ಬಿಜೆಪಿಗೆ ದುಬಾರಿಯಾದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಋಣ ಸಂದಾಯ!
ಬೆಂಗಳೂರು, ಜ. 25: ಮೂರನೇ ಬಾರಿ ಖಾತೆ ಮರು ಹಂಚಿಕೆ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರಾ? ಎಂಬ ಚರ್ಚೆಯೊಂದು ಇದೀಗ ಬಿಜೆಪಿಯಲ್ಲಿಯೇ ಶುರುವಾಗಿದೆ. ಎರಡು ಪ್ರಮುಖ ಖಾತೆಗಳನ್ನು ಒಬ್ಬ ಸಚಿವರಿಗೆ ಕೊಡುವ ಮೂಲಕ ಯಡಿಯೂರಪ್ಪ ಅವರು ಪಕ್ಷದಲ್ಲಿನ ಬಹುತೇಕ ಸಚಿವರನ್ನು ಎದುರು ಹಾಕಿಕೊಂಡಂತಾಗಿದೆ.
ಅದರಿಂದಾಗಿ ಬಿಜೆಪಿಯಲ್ಲಿ ಮೂಲ-ವಲಸೆ ಕಂದಕ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ಅದು ಯಡಿಯೂರಪ್ಪ ಅವರ ಸರ್ಕಾರದ ಮೇಲೆ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳು ಕಂಡು ಬಂದಿವೆ. ಕಷ್ಟಕಾಲದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಬೆಂಗಾವಲಿನಂತಿದ್ದ ಸಚಿವರೇ ಇದೀಗ ರಾಜೀನಾಮೆ ಕೊಡುವ ಮಾತುಗಳನ್ನು ಆಡುತ್ತಿರುವುದು ಬಿಜೆಪಿ ಸರ್ಕಾರದ ಭವಿಷ್ಯದ ಕುರಿತು ಪ್ರಶ್ನೆ ಏಳುವಂತೆ ಮಾಡಿದೆ.
ಮತ್ತೆ ಖಾತೆ ಬದಲಾವಣೆ ಮಾಡಿದ ಸಿಎಂ ಯಡಿಯೂರಪ್ಪ; ಯಾರಿಗೆ ಯಾವ ಖಾತೆ? ಇಲ್ಲಿದೆ ಮಾಹಿತಿ!
ಅಷ್ಟಕ್ಕೂ ಯಡಿಯೂರಪ್ಪ ಅವರು ಅಂಥದ್ದೊಂದು ನಿರ್ಧಾರಕ್ಕೆ ಬರಲು ಕಾರಣವಾದರೂ ಏನು? ಆಪ್ತರನ್ನು ಸಿಎಂ ಯಡಿಯೂರಪ್ಪ ಅವರು ಎದುರು ಹಾಕಿಕೊಂಡಿದ್ದಾದರೂ ಯಾಕೆ? ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಬಿಜೆಪಿ ಕಾರ್ಯಕರ್ತರನ್ನು ಕಾಡುತ್ತಿದೆ. ಇಲ್ಲಿದೆ ಅದಕ್ಕೆ ಉತ್ತರ!
ದುಬಾರಿಯಾದ ಋಣ ಸಂದಾಯ!
ಮೂರನೇ ಬಾರಿ ಖಾತೆ ಮರು ಹಂಚಿಕೆ ಮಾಡಿರುವ ಸಿಎಂ ಯಡಿಯೂರಪ್ಪ ಅವರು, ಮೂವರು ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ. ಖಾತೆ ಬದಲಾವಣೆಯಿಂದ ಮೂಲ-ವಲಸೆ ಬಿಜೆಪಿಗರ ಮಧ್ಯದ ಕಂದಕ ಮತ್ತಷ್ಟು ಹೆಚ್ಚಾಗಲಿದೆ ಎಂಬ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿವೆ. ಅದಕ್ಕೆ ಪುಷ್ಠಿ ಕೊಡುವಂತೆ ಮೂಲ ಬಿಜೆಪಿ ಸಚಿವರ ಖಾತೆಗಳನ್ನು ವಲಸೆ ಬಿಜೆಪಿ ಸಚಿವರಿಗೆ ಸಿಎಂ ಹಂಚಿಕೆ ಮಾಡಿದ್ದಾರೆ. ಆ ಮೂಲಕ ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಪಣಕ್ಕೊಡ್ಡಿದವರ ಋಣವನ್ನು ಯಡಿಯೂರಪ್ಪ ತೀರಿಸಿದ್ದಾರೆ.
