ಮಂಡ್ಯ: ಬೆಂಕಿ ತಗುಲಿ ಮೂರು ಎಕರೆ ಕಬ್ಬು ನಾಶ
ಮಂಡ್ಯ, ಡಿಸೆಂಬರ್, 07 : ಸೆಸ್ಕ್ ಸಂಸ್ಥೆ ನಿರ್ಲಕ್ಷ್ಯದಿಂದ ಕಬ್ಬಿನಗದ್ದೆ ಬದಿಯಿದ್ದ ಟ್ರಾನ್ಸ್ ಫಾರ್ಮರ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಪಸರಿಸಿದ ಪರಿಣಾಮ ಸುಮಾರು 3 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ನಾಶವಾಗಿದೆ.
ಪಾಂಡವಪುರ ತಾಲೂಕಿನ ಮಹದೇಶ್ವರಪುರ ಗ್ರಾಮದ ರೈತ ಎಂ.ಡಿ.ಅನಂತಮೂರ್ತಿ ಅವರು ಬೆಳೆದ ಕಬ್ಬು ಬೆಳೆ ಅಗ್ನಿ ಅನಾಹುತದಿಂದ ನಾಶ ಹೊಂದಿದ್ದು, ಸುಮಾರು 2.5 ಲಕ್ಷ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.[ಮಂಡ್ಯ ಕೋರಮಂಡಲ್ ಸಕ್ಕರೆ ಕಾರ್ಖಾನೆ ಕಾರ್ಮಿಕ ಆತ್ಮಹತ್ಯೆ]
ಅನಂತಮೂರ್ತಿ ಅವರ ಕಬ್ಬಿನಗದ್ದೆಯ ಬಳಿಯಿದ್ದ ಟ್ರಾನ್ಸ್ ಫಾರ್ಮರ್ ನಲ್ಲಿ ಶನಿವಾರ ಇದ್ದಕ್ಕಿದಂತೆಯೇ ಬೆಂಕಿ ಕಾಣಿಸಿಕೊಂಡಿದ್ದು ಅದರ ಕಿಡಿ ಕಬ್ಬಿನ ಗದ್ದೆಗೆ ಹಾರಿದ ಪರಿಣಾಮ ಬೆಂಕಿ ಹತ್ತಿಕೊಂಡಿದೆ. ಇದನ್ನು ಕಂಡ ಗ್ರಾಮಸ್ಥರು ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸುವಷ್ಟರಲ್ಲಿ ಶೇ. 75ರಷ್ಟು ಕಬ್ಬು ಸುಟ್ಟು ಹೋಗಿತ್ತು. ಆದರೆ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಬೆಂಕಿ ಇತರೆ ಕಬ್ಬಿನ ಗದ್ದೆಗೆ ಹರಡುವುದನ್ನು ತಪ್ಪಿಸಿದ್ದಾರೆ. ಆದರೂ ಸುಮಾರು ಮೂರು ಎಕರೆ ಪ್ರದೇಶದಲ್ಲಿದ್ದ ಕಬ್ಬು ನಾಶವಾಗಿದೆ.[ಶಿವನಸಮುದ್ರ ಬಳಿ ಬಿಎಚ್ಇಎಲ್ ಸೌರ ವಿದ್ಯುತ್ ಘಟಕ]
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮ ಲೆಕ್ಕಿಗ ರೇವಣ್ಣ, ಸೆಸ್ಕ್ ಎಇಇ ಆರ್.ಟಿ.ಚಂದ್ರಮೌಳಿ, ಜೆಇ ಓಬಳಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ ಗ್ರಾಮಸ್ಥರು ಪರಿಶೀಲನೆಗೆ ಬಂದ ಸೆಸ್ಕ್ ನ ಅಧಿಕಾರಿಗಳಿಗೆ ದಿಗ್ಭಂದನ ಹಾಕಿ ನಿಮ್ಮ ನಿರ್ಲಕ್ಷ್ಯತನದಿಂದ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳ ಮೇಲೆ ಕಿಡಿಕಾರಿದ್ದಾರೆ. ಜೊತೆಗೆ ನಷ್ಟಗೊಂಡ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.