ಲಸಿಕಾ ಅಭಿಯಾನದ ಬಗ್ಗೆ ಸುಧಾಕರ್ ಮೆಚ್ಚುಗೆ: ಸಿದ್ದರಾಮಯ್ಯ ವಿರುದ್ಧ ಕಿಡಿ
ಹುಬ್ಬಳ್ಳಿ, ಅಕ್ಟೋಬರ್ 22: ''ಕೊರೊನಾ ಲಸಿಕೆ ಅಭಿಯಾನ ವಿಶ್ವದಲ್ಲೇ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ವಿಶ್ವದಲ್ಲಿ ಅತ್ಯಂತ ವೇಗವಾದ ಮತ್ತು ಬೃಹತ್ ಲಸಿಕಾ ಅಭಿಯಾನವಾಗಿ ಹೊರಹೊಮ್ಮಿದೆ. ಇಡೀ ಜಗತ್ತಿನಲ್ಲಿ ಉಚಿತ ಹಾಗೂ ಬೇರೆ ದೇಶಗಳಿಗಿಂತ ಹೆಚ್ಚು ಲಸಿಕೆಯನ್ನು ಭಾರತದಲ್ಲಿ ನೀಡಲಾಗಿದೆ. ಇನ್ನೂ ಉಳಿದವರಿಗೆ ವೇಗವಾಗಿ ಲಸಿಕೆ ನೀಡಲಾಗುವುದು,'' ಎಂದು ಭಾರತದ ಲಸಿಕಾ ಅಭಿಯಾನದ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಕೊಂಡಾಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ," ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಿಯಾನದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಲಸಿಕಾ ಅಭಿಯಾನದಲ್ಲಿ ಈಗಾಗಲೇ ಶೇ.83 ಜನರಿಗೆ ಮೊದಲ ಡೋಸ್ ಹಾಗೂ ಶೇ.38 ಜನರಿಗೆ ಎರಡನೇ ಡೋಸ್ ನೀಡಲಾಗಿದೆ ಎಂದು ಅವರು ಹೇಳಿದರು. ಮಾತ್ರವಲ್ಲದೇ ಭಾರತದಲ್ಲಿ ಉಚಿತವಾಗಿ ಡೋಸ್ ನೀಡಲಾಗುತ್ತಿದೆ. ಇದರ ಜೊತೆಗೆ ಭಾರತವು ಅಮೆರಿಕದ ಎರಡೂವರೆ ಪಟ್ಟು, ಬ್ರೆಜಿಲ್ನ 4 ಪಟ್ಟು, ಜಪಾನ್ನ 8 ಪಟ್ಟು, ಇಂಗ್ಲೆಂಡ್ನ 10 ಪಟ್ಟು, ಯುರೋಪ್ ದೇಶಗಳ 2 ಪಟ್ಟು ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಎರಡೂ ಡೋಸ್ ಪಡೆದವರ ಸಂಖ್ಯೆ 27.4 ಕೋಟಿ ಇದೆ. ಅನೇಕ ದೇಶಗಳಲ್ಲಿ ಹಣ ಕೊಟ್ಟು ಖರೀದಿ ಮಾಡುವ ವ್ಯವಸ್ಥೆ ಇದೆಎಂದರು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ 35 ಸಾವಿರ ಕೋಟಿ ರೂ. ನೀಡಲಾಗಿದೆ. ಲಸಿಕೆ ಖರೀದಿಗೆ ರಾಜ್ಯ ಸರ್ಕಾರದಿಂದ ಒಂದು ರೂಪಾಯಿಯೂ ನೀಡಿಲ್ಲ.