ಮೂಲ ಬಿಜೆಪಿಗರ ಆಕ್ರೋಶ
ಆದರೆ ಯಡಿಯೂರಪ್ಪ ಅವರ ಋಣ ಸಂದಾಯ ಮೂಲ ಬಿಜೆಪಿಯ ಸಚಿವರು, ಶಾಸಕರ ಆಕ್ರೋಶಕ್ಕೆ ಗುರಿಯಾಗಿದೆ. ಜೊತೆಗೆ ಬಿಜೆಪಿ ಭವಿಷ್ಯದ ದೃಷ್ಟಿಯಿಂದ ದುಬಾರಿ ನಿರ್ಧಾರವನ್ನು ಯಡಿಯೂರಪ್ಪ ಅವರು 'ಕೈ'ಗೊಂಡಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ. ಒಂದು ಬಾರಿ ಸರ್ಕಾರ ರಚನೆ ಮಾಡಲು ಸಹಾಯ ಮಾಡಿದವರಿಗೆ ಉತ್ತಮ ಖಾತೆಗಳನ್ನು ಕೊಡುವ ಮೂಲಕ ಕಳೆದ ನಾಲ್ಕೈದು ದಶಕಗಳಿಂದ ಪಕ್ಷ ಸಂಘಟನೆ ಮಾಡುತ್ತ ಬಂದಿರುವವರನ್ನು ಸಿಎಂ ಯಡಿಯೂರಪ್ಪ ಅವರು ನಿರ್ಲಕ್ಷ ಮಾಡಿದ್ದಾರೆ ಎಂಬ ಮಾತುಗಳು ಬಿಜೆಪಿಯಲ್ಲಿ ಈಗ ಜೋರಾಗಿ ಕೇಳಿ ಬರುತ್ತಿವೆ. ಇದು ಬಿಜೆಪಿಯಲ್ಲಿ ಮತ್ತೊಂದು ಹಂತದ ಬೆಳವಣಿಗೆಗೆ ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ. ಅಷ್ಟಕ್ಕೂ ಎರಡು ಪ್ರಮುಖ ಖಾತೆಗಳನ್ನು ಸಚಿವ ಡಾ. ಸುಧಾಕರ್ ಅವರಿಗೆ ಕೊಡಲು ಕಾರಣಗಳೇನು?
ಮತ್ತೆ ಖಾತೆ ಕ್ಯಾತೆ : ನಾಳೆ ಇಬ್ಬರು ಸಚಿವರ ರಾಜೀನಾಮೆ?
'ಕೈ' ಸರ್ಕಾರದಲ್ಲೂ ಪ್ರಭಾವಿ
ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗಲೂ ಡಾ. ಸುಧಾಕರ್ ಅವರು ಪ್ರಭಾವಿಯಾಗಿದ್ದರು. ಅವರು ಆಗ ಸಚಿವರಾಗಿದ್ದಿಲ್ಲ ಎಂಬುದನ್ನು ಬಿಟ್ಟರೆ, ಆಗಿನ ಸಿಎಂ ಸಿದ್ದರಾಮಯ್ಯ ಅವರು ಡಾ. ಸುಧಾಕರ್ ಅವರ ಸಲಹೆಗಳನ್ನು ತೆಗೆದು ಹಾಕುತ್ತಿರಲಿಲ್ಲವಂತೆ.
