ಪಂಚರಾಜ್ಯ ಚುನಾವಣಾ ಫಲಿತಾಂಶದ ಬೆನ್ನಲ್ಲೇ ತಲ್ಲಣ ಮೂಡಿಸುತ್ತಿರುವ ರಾಜ್ಯ ಬಿಜೆಪಿ ವಿದ್ಯಮಾನ
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ, ಬಿಜೆಪಿ ಬಯಸಿದಂತೆಯೇ ನಾಲ್ಕು ರಾಜ್ಯಗಳಲ್ಲಿ ಅಧಿಕಾರದ ಗದ್ದುಗೇರಿದೆ. ಅದರಲ್ಲಿ ಪ್ರಮುಖವಾಗಿ ಉತ್ತರ ಪ್ರದೇಶ. ಈ ಫಲಿತಾಂಶದ ಜೊತೆಗೆ ಕಾಂಗ್ರೆಸ್ ಮತ್ತಷ್ಟು ನಿರ್ಜೀವಗೊಂಡಿದೆ.
ಮಾರ್ಚ್ ಹತ್ತರ ಫಲಿತಾಂಶದ ನಂತರ ರಾಜ್ಯ ಬಿಜೆಪಿಯಲ್ಲೂ ಚಟುವಟಿಕೆಗಳು ಚುರುಕುಗೊಳ್ಳುತ್ತಿದೆ. ಮತ್ತೆ, ಸಂಪುಟ ವಿಸ್ತರಣೆಯ ಮಾತು ಮುನ್ನಲೆಗೆ ಬಂದಿದೆ. ಹಾಲೀ ವಿಧಾನಮಂಡಲದ ಅಧಿವೇಶನ ಮುಗಿಯುತ್ತಿದ್ದಂತೆಯೇ ಈ ಬೆಳವಣಿಗೆಗಳಿಗೆ ಒಂದಷ್ಟು ರೂಪ ಸಿಗಬಹುದು.
ಬೆಣ್ಣೆನಗರಿಯಿಂದ ಬಸವರಾಜ ಬೊಮ್ಮಾಯಿ ಚುನಾವಣಾ ಕಣಕ್ಕೆ?
ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಇಂದು ಒಂದು ಕಡೆಯಾದರೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರಾದ , ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ವಿಚಾರದಲ್ಲಿ ಕೆಲವೊಂದು ಬೆಳವಣಿಗೆಗಳು ವೇಗ ಪಡೆದುಕೊಳ್ಳುತ್ತಿದೆ ಎನ್ನುವ ಬಲವಾದ ಸುದ್ದಿಗಳು ಹರಿದಾಡುತ್ತಿದೆ.
ಪಂಚ ರಾಜ್ಯಗಳ ಚುನಾವಣೆಯ ಪ್ರಕ್ರಿಯೆ ಮುಗಿಯುವವರೆಗೆ ಸುಮ್ಮನಿದ್ದ ಬಿಜೆಪಿ ಹೈಕಮಾಂಡ್ ಈಗ ಕರ್ನಾಟಕದ ವಿಚಾರದಲ್ಲಿ ತಲೆಕೆಡಿಸಿಕೊಳ್ಳಲು ಆರಂಭಿಸಿದೆ ಎನ್ನುವ ಮಾತುಗಳು ಬಿಜೆಪಿಯಲ್ಲಿ ಕೇಳಿ ಬರಲಾರಂಭಿಸಿದೆ. ಸ್ಪಷ್ಟ ರೂಪುರೇಷೆಗಳೊಂದಿಗೆ ತಂತ್ರಗಾರಿಕೆ ಹಣೆಯಲಾಗುತ್ತಿದೆ ಎನ್ನುವ ಮಾತಿದೆ.
ಗೋವಾ: ಮುಂದಿನ ಸಿಎಂ ಆಯ್ಕೆಯಲ್ಲಿ ಬಿಜೆಪಿ ವಿಳಂಬ ಮಾಡುತ್ತಿರುವುದಕ್ಕೆ ಮೂರು ಕಾರಣಗಳಿವು
ಬಿಜೆಪಿ ಹೈಕಮಾಂಡ್ ಅಳೆದುತೂಗಿ ಹೆಜ್ಜೆ
ಸಂಪುಟ ರಚನೆಯ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಅಳೆದುತೂಗಿ ಹೆಜ್ಜೆಯಿಡಲು ತನ್ನದೇ ಮೂಲಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾರಂಭಿಸಿದೆ. ಪ್ರಮುಖವಾಗಿ, ಯಡಿಯೂರಪ್ಪನವರು ಬಯಸದ ಮುಖಂಡರಿಗೆ ಮಣೆಹಾಕಲು ಬಿಜೆಪಿ ನಿರ್ಧರಿಸಿದೆ. ಆ ಮೂಲಕ, ಯಡಿಯೂರಪ್ಪನವರ ಕಟ್ಟಾ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಮತ್ತೆ ಚಾಲ್ತಿಗೆ ಬಂದಿದೆ. ಇದರ ಜೊತೆಗೆ, ಮತ್ತೋರ್ವ ಮೈಸೂರು ಪ್ರಾಂತ್ಯದ ನಾಯಕ ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸುದ್ದಿಗಳು ಹರಿದಾಡಲಾರಂಭಿಸಿದೆ.