ಲಸಿಕೆ ಅಭಿಯಾನದ ಬಗ್ಗೆ ಸುಧಾಕರ್ ಸಂತಸ
ಲಸಿಕೆ ಅಭಿಯಾನದ ಬಗ್ಗೆ ಸುಧಾಕರ್ ಸಂತಸಗೊಂಡ ಆರೋಗ್ಯ ಸಚಿವ ಸುಧಾಕರ್ ಮೋದಿ ಸರ್ಕಾರವನ್ನು ಕೊಂಡಾಡಿದ್ದಾರೆ. ಕರ್ನಾಟಕದಲ್ಲಿ ಅತಿ ಕಡಿಮೆ ಲಸಿಕೆಯನ್ನು ಮಾರ್ಚ್ನಲ್ಲಿ ನೀಡಲಾಗಿತ್ತು. ಸೆಪ್ಟೆಂಬರ್ನಲ್ಲಿ 1.48 ಕೋಟಿ ನೀಡಲಾಗಿತ್ತು. ಒಂದೇ ದಿನ 31.75 ಲಕ್ಷ ಲಸಿಕೆಯನ್ನು ಸೆಪ್ಟೆಂಬರ್ 17 ರಂದು ನೀಡಲಾಗಿತ್ತು ಎಂದು ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ. ರಾಜ್ಯದಲ್ಲಿ ಇನ್ನೂ ಶೇ.17 ರಷ್ಟು ಜನರಿಗೆ ಮೊದಲ ಡೋಸ್ ಹಾಗೂ ಶೇ.62 ಜನರಿಗೆ 2ನೇ ಡೋಸ್ ನೀಡಬೇಕಿದೆ. ರಾಜ್ಯದಲ್ಲಿ ಈಗ 60 ಲಕ್ಷ ಲಸಿಕೆ ದಾಸ್ತಾನು ಇದೆ. ಒಂದನೇ ಡೋಸ್ ಪಡೆದವರು ಎರಡನೇ ಡೋಸ್ ಪಡೆಯಲು ಉದಾಸೀನ ತೋರಬಾರದು. ಒಂದೇ ಡೋಸ್ನಿಂದ ಸಂಪೂರ್ಣ ರೋಗನಿರೋಧಕ ಶಕ್ತಿ ದೊರೆಯುವುದಿಲ್ಲ. ಎರಡನೇ ಡೋಸ್ ಅನ್ನು 52 ಲಕ್ಷ ಜನರು ಪಡೆಯಬೇಕಿದ್ದು, ಅವರು ಆದಷ್ಟು ಬೇಗ ಬಂದು ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಮೋದಿ ಪರ ಸುಧಾಕರ್ ಬ್ಯಾಟಿಂಗ್
ಭಾರತದಲ್ಲಿ 100 ಕೋಟಿ ಕೋವಿಡ್ ಲಸಿಕೆಯನ್ನು ನೀಡುವ ಮೂಲಕ ದೊಡ್ಡ ಮೈಲಿಗಲ್ಲನ್ನು ದೇಶ ತಲುಪಿದೆ. ಇದಕ್ಕಾಗಿ ಹಲವಾರು ಜನರ ಶ್ರಮವಿದೆ. ಹೀಗಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಕೊರೊನಾ ನಿಯಂತ್ರಿಸಲು, ಲಸಿಕೆ ಕಂಡುಹಿಡಿಯಲು ವಿಜ್ಞಾನಿಗಳು, ಆರೋಗ್ಯ ಸಿಬ್ಬಂದಿ, ಪೊಲೀಸ್ ಇಲಾಖೆಯ ಅಪಾರ ಶ್ರಮವಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಞರು, ಕಾರ್ಯಕರ್ತರು ಕೂಡ ಹಗಲಿರುಳು ಕೊರೊನಾ ನಿಯಂತ್ರಿಸಲು ಶ್ರಮಿಸಿದ್ದಾರೆ. ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ ಎಂದರು. ಇದಲ್ಲದೇ ದೇಶದಲ್ಲಿ ಬೇರೆ ಬೇರೆ ಲಸಿಕೆಗಳು ತಯಾರಿಕೆಗೆ ವರ್ಷಗಳೇ ಕಳೆದು ಹೋಗಿವೆ. ಹೀಗಿರುವಾಗ ಕೇಂದ್ರ ಸರ್ಕಾರದ ದೂರದೃಷ್ಟಿ, ಬದ್ಧತೆ, ನಾಯಕತ್ವದಿಂದಾಗಿ ಬಹುಬೇಗ ಲಸಿಕೆ ತಯಾರಿಕೆಗೆ ಸಾಧ್ಯವಾಗಿದೆ ಎಂದರು.
