ಬಡಜನರ ಸಂಕಷ್ಟ ದೂರ ಮಾಡಿದ 'ಅನ್ನಭಾಗ್ಯ' ಯೋಜನೆ
ಬೆಂಗಳೂರು, ಮೇ 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರ್ಕಾರ ಮೂರು ವರ್ಷಗಳನ್ನು ಪೂರೈಸಿ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಯೋಜನೆಗಳ ಜನಾಭಿಪ್ರಾಯ ಸಂಗ್ರಹಿಸಲು ಸರ್ಕಾರದಿಂದ "ಜನ-ಮನ" ಎಂಬ ಜನಾಭಿಪ್ರಾಯ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 'ಜನಮನ' ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಿಂದ ವಿವಿಧ ಯೋಜನೆಗಳ ಫಲಾನುಭವಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮುಖ್ಯಮಂತ್ರಿಗಳ ಜೊತೆ ನೇರವಾಗಿ ಮಾತನಾಡಿ, ಯೋಜನೆಗಳ ಬಗ್ಗೆ ಅನುಭವ, ಅಭಿಪ್ರಾಯ ಹಂಚಿಕೊಂಡರು.
ಅನ್ನಭಾಗ್ಯ ಯೋಜನೆ : ಬಡಜನರು ಯಾರ ಬಳಿಯೂ ಅನ್ನಕ್ಕಾಗಿ ಕೈ ಚಾಚದೆ ಸ್ವಾಭಿಮಾನದ ಬದುಕನ್ನು ಸಾಗಿಸಬೇಕು ಎನ್ನುವುದು ಸರ್ಕಾರದ ಆಶಯ. ಇಂತಹ ಯೋಜನೆಯಿಂದ ಬಡ ಜನರ ಪೌಷ್ಠಿಕತೆ ಕೂಡ ಉತ್ತಮಗೊಳ್ಳಲಿದೆ. ಅಲ್ಲದೆ ಕಡು ಬಡವರು ಆಹಾರ ಧಾನ್ಯ ಖರೀದಿಯಲ್ಲಿ ಉಳಿಸುವ ಹಣ ಅವರ ಇತರ ಅಗತ್ಯಗಳಿಗೆ ನೆರವಾಗುತ್ತದೆ. [ಅನ್ನಭಾಗ್ಯ ಯೋಜನೆ : ಭೈರಪ್ಪ ಮಾತಿಗೆ ಯಾರು, ಏನು ಹೇಳಿದರು?]
* ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮದ ಬಸವರಾಜ ಮಲ್ಲನಾಯಕ ಅವರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು. 'ಈ ಹಿಂದೆ ಅಂಗಡಿಗಳಲ್ಲಿ ದವಸ ಧಾನ್ಯಕೊಳ್ಳಲು ದುಡ್ಡಿನ ಕೊರತೆಯಿಂದ ಸಂಕಷ್ಟದಲ್ಲಿದ್ದೆವು. ಈ ಸರ್ಕಾರ ಬಂದು ನಮಗೆ ನಿಜಕ್ಕೂ ಅನ್ನಭಾಗ್ಯ ನೀಡಿದೆ. ಎರಡು ಹೊತ್ತು ಹಸಿದ ಹೊಟ್ಟೆ ತುಂಬಿಸಿಕೊಳ್ಳುವ ಅವಕಾಶ ಮಾಡಿಕೊಟ್ಟಿದೆ' ಎಂದು ಹೇಳಿದರು.
* ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಮುಗಳಿ ಗ್ರಾಮದ ಶ್ರೀಮತಿ ಸುಮಂಗಲ ಎಸ್. ಬೆಟಗೇರಿ ಅವರು, 'ರಾಜ್ಯ ಸರ್ಕಾರ ಉಚಿತ ಅಕ್ಕಿ, ಗೋಧಿಯ ಜೊತೆ, ಉಪ್ಪು, ಅಡಿಗೆ ಎಣ್ಣೆ ನೀಡುತ್ತಿದೆ. ಮಾರುಕಟ್ಟೆಯಲ್ಲಿ 11 ರೂಪಾಯಿಗಳಿಗೆ ದೊರಕುವ ಉಪ್ಪು ನಮಗೆ 2 ರೂ.ಗೆ, 50 ರೂ. ಎಣ್ಣೆ 25 ರೂ.ಗೆ, ಮಾರುಕಟ್ಟೆಯಲ್ಲಿ 40 ರೂ.ಗೆ ಸಿಗುವ ಸಕ್ಕರೆಯನ್ನು ಸರ್ಕಾರ 13.50 ರೂ.ಗಳಿಗೆ ನೀಡುತ್ತಿದೆ. ಇದರಿಂದ ನಮ್ಮ ಬದುಕು ಹಸನಾಗಿದೆ' ಎನ್ನುತ್ತಾರೆ. ['ಅನ್ನಭಾಗ್ಯ ಯೋಜನೆ ಯಡಿಯೂರಪ್ಪ ತಂದಿದ್ದು']
* ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕಡಕೇರಿ ಗ್ರಾಮದ ದೇವರಾಜ ನಾರಾಯಣ ನಾಯಕ ಅವರು, 'ಸಂಕಷ್ಟದಲ್ಲಿದ್ದ ಬಡವರ ಬದುಕು ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಇಂದು ಸಹನೀಯವಾಗಿಸಿದೆ' ಎಂದು ಅಭಿಪ್ರಾಯ ಹಂಚಿಕೊಂಡರು.