ಕಬ್ಬು ಬೆಳೆ ಇಳಿಕೆ, ಸಕ್ಕರೆ ಬೆಲೆ ಭಾರೀ ಏರಿಕೆ ಸಂಭವ
ಬೆಂಗಳೂರು, ಮೇ 3 : ರಾಜ್ಯದಲ್ಲಿ ಪ್ರಸಕ್ತ ವರ್ಷ ಕಬ್ಬು ಬೆಳೆ ಗಣನೀಯವಾಗಿ ಇಳಿಕೆಯಾಗಿದ್ದು, ಸಕ್ಕರೆ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ. ಜಲಾಶಯಗಳಲ್ಲಿ ನೀರಿಲ್ಲದೇ ಬೆಳೆಗಳು ಒಣಗುತ್ತಿದ್ದು, ಕಬ್ಬಿನ ಇಳುವರಿ ಸುಮಾರು 70 ಲಕ್ಷ ಟನ್ ನಷ್ಟು ಕಡಿಮೆಯಾಗಲಿದೆ. ಇದರಿಂದಾಗಿ ಸಕ್ಕರೆ ಬೆಲೆ ಕೆಜಿಗೆ 40 ರು. ದಾಟುವ ಸಾಧ್ಯತೆಯಿದೆ.
ಈ ಬಾರಿ 450 ಲಕ್ಷ ಮೆಟ್ರಿಕ್ ಟನ್ ಕಬ್ಬು ದೊರೆಯುವ ನಿರೀಕ್ಷೆಯಿತ್ತು. ಆದರೆ ಹಿಂದಿನ ಅಂದಾಜಿಗೆ ವ್ಯತಿರಿಕ್ತವಾಗಿ ಈ ಪ್ರಮಾಣ 380 ಲಕ್ಷ ಟನ್ಗಳಷ್ಟು ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಹೆಚ್ಚಿನ ಕಬ್ಬು ಇಳುವರಿ ಬಂದಿತ್ತು. ಇದರಿಂದಾಗಿ ಸಕ್ಕರೆ ಬೆಲೆ 20 ರು. ಆಸುಪಾಸಿನಲ್ಲಿತ್ತು. ಇದೀಗ ಸಕ್ಕರೆ ದರ 30 ರು. ಆಸುಪಾಸಿನಲ್ಲಿದೆ.
ಕಳೆದ ಮೂರು ವರ್ಷಗಳಲ್ಲಿ ಕಬ್ಬಿನ ಉತ್ಪಾದನೆ ಪ್ರಮಾಣ ಹೆಚ್ಚಿದ್ದರೂ ಬೆಳೆದ ಕಬ್ಬನ್ನು ನಿಗದಿತ ಪ್ರಮಾಣದಲ್ಲಿ ಅರೆಯಲು ಸಕ್ಕರೆ ಕಾರ್ಖಾನೆಗಳು ವಿಫಲವಾಗಿದ್ದವಲ್ಲದೆ, ತಾವು ಅರೆದ ಕಬ್ಬಿಗೆ ಪ್ರತಿಯಾಗಿ ಕಬ್ಬಿಗೆ ನಿಗದಿಯಾದ ಬೆಲೆಯನ್ನು ಕೊಡಲು ಹಿಂದೇಟು ಹಾಕಿದ್ದವು. [ಮೇ.1ರಿಂದ ಆನ್ ಲೈನ್ ಮಾರುಕಟ್ಟೆಯಲ್ಲಿ ಮಂಡ್ಯದ ಸಿಹಿ ಬೆಲ್ಲ]
ಇದೇ ಕಾರಣಕ್ಕಾಗಿ 2013-14ರ ಸಾಲಿಗೆ ಸಂಬಂಧಿಸಿದಂತೆ ಪ್ರತಿ ಕೆಜಿ ಸಕ್ಕರೆಗೆ ನೂರು ರು.ಗಳಂತೆ ರೈತರಿಗೆ ಬಾಕಿ ಪಾವತಿ ಮಾಡಬೇಕಿದ್ದು, ಕಳೆದ ಎರಡು ವರ್ಷಗಳ ಅವಧಿಯ ಸಾವಿರಾರು ಕೋಟಿ ರೂಪಾಯಿ ಹಣವನ್ನು ಕೊಡಬೇಕಿದೆ. ಇಳುವರಿಯೂ ಕಡಿಮೆಯಾಗಿ, ಕಾರ್ಖಾನೆಯಿಂದಲೂ ಪರಿಹಾರ ಸಿಗದೆ ರೈತ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ.
ಲಭ್ಯವಾಗುತ್ತಿರುವ ಕಬ್ಬಿಗೂ, ಸಕ್ಕರೆಯ ಮೌಲ್ಯಕ್ಕೂ ಪರಸ್ಪರ ಹೊಂದಾಣಿಕೆಯಾಗದೆ ಇರುವುದರಿಂದ ರೈತರಿಗೆ ನಿಗದಿ ಮಾಡಿದ ಬೆಲೆ ಕೊಡಲಾಗುತ್ತಿಲ್ಲ ಎಂದು ಕಾರ್ಖಾನೆಗಳು ತಕರಾರು ಎತ್ತಿದ್ದವು. ಇದೇ ಕಾರಣಕ್ಕಾಗಿ ಸರ್ಕಾರ ಕೂಡ ಹಲವು ರೀತಿಯ ರಿಯಾಯ್ತಿಗಳನ್ನು ನೀಡಿತ್ತಾದರೂ 2013-14ನೇ ಸಾಲಿನ ಕಬ್ಬು ಬಾಕಿಯೇ ಪಾವತಿಯಾಗಿಲ್ಲ. [ಕಬ್ಬು ಬೆಳೆಗಾರರ ಆತ್ಮಹತ್ಯೆ : ಯಾರು, ಏನು ಹೇಳಿದರು?]
ಇದೀಗ ಬರಗಾಲದ ಕಾರಣಕ್ಕಾಗಿ ಕಬ್ಬು ಬೆಳೆಯ ಉತ್ಪಾದನೆಯೇ ಕುಸಿದು ಹೋಗಿರುವ ಕಾರಣದಿಂದ ಕಾರ್ಖಾನೆಗಳು ಕಬ್ಬಿಗಾಗಿ ಹಪಹಪಿಸುವ ಪರಿಸ್ಥಿತಿ ಬಂದಿದ್ದು, ಕಬ್ಬು ಉತ್ಪಾದನೆ ಕಡಿಮೆಯಾಗಿರುವುದರಿಂದ ಸಕ್ಕರೆಯ ಮೌಲ್ಯ ಹೆಚ್ಚಲಿದೆ. ಹೀಗೆ ಸಕ್ಕರೆಯ ಮೌಲ್ಯ ಹೆಚ್ಚಾದರೆ ಮಾತ್ರ ರಾಜ್ಯದ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿಗೆ ನಿಗದಿ ಮಾಡಿದ ಪ್ರಮಾಣದಷ್ಟು ಬೆಲೆ ನೀಡಲು ಸಾಧ್ಯವಾಗಲಿದೆ. [ಬೆಂಕಿ ಆಕಸ್ಮಿಕಕ್ಕೆ ಕಬ್ಬಿನ ಬೆಳೆ ಸರ್ವನಾಶ, ರೈತ ಕಂಗಾಲು]