ಸಿಎಂ ಯಡಿಯೂರಪ್ಪ ನರಸಿಂಹ ಹೋಮವನ್ನೇ ಮಾಡಿಸಿದ್ದು ಯಾಕೆ?
ಬೆಂಗಳೂರು, ಡಿ. 15: ಉಪ ಚುನಾವಣೆಯಲ್ಲಿ ಅಂದುಕೊಂಡಿದ್ದಕ್ಕಿಂತ ದೊಡ್ಡ ಮಟ್ಟದ ಗೆಲುವು, ಪಕ್ಷದಲ್ಲಿ ಹಾಗೂ ಜನರಲ್ಲಿ ಹೆಚ್ಚುತ್ತಿರುವ ಪುತ್ರ ಬಿ ವೈ ವಿಜಯೇಂದ್ರ ವರ್ಚಸ್ಸು, ಸತತ ಸೋಲು, ಅವಮಾನಗಳ ನಂತರ ಏರಿರುವ ಮುಖ್ಯಮಂತ್ರಿ ಕುರ್ಚಿ, ಹೀಗೆ ಇಂತಹ ಏಳಿಗೆಯೇ ಶತ್ರುಗಳ ಕಂಗೆಣ್ಣಿಗೆ ಗುರಿಯಾಗಿಸುವ ಆತಂಕ ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗಿದೆಯಾ? ಇಂತಹದೊಂದು ಪ್ರಶ್ನೆಗೆ ಕಾರಣವಾಗಿರುವುದು ಭಾನುವಾರ ಬೆಂಗಳೂರಿನ ಡಾಲರ್ಸ್ ಕಾಲನಿ ನಿವಾಸದಲ್ಲಿ ಯಡಿಯೂರಪ್ಪ ಮಾಡಿಸಿದ ನರಸಿಂಹ ಹೋಮ.
ಇದರ ಜೊತೆಗೆ ಸುದರ್ಶನ ಹೋಮವನ್ನೂ ಸಿಎಂ ಮಾಡಿಸಿದ್ದಾರೆ ಎಂದು ವರದಿಯಾಗಿದೆ. ಕುಟುಂಬದ ಅರ್ಚಕರಿಂದ ಧವಳಗಿರಿ ನಿವಾಸದಲ್ಲಿ ಬೆಳ್ಳಂಬೆಳಗ್ಗೆಯೆ ಸತತ ಮೂರು ಗಂಟೆಗಳ ಕಾಲ ನಡೆಸಿದ ಹೋಮದಲ್ಲಿ ತಂದೆ ಬಿಎಸ್ವೈ ಹಾಗೂ ಮಗ ವಿಜಯೇಂದ್ರ ಇಬ್ಬರೂ ಭಾಗವಹಿಸಿದ್ದರು.
ನಾನೇ ರಾಜಾಹುಲಿ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ ಯಡಿಯೂರಪ್ಪ
ಉಪ ಚುನಾವಣೆಯಲ್ಲಿ 15 ರಲ್ಲಿ 12 ವಿಧಾನಸಭಾ ಕ್ಷೇತ್ರಗಳಲ್ಲಿ ಜಯಿಸುವ ಮೂಲಕ ಪಕ್ಷದೊಳಗೆ ಹಾಗೂ ಆಡಳಿತದಲ್ಲಿ ಯಡಿಯೂರಪ್ಪ ಮತ್ತೆ ತಮ್ಮ ಹಿಂದಿನ ಹಿಡಿತ ಸಾಧಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಪುತ್ರ ಬಿ ವೈ ವಿಜಯೇಂದ್ರ ಕೂಡ ಪಕ್ಷದ ಒಳಗೆ-ಹೊರಗೆ ಬೆಳೆಯುತ್ತಿದ್ದಾರೆ. ಕೆ ಆರ್ ಪೇಟೆಯಂತಹ ಜೆಡಿಎಸ್ ಭದ್ರಕೋಟೆಗೆ ನುಗ್ಗಿ ಗೆಲುವು ಸಾಧಿಸುವ ಮೂಲಕ ವಿಜಯೇಂದ್ರ ತಮ್ಮ ಸಾಮರ್ಥವನ್ನ ತೋರಿಸಿದ್ದಾರೆ.
