ಮೀಸಲಾತಿ ಕ್ಷೇತ್ರವಾಗಿ ಅರ್ಧ ಶತಕ ಪೂರೈಸಿದ ಸುಳ್ಯ
ಮಂಗಳೂರು, ಏಪ್ರಿಲ್ 8: ರಾಜ್ಯ ಪರಿಶಿಷ್ಟ ಜಾತಿ ಮೀಸಲಿನ 36 ಕ್ಷೇತ್ರಗಳಲ್ಲಿ ಒಂದಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿ ಸುಮಾರು ಅರ್ಧ ಶತಕ ಪೂರೈಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ತುತ್ತ ತುದಿಯಲ್ಲಿರುವ ಈ ಕ್ಷೇತ್ರ ವಿಶೇಷ ಜಾನಪದೀಯ ಸಂಸ್ಕೃತಿ ಹೊಂದಿದ ಕ್ಷೇತ್ರವಾಗಿದೆ. ಈ ಕ್ಷೇತ್ರ ರೂಪುಗೊಂಡಂದಿನಿಂದ ಮೀಸಲಾತಿ ಕ್ಷೇತ್ರವಾಗಿಯೇ ಉಳಿದುಕೊಂಡಿರುವುದು ಇನ್ನೊಂದು ವಿಶೇಷ.
1957 ರಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಸುಳ್ಯ ವಿಧಾನಸಭಾ ಕ್ಷೇತ್ರವಾಗಿರಲಿಲ್ಲ. ಅಲ್ಲದೇ ಸುಳ್ಯ ತಾಲೂಕು ಕೂಡ ಆಗಿರಲಿಲ್ಲ. ಪುತ್ತೂರು ತಾಲೂಕಿಗೆ ಈ ಸುಳ್ಯ ಸೇರಿಕೊಂಡಿತ್ತು. 1957ರಲ್ಲಿ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ದ್ವಿಸದಸ್ಯ ಪದ್ದತಿ ಜಾರಿಯಲ್ಲಿತ್ತು. ಇದರಂತೆ ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಒಬ್ಬರು ಸಾಮಾನ್ಯ ಮತ್ತು ಇನ್ನೊಬ್ಬರು ಪರಿಶಿಷ್ಟ ಪಂಗಡದಲ್ಲಿ ಶಾಸಕರಾಗಿ ಆಯ್ಕೆಯಾಗಬೇಕಿತ್ತು.
ಸುಳ್ಯ ಕ್ಷೇತ್ರ ಪರಿಚಯ: ಸೋಲಿಲ್ಲದ ಸರದಾರ ಅಂಗಾರಗೆ ಈ ಬಾರಿಯೂ ಗೆಲುವು?
1957 ರಲ್ಲಿ ದ್ವಿಸದಸ್ಯ ಪದ್ಧತಿ
1957ರಲ್ಲಿ ಚುನಾವಣೆ ನಡೆದಾಗ ಆಯ್ಕೆಯಾದ ಇಬ್ಬರೂ ಶಾಸಕರು ಸುಳ್ಯದವರೇ ಆಗಿದ್ದರು. ಪುತ್ತೂರಿನಲ್ಲಿ ವಕೀಲರಾಗಿದ್ದ ಕೊಜುಗೋಡು ವೆಂಕಟರಮಣ ಗೌಡ ಮತ್ತು ಸುಳ್ಯದಲ್ಲಿ ಶಿಕ್ಷಕರಾಗಿದ್ದ ಎನ್. ಸುಬ್ಬಯ್ಯ ನಾಯ್ಕ ಇಬ್ಬರೂ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು.
1962ರಲ್ಲಿ ದ್ವಿಸದಸ್ಯ ಪದ್ದತಿ ರದ್ದಾಗಿ ಒಂದು ವಿಧಾನಸಭೆ ಕ್ಷೇತ್ರದಿಂದ ಒಬ್ಬರೇ ಶಾಸಕರಾಗಿ ಆಯ್ಕೆಯಾಗುವ ಪದ್ದತಿ ಬಂತು. ಈ ಹಿನ್ನಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರವಾಗಿ ರೂಪುಗೊಂಡು ಎಸ್.ಟಿ ಮೀಸಲಾತಿ ಕ್ಷೇತ್ರವಾಗಿ ಜಾರಿಗೆ ಬಂದಿತು. ಅದರಂತೆ 1962ರ ವಿಧಾನಸಭೆ ಚುನಾವಣೆಯಲ್ಲಿ ಸುಳ್ಯದಿಂದ ಪ್ರಥಮ ಶಾಸಕರಾಗಿ ಕಾಂಗ್ರೆಸ್ ನ ಎಸ್. ಸುಬ್ಬಯ್ಯ ನಾಯ್ಕ ಆಯ್ಕೆಯಾದರು.
ಪರಿಶಿಷ್ಟ ಪಂಗಡದಿಂದ ಪರಿಶಿಷ್ಟ ಜಾತಿ
1967ರಲ್ಲಿ ಸುಳ್ಯ ಎಸ್.ಟಿ ಮೀಸಲು ಕ್ಷೇತ್ರದಿಂದ ಎಸ್.ಸಿ ಮೀಸಲು ಕ್ಷೇತ್ರವಾಗಿ ಬದಲಾಯಿತು. ಅಂದಿನಿಂದ ಅಂದರೆ ಸುಮಾರು 51 ವರ್ಷ ಸುಳ್ಯ ಎಸ್.ಸಿ ಮೀಸಲು ಕ್ಷೇತ್ರವಾಗಿಯೇ ಉಳಿದಿದೆ.
