ಅಕ್ಷಯ ಪಾತ್ರೆ ಹುಡುಕಿದ ಶಿರಸಿ ಜೀವಜಲ ಕಾರ್ಯಪಡೆ ಯಶೋಗಾಥೆ
ಬೆಂಗಳೂರು, ಜೂನ್ 11: ಪರಿಸರ ಪ್ರಜ್ಞೆ ಹಾಗೂ ಪರಿಸರ ಚಳವಳಿಗೆ ಹೆಸರಾದ ಶಿರಸಿ ಇತ್ತೀಚಿನ ದಿನಗಳಲ್ಲಿ ಜಲಕ್ಷಾಮಕ್ಕೆ ತುತ್ತಾಗಿ ತನ್ನ ನೈಜ ನೈಸರ್ಗಿಕ ಸೊಬಗನ್ನು ಕಳೆದುಕೊಳ್ಳುವ ಅಂಚಿಗೆ ತಲುಪಿತ್ತು. ಆದರೆ ಅಲ್ಲಿನ ಜನರು ಸಂಘಟಿತರಾಗಿ ಶಿರಸಿ ಜೀವಜಲ ಕಾರ್ಯಪಡೆ ಎಂಬ ಸಾಮುದಾಯಿಕ ಸಂಸ್ಥೆ ರೂಪಿಸಿಕೊಂಡು ಅಂತರ್ಜಲ ಹಾಗೂ ಮಳೆ ನೀರು ಸಂರಕ್ಷಿಸುವ ಮೂಲಕ ಕೆರೆಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಿ ಮೌನಕ್ರಾಂತಿಯನ್ನೇ ಮಾಡುತ್ತಿದ್ದಾರೆ.
ಈ ಕುರಿತಾದ ಆರು ನಿಮಿಷಗಳ ಕಿರುಚಿತ್ರದಲ್ಲಿ ಇಡೀ ಮೌನಕ್ರಾಂತಿಯ ವಿವರಗಳನ್ನು ಯೋಜನೆ ರೂವಾರಿಗಳು ನೀಡಿದ್ದಾರೆ. ನೀರಿನ ಕೊರತೆಯಿಂದ, ಮಳೆಯ ಅನಿಶ್ಚಿತ್ತತೆಯಿಂದ ಬಳಲುತ್ತಿರುವ ರಾಜ್ಯದ ಅನೇಕ ಭಾಗಗಳಿಗೆ ಮಾದರಿಯಾಗಬಲ್ಲ ಕೆಲಸ ಇಲ್ಲಿ ನಡೆದಿದೆ.
ಮುಂಗಾರು: ಮಹಾರಾಷ್ಟ್ರ, ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಸಂಭವ
ಯೋಜನೆ ಕುರಿತು ವಿವರಿಸಿರುವ ಪತ್ರಕರ್ತ ಶಿವಾನಂದ ಕಳವೆ, ಶಿರಸಿ ಕಾಡೊಳಗಿನ ಊರು, ಇಲ್ಲಿ ಒಂದು ಕಾಲದಲ್ಲಿ 12ರಿಂದ 13 ಕೆರೆಗಳಿದ್ದವು. ನಂತರ ಜನರ ತಾತ್ಸಾರದಿಂದ ಅವೆಲ್ಲ ಕಸದ ಗುಂಡಿಯಾದವು. ಹಳ್ಳ ಮತ್ತು ನದಿ ನೀರು ಬಳಕೆಗೆ ಬಂತು. ಎರಡು ವರ್ಷದ ಹಿಂದೆ ಶಿರಸಿಗೆ ಜಲಕ್ಷಾಮ ಬಂತು. ಆಗ ಟ್ಯಾಂಕ್ ಮೂಲಕ ನೀರು ನೀಡಬೇಕಾಯಿತು. ಇದರಿಂದ ಎಚ್ಚೆತ್ತ ಶಿರಸಿ ಜನ ಯೋಚನೆ ಮಾಡಿದರು. ಪರಿಸರ ಜಾಗೃತಿಗೆ ಹೆಸರಾದ, ಪರಿಸರ ಚಳವಳಿ ಹುಟ್ಟುವ ಈ ಊರಿನಲ್ಲಿ ಕಳೆದೊಂದು ವರ್ಷದಿಂದ ಜಲ ಕಾಯಕ ಆರಂಭವಾಯಿತು.
ಜನರೇ ಕೆರೆ ಹೂಳೆತ್ತುವ ಕಾರ್ಯ ಆರಂಭಿಸಿದರು. ತಾವೇ ಸಂಗ್ರಹಿಸಿದ ಹಣಕ್ಕೆ ನ್ಯಾಯ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಸ್ವಂತ ಸಮಯ ಮೀಸಲಿಟ್ಟು ಕೆರೆ ಹೂಳೆತ್ತುವ ಕೆಲಸದಲ್ಲಿ ಒಂದಾದರು. ಒಂದಕ್ಕೆ ಎರಡರಷ್ಟು ಕೆಲಸ ಆಯಿತು. ಇದೇ ರೀತಿ ರಾಜ್ಯದ ಜನರೆಲ್ಲರೂ ಕೈಜೋಡಿಸಬೇಕು. ಹೊಸ ಮಾದರಿಯ ಶಿರಸಿ ಜಲಕಾಯಕ ಎಲ್ಲೆಡೆ ಪಸರಿಸಬೇಕು. ರಾಜಕಾರಣಿಗಳೇ ಗುದ್ದಲಿ ಪೂಜೆ ಮಾಡಬೇಕೆಂಬ ಮನೋಭಾವ ಮೀರಿ ಶಿರಸಿ ಜನರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುತ್ತಾರೆ.
