನಗೆ ಫಲಿತಾಂಶದ ಮೇಲೆ ಭಯವಿಲ್ಲ. ಗೆಲ್ಲುವ ವಿಶ್ವಾಸವಿದೆ. ಫಲಿತಾಂಶ ಬರುವವರೆಗೆ ಮಾತ್ರವಲ್ಲ, ಬಂದಮೇಲೂ ಇಲ್ಲಿಯೇ ಇರುತ್ತೇನೆ' ಎಂದಿದ್ದರು. ಅವರ ವಿಶ್ವಾಸದಂತೆಯೇ ನಂತರ ಹೊರಬುದ್ಧ ಫಲಿತಾಂಶದಲ್ಲಿ ಅವರು ಗೆಲುವು ಸಾಧಿಸಿದ್ದರು.
ಮಂಡ್ಯದಲ್ಲಿ ಸುಮಲತಾ ಅವರನ್ನು ಕಣಕ್ಕಿಳಿಸಿದ್ದು ಯಾರು? ಅಂದಿನ ಸತ್ಯ ಈಗ ಬಹಿರಂಗ!
ಬಿಜೆಪಿ ಕೋರ್ ಕಮಿಟಿ ಸಭೆ
ಲೋಕಸಭೆ ಚುನಾವಣೆಗೂ ಮುನ್ನವೇ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಉಳಿಯುವ ಮೂಲಕ ಸುಮಲತಾ ಅವರಿಗೆ ಪರೋಕ್ಷ ಬೆಂಬಲ ಸೂಚಿಸಿತ್ತು. ನಂತರ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಸುಮಲತಾ ಅವರನ್ನು ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಯ ನಂತರ ಸುಮಲತಾ ಬಿಜೆಪಿಗೆ ಸೇರಬಹುದು ಎಂಬ ವದಂತಿ ಹಬ್ಬಿತ್ತು. ಅದಕ್ಕೆ ಪೂರಕ ಎಂಬಂತೆ ಅವರು ಇಂದು ಮಂಡ್ಯದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಭಾಗವಹಿಸಿದ್ದರು.
ಬಿಜೆಪಿ ಸೇರುವ ಬಗ್ಗೆ...
ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದ ಸುಮಲತಾ ಅವರು ಬಿಜೆಪಿ ಸೇರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾನು ಬಿಜೆಪಿ ಸೇರುವುದಾದರೆ ಖಂಡಿತ ಮೊದಲು ನಿಮಗೇ ತಿಳಿಸುತ್ತೇನೆ. ಸದ್ಯಕ್ಕೆ ನಾನು ಇಲ್ಲಿಗೆ ಬಂದಿರುವುದು ಬಿಜೆಪಿ ಮುಖಂಡರಿಗೆ, ಕಾರ್ಯಕರ್ತರಿಗೆ, ಸದಸ್ಯರಿಗೆ ಕೃತಜ್ಞತೆ ಅರ್ಪಿಸುವುದಕ್ಕೆ. ಮಂಡ್ಯದಲ್ಲಿ ಗೆದ್ದ ನಂತರ ಸಮಾವೇಶ ನಡೆಸಿ ಮತದಾರರಿಗೆ ಕೃತಜ್ಞತೆ ಅರ್ಪಿಸಿದ್ದೆ. ಆದರೆ ಬಿಜೆಪಿ ನಾಯಕರು, ಕಾರ್ಯಕರ್ತರು ಸಹ ನನಗೆ ಸಾಕಷ್ಟು ಸಹಾಯ ಮಾಡಿ, ಬೆಂಬಲಕ್ಕೆ ನಿಂತರು. ಆದ್ದರಿಂದ ಅವರಿಗೂ ಕೃತಜ್ಞತೆ ಅರ್ಪಿಸುವುದಕ್ಕೆ ಈ ಸಭೆಗೆ ಬಂದಿದ್ದೇನೆ ಎದು ಸುಮಲತಾ ಹೇಳಿದರು.