ಒಕ್ಕಲಿಗ ಸ್ವಾಮೀಜಿ ಸಮ್ಮುಖದಲ್ಲಿ ಇದೇನಿದು ಬಿಎಸ್ವೈ ರಾಜಕೀಯ ತಂತ್ರಗಾರಿಕೆ
ನೆಲೆ ಇಲ್ಲದ ದಕ್ಷಿಣ ಕರ್ನಾಟಕ ಭಾಗವದಲ್ಲಿ ಬಿಜೆಪಿ ವರ್ಚಸ್ಸು ಹೆಚ್ಚಾಗಲು ವಿಜಯೇಂದ್ರ ಶ್ರಮಿಸುತ್ತಿದ್ದಾರೆ. ಹೀಗಾಗಿ ಜೆಡಿಎಸ್ ನಾಯಕರ ಕಣ್ಣು ಕೂಡ ವಿಜಯೇಂದ್ರ ಮೇಲೆ ಬಿದ್ದಿರುವ ಆತಂಕ ಯಡಿಯೂರಪ್ಪ ಅವರಿಗೆ ಎದುರಾಗಿದೆ. ಇದಕ್ಕಾಗಿ ಮುಂದಿನ ತೊಂದರೆ ತಪ್ಪಿಸಿಕೊಳ್ಳಲು ಯಡಿಯೂರಪ್ಪ 'ಶತ್ರು ನಿಗ್ರಹ'ಕ್ಕಾಗಿ ನರಸಿಂಹ ಹೋಮ ಮಾಡಿಸಿದ್ದಾರೆ ಎಂದು ಜ್ಯೋತಿಷಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಡೇಸಾಥ್ ಶನಿಯ ಕೊನೆ ಅವಧಿಯಲ್ಲಿದ್ದಾರೆ ಯಡಿಯೂರಪ್ಪ
"ನರಸಿಂಹ ಹೋಮ ಅಥವಾ ಸುದರ್ಶನ ಹೋಮ ಮಾಡುವ ಉದ್ದೇಶ ಏನೆಂದರೆ, ಶತ್ರುಗಳಿಂದ ವಾಮಾಚಾರ ಅಥವಾ ಕೃತ್ರಿಮ ಪ್ರಯೋಗ ಆಗಿದ್ದರೆ ಅದರಿಂದ ರಕ್ಷಣೆ ಪಡೆಯುವುದು. ಇನ್ನು ಯಡಿಯೂರಪ್ಪ ಅವರದು ವೃಶ್ಚಿಕ ರಾಶಿ. ಮುಂದಿನ ಜನವರಿಗೆ ಸಾಡೇಸಾಥ್ ಶನಿ ಸಂಚಾರ ಪೂರ್ಣವಾಗುತ್ತದೆ. ಹಲವರಿಗೆ ಸಾಡೇಸಾಥ್ ಶನಿಯ ಕೊನೆ ಅವಧಿ ಮಾರಕವಾಗಿ ಪರಿಣಮಿಸುತ್ತದೆ.