ಉಪ ವಿಭಾಗಾಧಿಕಾರಿ ಕೆ. ರಾಜು ಮೊಗವೀರ ಯೋಜನೆ ಕುರಿತು ಮಾಹಿತಿ ನೀಡಿ, ಟ್ಯಾಂಕರ್ ಮೂಲಕ ನೀರು ಪೂರೈಸುವ ಪರಿಸ್ಥಿತಿ ಇಲ್ಲಿ ಉಂಟಾಗಿತ್ತು. ಜನರು ತಮ್ಮ ಚಿಂತನೆಗಳನ್ನು ಮಾತಿಗೆ ಸೀಮಿತಗೊಳಿಸದೇ ಎಲ್ಲರೂ ಸಂಘಟಿತರಾಗಿ ಕೆಲಸ ಆರಂಭಿಸಿದರು.
ಕೆರೆಗಳು ನೀರಿನ ಅಕ್ಷಯ ಪಾತ್ರೆ. ನಮಲ್ಲಿ 560 ಕೆರೆಗಳಿವೆ. ಅವೆಲ್ಲವೂ ಬಹುತೇಕ ಹೂಳಿನಿಂದ ತುಂಬಿದ್ದವು. ಅತಿ ಹೆಚ್ಚೆಂದರೆ ಒಂದು ಎಕರೆ ಪ್ರದೇಶದ ಕೆರೆಗಳಿವೆ. ಆದರೆ ಜನರ ಸಹಭಾಗಿತ್ವದಲ್ಲಿ ಒಂದು ವರ್ಷದ ಅವಧಿಯಲ್ಲಿ ಆನೆಹೊಂಡ, ರಾಯರಕೆರೆ, ಹಳದೊಟ್ಟಿ ಕೆರೆ, ಬಶೆಟ್ಟಿ ಕೆರೆ, ಬೆಳ್ಳಕ್ಕಿ ಕೆರೆ, ಶಂಕರ ಹೊಂಡ ಹೀಗೆ ಎಲ್ಲವನ್ನೂ ಹೂಳೆತ್ತುವ ಕೆಲಸ ನಡೆದಿದೆ. ಸ್ಥಳೀಯವಾಗಿ ನೀರಿನ ಕಾಳಜಿ ಇರುವವರ ತಂಡ ಇಲ್ಲಿದೆ. ಇದರ ಶಕ್ತಿ ಎಂದರೆ ಜನರೇ ಎಂದು ಬಣ್ಣಿಸಿದರು.
ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾಹಿತಿ ನೀಡಿ, 27 ಮಾರ್ಚ್ 2917ರಂದು ಸಭೆ ಜಲಜಾಗೃತಿ ಸಭೆ ನಡೆಯಿತು. ನೀರಿಗಾಗಿ ಏನು ಮಾಡಬೇಕೆಂಬ ಚಿಂತನೆ ನಡೆಯಿತು. ಅನೇಕ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ನಿರ್ಧಾರ ಮಾಡಲಾಯಿತು.
ಶಿರಸಿ ಜೀವಜಲ ಕಾರ್ಯಪಡೆ ರಚನೆ ಆಯಿತು. ಇಲ್ಲಿನ ಜನರು, ಸ್ವಾದಿ ಟ್ರಸ್ಟ್, ರೋಟರಿ, ಲಯನ್ಸ್ ಅನೇಕ ಸಂಘ-ಸಂಸ್ಥೆಗಳ ಮುಖಂಡರು ಕೈ ಜೋಡಿದರು. ಸರಿಸುಮಾರು 4 ಲಕ್ಷ ರು. ಸಂಗ್ರಹಿಸಲಾಯಿತು. ಎಲ್ಲವನ್ನೂ ಪಾರದರ್ಶಕವಾಗಿ ಬಳಕೆ ಮಾಡುತ್ತ ಹೋದಂತೆ ಎಲ್ಲವೂ ಸರಾಗವಾಗಿ ನಡೆಯಿತು ಎಂದು ಹೇಳುತ್ತಾರೆ.
ನಗರಸಭೆ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಕೆರೆಗಳ ಪುನರುಜ್ಜೀವನ ಕೇವಲ ಸಕಾರದ ಕೆಲಸ ಅಲ್ಲ, ಸಾರ್ವಜನಿಕರ ಸಹಭಾಗಿತ್ವ ರಾಜ್ಯಕ್ಕೆ ಮಾದರಿ ಎಂದರೆ, ಕಾರ್ಯಪಡೆ ಕಾರ್ಯದರ್ಶಿ ಅನಿಲ್ ನಾಯಕ್, ಜನರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.