ಯಡಿಯೂರಪ್ಪನವರಿಗಿರುವ ಜನಪ್ರಿಯತೆ
ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೆ ಯಡಿಯೂರಪ್ಪನವರ ವಿರುದ್ದ ಯಾರೂ ಹೇಳಿಕೆಯನ್ನು ನೀಡಬಾರದು ಎನ್ನುವ ಫರ್ಮಾನನ್ನು ವರಿಷ್ಠರು ಹೊರಡಿಸಿದ್ದರು. ಕಾರಣವೇನಂದರೆ, ಯಡಿಯೂರಪ್ಪನವರಿಗಿರುವ ಜನಪ್ರಿಯತೆ. ಚುನಾವಣೆಯ ವೇಳೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದಾಗದ ಬಿಜೆಪಿ ಹೈಕಮಾಂಡ್ ಈಗ ಫಲಿತಾಂಶ ತಮ್ಮ ಪರವಾಗಿ ಬಂದ ಮೇಲೆ, ತಮ್ಮ ಕಾರ್ಯತಂತ್ರವನ್ನು ಬದಲಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಯಡಿಯೂರಪ್ಪನವರ ವಿರೋಧಿಗಳಿಗೆ ಹೆಚ್ಚಿನ ಮಣೆಯನ್ನು ಹಾಕುವ ಸಾಧ್ಯತೆ
ಸ್ಥಳೀಯವಾಗಿ ಯಾವುದೇ ನಾಯಕರ ಪ್ರಭಾವ ಹೆಚ್ಚಾಗದಂತೆ ತಂತ್ರಗಾರಿಕೆ ಹಣೆಯುತ್ತಿರುವ ವರಿಷ್ಠರು ಮುಂದಿನ ಚುನಾವಣೆಗೆ ರೆಡಿಯಾಗಲು ಪರ್ಯಾಯ ನಾಯಕರ ಸೃಷ್ಟಿಗೆ ಮುಂದಾಗಿದೆ. ಆ ಮೂಲಕ, ಪಕ್ಷಕ್ಕೆ ಯಡಿಯೂರಪ್ಪನವರ ಅವಶ್ಯಕತೆಯನ್ನು ಕಮ್ಮಿಮಾಡಿಕೊಳ್ಳುವ ನಿಟ್ಟಿನಲ್ಲಿ ವರ್ಕೌಟ್ ಮಾಡಲು ಆರಂಭಿಸಿದೆ. ಚುನಾವಣೆಗೆ ಇನ್ನು ಹದಿನಾಲ್ಕು ತಿಂಗಳು ಇರುವುದರಿಂದ, ಸಂಪುಟ ರಚನೆಯಲ್ಲಿ ಯಡಿಯೂರಪ್ಪನವರ ವಿರೋಧಿಗಳಿಗೆ ಹೆಚ್ಚಿನ ಮಣೆಯನ್ನು ಹಾಕುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಆಪರೇಶನ್ ಕಮಲದ ಮೂಲಕ ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ
ಆಪರೇಶನ್ ಕಮಲದ ಮೂಲಕ ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಸದಾ ಅವರ ಟೀಕೆಯಲ್ಲಿ ತೊಡಗಿದ್ದ ನಾಯಕರಿಗೆ ಮಣೆ ಹಾಕುವ ಸಾಧ್ಯತೆಯಿದೆ. ಪ್ರತ್ಯಕ್ಷವಾಗಿ ಇದನ್ನು ಹೇಳದಿದ್ದರೂ, ಕಟ್ಟಾ ಹಿಂದುತ್ವವಾದಿ, ಪಕ್ಷ ನಿಷ್ಠೆ ಹೆಸರಿನಲ್ಲಿ ಬಿಎಸ್ವೈ ಬಯಸದವರಿಗೆ ಮಣೆಹಾಕಿ, ಹಂತಹಂತವಾಗಿ ಯಡಿಯೂರಪ್ಪನವರನ್ನು ಸಕ್ರಿಯ ರಾಜಕಾರಣದಿಂದ ದೂರವಿಡುವ ಮಾಸ್ಟರ್ ಪ್ಲ್ಯಾನ್ ಅನ್ನು ಬಿಜೆಪಿ ವರಿಷ್ಠರು ರೂಪಿಸುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.