ಅಂತಹ ಸುಧಾಕರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದೆ ಒಂದು ಕುತೂಹಲದ ಸಂಗತಿ. ಇದೀಗ ಬಯಸಿದ ಖಾತೆಗಳನ್ನು ಪಡೆಯುವ ಮೂಲಕ ಬಿಜೆಪಿ ನಾಯಕರಷ್ಟೆ ಅಲ್ಲ, ಕಾರ್ಯಕರ್ತರಲ್ಲಿಯೂ ಡಾ. ಸುಧಾಕರ್ ಕುತೂಹಲ ಮೂಡಿಸಿದ್ದಾರೆ. ಕೆಡರ್ ಬೇಸ್ ಪಾರ್ಟಿಯಲ್ಲಿ ಡಾ. ಸುಧಾಕರ್ ಅವರು ಇಷ್ಟೊಂದು ಪ್ರಭಾವಿಯಾಗಿದ್ದು ಹೇಗೆ ಎಂಬ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ. ಇಲ್ಲಿದೆ ಅದಕ್ಕೆ ಉತ್ತರ.
Recommended Video
ಬಿಜೆಪಿ ಹೈಕಮಾಂಡ್ ಆಸರೆ!
ಸಿಎಂ ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿದ್ದರೂ ಕೂಡ ಹೈಕಮಾಂಡ್ ಮೂಲಕ ತಮ್ಮ ಖಾತೆಗಳನ್ನು ಮರಳಿ ಪಡೆಯಲು ಸಚಿವ ಡಾ. ಸುಧಾಕರ್ ಸಫಲರಾಗಿದ್ದಾರೆಂದು ಬಿಜೆಪಿಯ ನಾಯಕರೊಬ್ಬರು ತಿಳಿಸಿದ್ದಾರೆ. ಡಾ. ಸುಧಾಕರ್ ಅವರು ಯಾವುದೇ ಪಕ್ಷದಲ್ಲಿದ್ದರೂ ತಮ್ಮ ಪ್ರಭಾವ ಹೊಂದಿರುತ್ತಾರೆ. ಹೀಗಾಗಿ ಈಗ ಯಡಿಯೂರಪ್ಪ ಅವರಿಗೆ ಮನಸ್ಸಿಲ್ಲದಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಹೆಚ್ಚುವರಿಯಾಗಿ ಅವರಿಗೆ ಕೊಡಲಾಗಿದೆ.
ಇದೀಗ ಮತ್ತೆ ಖಾತೆ ವಿಚಾರವಾಗಿ ಮತ್ತೆ ಅಸಮಾಧಾನ ಭುಗಿಲೆದ್ದರೂ ಹೈಕಮಾಂಡ್ ಕಡೆಗೆ ಯಡಿಯೂರಪ್ಪ ಅವರು ಕೈತೋರಿಸಬಹುದು. ಆದರೆ ಅಸಮಾಧಾನಕ್ಕೋಳಗಾದ ಸಚಿವರು ಹಾಗೂ ಶಾಸಕರನ್ನು ಸಮಾಧಾನ ಮಾಡುವುದು ಅಷ್ಟೊಂದು ಸುಲಭವಲ್ಲ ಎಂಬುದು ಸ್ವತಃ ಸಿಎಂ ಅವರಿಗೂ ಗೊತ್ತಿದೆ. ಹೀಗಾಗಿ ನಾಳೆ ಗಣರಾಜ್ಯೋತ್ಸವ ಧ್ವಜಾರೋಹಣದ ಬಳಿಕ ಸಚಿವರಾದ ಆನಂದ್ ಸಿಂಗ್ ಹಾಗೂ ಮಾಧುಸ್ವಾಮಿ ಅವರು ಕೈಗೊಳ್ಳುವ ನಿರ್ಧಾರದ ಮೇಲೆ ಬಿಜೆಪಿ ಸರ್ಕಾರದ ಭವಿಷ್ಯ ನಿಂತಿದೆ ಎಂಬುದು ಕೂಡ ಸತ್ಯ!