ಅದರಿಂದ ರಕ್ಷಣೆ ಪಡೆಯುವುದಕ್ಕೂ ಇಂಥ ಹೋಮ ಮಾಡಿಸುತ್ತಾರೆ. ಆದರೆ ಈ ಎರಡೂ ಹೋಮಗಳು ಶತ್ರು ನಿಗ್ರಹಕ್ಕಾಗಿಯೇ ಮಾಡಿಸಲಾಗುತ್ತದೆ," ಎನ್ನುತ್ತಾರೆ ಜ್ಯೋತಿಷಿಗಳಾದ ಶಂಕರ್ ಭಟ್. ಜ್ಯೋತಿಷಿಗಳ ವಿಶ್ಲೇಷಣೆ ನೋಡುವುದಾದರೆ ಸಂಪುಟ ವಿಸ್ತರಣೆ ಹಾಗೂ ಉಳಿದ ಅವಧಿಗೆ ಮುಖ್ಯಮಂತ್ರಿ ಹುದ್ದೆ ಭದ್ರಪಡಿಸಿಕೊಳ್ಳುವುದು ಯಡಿಯೂರಪ್ಪ ಉದ್ದೇಶ ಎಂಬುದು ಸ್ಪಷ್ಟವಾಗಿದೆ. ಜೊತೆಗೆ ಪಕ್ಷದ ಒಳಗಿನ ಹಾಗೂ ಹೊರಗಿನ ವಿರೋಧಿಗಳನ್ನ ಸಮರ್ಥವಾಗಿ ಎದುರಿಸಲು ಹೋಮ ಮಾಡಿಸಿದ್ದಾರೆ ಎಂದು ವಿಶ್ಲೇಷಿಸಲು ಸಾಧ್ಯವಿದೆ.
ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಕಂಠಕ
ಉಪ ಚುನಾವಣೆಯ ದೊಡ್ಡ ಗೆಲುವಿನ ಹಿಂದೆಯೆ ಸಂಪುಟ ವಿಸ್ತರಣೆ ಕಂಠಕ ಯಡಿಯೂರಪ್ಪರಿಗೆ ಎದುರಾಗಿದೆ. ಉಮೇಶ್ ಕತ್ತಿ, ವೀರಣ್ಣ ಚರಂತಿಮಠ, ದತ್ತಾತ್ರೆಯ ಪಾಟೀಲ್ ರೇವೂರ್ ಸೇರಿದಂತೆ ಪಕ್ಷದಲ್ಲಿನ ಹಿರಿಯ ಶಾಸಕರು ಮಂತ್ರಿಸ್ಥಾನಕ್ಕೆ ಈಗಾಗಲೇ ಬೇಡಿಕೆ ಇಟ್ಟಿದ್ದಾರೆ. ಇನ್ನು ರಾಜೀನಾಮೆ ಕೊಟ್ಟು ಗೆದ್ದಿರುವ ಶಾಸಕರಿಗೂ ಮಂತ್ರಿಸ್ಥಾನ ಕೊಡಬೇಕು.
ಶೃಂಗೇರಿಯಲ್ಲಿ ದೇವೇಗೌಡರಿಂದ ಅತಿರುದ್ರ ಯಾಗ, ಯಾವ ಕಾರಣಕ್ಕೆ?
ಬೆಂಗಳೂರು ನಗರಾಭಿವೃದ್ಧಿ ಖಾತೆ ನನಗೇ ಬೇಕು ಅಂತಾ ಶಾಸಕ ಬೈರತಿ ಬಸವರಾಜ್ ಬಹಿರಂಗವಾಗಿಯೆ ಪಟ್ಟು ಹಿಡಿದಿದ್ದಾರೆ. ಇದರೊಂದಿಗೆ ಇಂಥದ್ದೇ ಖಾತೆಗಳು ಬೇಕು ಅಂತಾ ಬೇರೆ ಪಕ್ಷಗಳಿಂದ ಬಂದು ಬಿಜೆಪಿಯಲ್ಲಿ ಗೆದ್ದಿರುವ ಬೇರೆ ಶಾಸಕರು ಪಟ್ಟು ಹಿಡಿದಿದ್ದಾರೆ. ಇದು ಉಪ ಚುನಾವಣೆಗಿಂದ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ರಾಜಕೀಯ ಸಂಕಷ್ಟದ ನಿರ್ಧಾರಗಳ ಆಚೆಗೂ ಸುರಕ್ಷಿತವಾಗಿ ಅಧಿಕಾರ ನಡೆಸಲು ಸುದರ್ಶನ ಹೋಮ ಮಾಡಿಸಿದ್ದಾರೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಹೋಮಕ್ಕೆ ಕುಳಿತ ತಂದೆ-ಮಗ