ಲಸಿಕೆ ಅಭಿಯಾನದ ಬಗ್ಗೆ ವಿರೋಧ ಪಕ್ಷದ ನಾಯಕರು
ಕೊರೊನಾ ಲಸಿಕೆ ಅಭಿಯಾನದ ಬಗ್ಗೆ ವಿರೋಧ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಆರೋಗ್ಯ ಸಚಿವರು ಸಿಡಿದೆದ್ದಿದ್ದಾರೆ. ಒಬ್ಬ ಭಾರತೀಯನಾಗಿ ಲಸಿಕೆಯ ಸಾಧನೆಯ ಬಗ್ಗೆ ಸಿದ್ದರಾಮಯ್ಯ ಶ್ಲಾಘಿಸಬಹುದಿತ್ತು. ಆದರೆ ಸಿದ್ದರಾಮಯ್ಯ ಹಾಗೆ ಮಾಡಲಿಲ್ಲ. ಅವರು ಯಾವುದೇ ಪ್ರಗತಿ ಕಾರ್ಯವನ್ನು ವಿರೋಧಿಸುತ್ತಾರೆ. ಒಂದಾಗಿ ಹೋರಾಡಬೇಕಿದ್ದ ವಿಪಕ್ಷ ನಾಯಕರು ಸಾವಿನಲ್ಲೂ ರಾಜಕಾರಣ ಮಾಡಿದ್ದಾರೆ. ಮೋದಿ ಲಸಿಕೆ ಎಂದು ಹೇಳಿ ಜನರನ್ನು ದಾರಿ ತಪ್ಪಿಸಿದರು. ಬಳಿಕ ಅವರುಗಳೇ ಸರದಿಯಲ್ಲಿ ನಿಂತು ಲಸಿಕೆ ಹಾಕಿಸಿಕೊಂಡಿದ್ದಾರೆ. ಇಂಥ ಪ್ರತಿಕ್ರಿಯೆಯನ್ನು ನಾನು ಅವರಿಂದ ನಿರೀಕ್ಷಿಸಿರಲಿಲ್ಲ ಎಂದರು.
Recommended Video
ಜನರನ್ನು ದಿಕ್ಕು ತಪ್ಪಿಸುವ ಕೆಲಸ
ಲಸಿಕೆಯ ವಿಚಾರದಲ್ಲೂ ಅನೇಕರು ರಾಜಕಾರಣ ಮಾಡಿದರು. ಒಂದಾಗಿ ಹೋರಾಡಬೇಕಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ರಾಜಕಾರಣದಲ್ಲಿ ತೊಡಗಿಕೊಂಡಿತು. ಸಹಕಾರದ ಹೆಸರಲ್ಲಿ ಅಸಹಕಾರ ಮಾಡಿದರು. ಇದನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ. ಲಸಿಕೆ ಬಂದಾಗ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಹೇಳಿದರು. ಪ್ರಾರಂಭದಲ್ಲಿ ಜನರು ಇವರ ಮಾತು ನಂಬಿ ಲಸಿಕೆ ಪಡೆಯದೆ ಪ್ರಾಣ ಕಳೆದುಕೊಂಡಿರುವ ಉದಾಹರಣೆಯೂ ಇದೆ. ಕಾಂಗ್ರೆಸ್ ಗೆ ಈಗ ನೈತಿಕತೆ ಇದೆಯೇ ಎಂದು ಪ್ರಶ್ನೆ ಮಾಡಬೇಕು. ಮೋದಿ ಲಸಿಕೆ ಎಂದವರು ಸಾಲಿನಲ್ಲಿ ನಿಂತು ಲಸಿಕೆ ಪಡೆದರು ಎಂದರು.
ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ. ಕಾಂಗ್ರೇಸ್ ನೀಚ ಬುದ್ಧಿ ಜನರಿಗೆ ಅರ್ಥವಾಗಿದೆ. ಜನ ಬಹುಮತ ನೀಡಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತಾರೆ ವಿಶ್ವಾಸವಿದೆ ಎಂದರು.