1967ರಲ್ಲಿ ಸ್ವತಂತ್ರ ಪಾರ್ಟಿಯ ಎ. ರಾಮಚಂದ್ರ, 1972ರಲ್ಲಿ ಕಾಂಗ್ರೆಸ್ ನ ಪಿ.ಡಿ ಬಂಗೇರ, 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ ಎ. ರಾಮಚಂದ್ರ, 1983ರಲ್ಲಿ ಬಾಕಿಲ ಹುಕ್ರಪ್ಪ ಮತ್ತು 1989ರಲ್ಲಿ ಕಾಂಗ್ರೆಸ್ ನ ಕೆ. ಕುಶಲ ಶಾಸಕರಾಗಿ ಆಯ್ಕೆಯಾಗಿದ್ದರು.
1994ರಿಂದ ಸತತ ಐದು ಬಾರಿ ಬಿಜೆಪಿಯ ಎಸ್. ಅಂಗಾರ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಉಡುಪಿ ಕ್ಷೇತ್ರ flashback : ಮಧ್ವರಾಜ್ ಕುಟುಂಬ ರಾಜಕೀಯ
ಸುಳ್ಯ ಕ್ಷೇತ್ರದಿಂದ ಅಭ್ಯರ್ಥಿಗಳ ವಲಸೆ
ಸುಳ್ಯ ವಿಧಾನ ಸಭಾ ಕ್ಷೇತ್ರವಾಗಿ ಮಾರ್ಪಾಡು ಆದಂದಿನಿಂದ ಮೀಸಲು ಕ್ಷೇತ್ರವಾಗಿ ಉಳಿದಿದೆ. ಈ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನ ಸಾಮಾನ್ಯ ವರ್ಗದ ರಾಜಕೀಯ ಮುಖಂಡರು ಚುನಾವಣೆಯಲ್ಲಿ ನಿಲ್ಲಲು ನೆರೆಯ ಕ್ಷೇತ್ರಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಇದೆ.
ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಕೂಡ ಸುಳ್ಯ ತಾಲೂಕಿನವರೇ, ಆದರೆ ವಿಧಾನಸಭೆ ಚುನಾವಣೆಗೆ ನಿಲ್ಲಲು ಅವರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದತ್ತ ಮುಖ ಮಾಡಬೇಕಾಯಿತು. ನಂತರ ಪುತ್ತೂರಿನಲ್ಲಿ ಎರಡು ಬಾರಿ ಶಾಸಕರಾದ ಡಿ.ವಿ.ಎಸ್ ನಂತರ ಸಂಸದರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಈಗ ಕೇಂದ್ರದ ಸಚಿವರಾಗಿದ್ದಾರೆ.
ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಬರ
ಒಂದು ಕಾಲದಲ್ಲಿ ಸುಳ್ಯದ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಅಭ್ಯರ್ಥಿಗಳ ಬರ ಎದುರಿಸಬೇಕಾಗಿತ್ತು. ಸೂಕ್ತ ಅಭ್ಯರ್ಥಿಗಳು ಸಿಗದ ಕಾರಣ ಬೇರೆ ಕ್ಷೇತ್ರದಿಂದ ಇಲ್ಲಿ ಬಂದು ಸ್ಪರ್ಧಿಸಿದ ಉದಾಹರಣೆಗಳು ಇವೆ. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಎಲ್ಲಾ ಪ್ರಮುಖ ಪಕ್ಷಗಳಲ್ಲೂ ಸಾಕಷ್ಟು ಆಕಾಂಕ್ಷಿಗಳಿದ್ದಾರೆ.
ಮೀಸಲು ಮುಕ್ತ ಹೋರಾಟ
ಈ ನಡುವೆ ಸುಳ್ಯ ಕ್ಷೇತ್ರದ ಮೀಸಲಾತಿಯನ್ನು ಬದಲಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಇದಕ್ಕಾಗಿ ಮೀಸಲು ಮುಕ್ತ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಮೂಲಕ ಮೀಸಲಾತಿ ಬದಲಾವಣೆ ಮಾಡಬೇಕೆಂಬ ಅಭಿಯಾನ ಆರಂಭವಾಗಿದೆ.
ಈ ಸಮಿತಿ ಈಗಾಗಲೇ ಹಲವು ಸಭೆಗಳನ್ನು ನಡೆಸಿದ್ದು, ಗ್ರಾಮ ಗ್ರಾಮಗಳಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ನಡೆಸಿದೆ. ಸಮಿತಿಯ ಪ್ರಕಾರ ಒಂದೇ ಕ್ಷೇತ್ರ ಇಷ್ಟು ದೀರ್ಘ ಕಾಲ ಮೀಸಲು ಕ್ಷೇತ್ರವಾಗಿ ಉಳಿದಿರುವುದು ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ದವಾದುದು. ನಿರ್ದಿಷ್ಟ ಕಾಲಕ್ಕೆ ಅನುಸಾರವಾಗಿ ಮೀಸಲಾತಿ ಬದಲಿಸಬೇಕೆನ್ನುವುದು ಸಮಿತಿಯ ಬೇಡಿಕೆಯಾಗಿದೆ.