ಧವಳಗಿರಿ ನಿವಾಸದಲ್ಲಿ ನಡೆದ ಸುದರ್ಶನ ಹೋಮದಲ್ಲಿ ಅಪ್ಪ-ಮಗ ಇಬ್ಬರೂ ಶ್ವೇತ ವರ್ಣದ ರೇಷಿಮೆ ಪಂಚೆ, ಶಲ್ಯ, ಅಂಗಿ ತೊಟ್ಟು ಭಾಗವಹಿಸಿದ್ದರು.ಯಡಿಯೂರಪ್ಪನವರು ಸುದರ್ಶನ ಹೋಮ ನಡೆಸಿದರು. ಹೋಮದಲ್ಲಿ ಬಿ ವಿ ವಿಜಯೇಂದ್ರ ದಂಪತಿ ಮಾತ್ರ ಪಾಲ್ಗೊಂಡಿದ್ದು ವಿಶೇಷ. ತಮಗೂ ತಮ್ಮ ಕಿರಿಯ ಪುತ್ರ ಬಿ ವೈ ವಿಜಯೇಂದ್ರಗೂ ರಾಜಕೀಯವಾಗಿ ವಿರೋಧಿಗಳಿಂದ ಎದುರಾಗುವ ಕಂಟಕಗಳ ನಿವಾರಣೆಗೆ ಯಡಿಯೂರಪ್ಪನವರು ಸುದರ್ಶನ ನರಸಿಂಹ ಹೋಮ ನಡೆಸಿದ್ದಾರೆ. ಹೋಮ ನಡೆಸಿದ ಅವಧಿಯಲ್ಲಿ ಧವಳಗಿರಿ ನಿವಾಸಕ್ಕೆ ಯಾವುದೇ ಸಚಿವರು, ಶಾಸಕರು, ಮುಖಂಡರು, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಅಷ್ಟೇ ಅಲ್ಲ ಆಪ್ತ ಸಹಾಯಕರು, ಅಧಿಕಾರಿಗಳಿಗೂ ಪ್ರವೇಶ ನಿರಾಕರಿಸಲಾಗಿತ್ತು.
ಸಂಕಷ್ಟ ನಿವಾರಿಸಿಕೊಂಡ ಯಡಿಯೂರಪ್ಪ
ಸುದರ್ಶನ ಹೋಮದ ಮೂಲಕ ಸಂಪತ್ತಿನ, ಅಧಿಕಾರದ ಕುರಿತು ಎದುರಾಗುವ ಸಂಕಷ್ಟಗಳನ್ನ ಯಡಿಯೂರಪ್ಪ ನಿವಾರಿಸಿಕೊಂಡಿದ್ದಾರೆ. ನರಸಿಂಹ ಹೋಮ ಮಾಡುವ ಮೂಲಕ ಯಡಿಯೂರಪ್ಪ ತಮಗೆ ಮತ್ತು ಮಗ ವಿಜಯೇಂದ್ರಗೆ ಎದುರಾಗುವ ಶತೃ ಸಂಕಷ್ಟಗಳನ್ನು ಪರಿಹರಿಸಿಕೊಂಡಿದ್ದಾರೆ. ಉಳಿದ ಮೂರುವರೇ ವರ್ಷಗಳ ಅವಧಿಗೆ ಸಂಕಷ್ಟಗಳು ಎದುರಾಗದಂತೆ ಆಡಳಿತ ನಡೆಸಲು ಸಾಧ್ಯವಾಗುವಂತೆ ಹೋಮದ ಸಂದರ್ಭದಲ್ಲಿ ಬೇಡಿಕೊಂಡಿದ್ದಾರೆ ಎಂಬುದು ಮೂಲಗಳು ನೀಡುವ ಮಾಹಿತಿ. ಬಿಎಸ್ವೈ ಮನೆಯೊಳಗೆ ಏನು ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ, ಅವರು ಭಾನುವಾರ ನಡೆಸಿರುವ ಹೋಮ ಬಿಜೆಪಿ ಹಾಗೂ ರಾಜ್ಯ ರಾಜಕೀಯದಲ್ಲಿ ಚರ್ಚೆಗಂತೂ ನಾಂದಿ ಹಾಡಿದೆ.