ಭಾರತದಲ್ಲಿ ಅಳಿವಿನಂಚಿಗೆ ಸರಿಯುತ್ತಿವೆ ಚಿರತೆಗಳು: ಆಘಾತಕಾರಿ ವರದಿ
ಬೆಂಗಳೂರು, ಫೆಬ್ರವರಿ 7: ದೇಶದಲ್ಲಿ ಚಿರತೆಗಳ ಸಂಖ್ಯೆ ಶೇ 75-90ರಷ್ಟು ಕುಸಿತವಾಗಿದೆ ಎಂದು ಅಧ್ಯಯನವೊಂದು ಆಘಾತಕಾರಿ ವರದಿ ನೀಡಿದೆ. ಅಳಿವಿನಂಚಿಗೆ ಸಾಗುತ್ತಿರುವ ಚಿರತೆಗಳನ್ನು ಉಳಿಸಲು ಹುಲಿಗಳ ಸಂರಕ್ಷಣೆಗೆ ನಡೆಸಿದ ಪ್ರಯತ್ನದಂತೆಯೇ ಯೋಜನೆಗಳ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ವನ್ಯಜೀವಿ ಅಧ್ಯಯನಗಳ ಕೇಂದ್ರ (ಸಿಡಬ್ಲ್ಯೂಎಸ್) ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿಗಳು ದೇಶದಲ್ಲಿನ ಚಿರತೆಗಳ ಕುರಿತು ಈ ಅಧ್ಯಯನ ನಡೆಸಿದ್ದಾರೆ.
ಭಾರತದೆಲ್ಲೆಡೆಗಿನ ಚಿರತೆ ಮಾದರಿಗಳನ್ನು ಸಂಗ್ರಹಿಸಿ ಅವುಗಳಿಂದ ಪಡೆದ ವಂಶವಾಹಿ ಮಾಹಿತಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇದರಿಂದ ಚಿರತೆಗಳ ಸಂಖ್ಯಾ ಸಂರಚನೆ ಮತ್ತು ಪ್ರದೇಶವಾರು ಚಿರತೆಗಳ ಪ್ರಮಾಣ ಇಳಿಕೆಯಾಗುತ್ತಿರುವುದು ಕಂಡುಬಂದಿದೆ ಎಂದು ಸಿಡಬ್ಲ್ಯೂಎಸ್ ತಿಳಿಸಿದೆ.
ಚಿರತೆಗಳ ಆವಾಸ ಸ್ಥಾನಗಳ ಪ್ರಾದೇಶಿಕ ಇತಿಹಾಸವನ್ನು ಅಧ್ಯಯನ ಮಾಡಿದ ಅವರು ದೇಶವ್ಯಾಪಿ ವಂಶವಾಹಿ ಮಾಹಿತಿಗಳನ್ನು ತುಲನೆ ಮಾಡಿದ್ದಾರೆ. ವಿಜ್ಞಾನಿಗಳು ಚಿರತೆಗಳ ಮಲಗಳನ್ನು ಸಂಗ್ರಹಿಸಿ, 13 ಮೈಕ್ರೋ ಸ್ಯಾಟಲೈಟ್ ಮಾರ್ಕರ್ಗಳನ್ನು ಬಳಸುವ ಮೂಲಕ 56 ಚಿರತೆಗಳನ್ನು ಗುರುತಿಸಿದ್ದಾರೆ. ಇವುಗಳನ್ನು ಈಗಾಗಲೇ ಲಭ್ಯವಿರುವ 143 ಚಿರತೆಗಳ ಮಾಹಿತಿಯೊಂದಿಗೆ ಸೇರಿಸಿದ್ದಾರೆ.
ಚಿರತೆಗಳ ಇತ್ತೀಚಿನ ಸಂಖ್ಯಾ ರಚನೆ ಮತ್ತು ಅವುಗಳ ಪ್ರಮಾಣದಲ್ಲಿ ಕುಸಿತವಾಗಿರುವುದನ್ನು ಅಧ್ಯಯನ ಬಹಿರಂಗಪಡಿಸಿದೆ. ಭಾರತದಲ್ಲಿ ಕಳೆದ ಅಂದಾಜು 120-200 ವರ್ಷಗಳಲ್ಲಿ ಮಾನವ ಸಂಖ್ಯೆಯ ಹೆಚ್ಚಳದಿಂದ ಮತ್ತು ಚಿರತೆಗಳ ಆವಾಸ ಸ್ಥಾನಗಳ ಆಕ್ರಮಣದಿಂದ ಅವುಗಳ ಸಂಖ್ಯೆ ಶೇ 75-90ರಷ್ಟು ಇಳಿಕೆಯಾಗಿದೆ ಎಂದು ಅಧ್ಯಯನ ತಿಳಿಸಿದೆ.
ಸುಪ್ರಿಯಾ ಭಟ್, ಸುವಂಕರ್ ಬಿಸ್ವಾಸ್, ಡಾ. ಬಿವಷ್ ಪಾಂಡವ್, ಡಾ. ಸಾಮ್ರಾಟ್ ಮೊಂಡೊಲ್ ಮತ್ತು ಡಾ. ಕೃತಿ ಕೆ. ಕಾರಂತ್ ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು.