'ಮಕ್ಕಳಿಗೆ ಅಂಕದ ಜೊತೆ ಸಾಮಾನ್ಯ ಜ್ಞಾನವೂ ಬೇಕು'
ಬೇಲೂರು, ಜೂ. 15 : ಇತ್ತೀಚಿನ ದಿನದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪೋಷಕರು ಹೆಚ್ಚಿನ ಆದ್ಯತೆ ನೀಡುವ ದಿಸೆಯಲ್ಲಿ ಮಕ್ಕಳು ಉತ್ತಮ ಅಂಕ ಗಳಿಸುತ್ತಿದ್ದಾರೆ. ಆದರೆ ಪ್ರತಿಭಾವಂತ ಮಕ್ಕಳು ಜಾತಿ ಹಣವೆಂಬ ಲಾಲಸೆಗೆ ಬಿದ್ದು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಅಂಕಕ್ಕೆ ಮಾನ್ಯತೆ ಇಲ್ಲವಾಗಿದೆ ಎಂದು ಬೆಂಗಳೂರು ಒನ್ಇಂಡಿಯಾ ಕನ್ನಡ ಡಾಟ್ ಕಾಮ್ ಪ್ರಧಾನ ಸಂಪಾದಕ ಎಸ್.ಕೆ. ಶಾಮ ಸುಂದರ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವಿಜಯ ದೃವ ಗ್ರೂಪ್ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಾಹಿತಿ ಸೋಂಪುರ ಪ್ರಕಾಶ್ ವಿರಚಿತ 'ಹಳ್ಳಿ ತಪ್ಪಿದ ಬದುಕು' ಎಂಬ ಕೃತಿ ಬಿಡಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಪಟ್ಟಣ ಪ್ರದೇಶದ ಮಕ್ಕಳಂತೆ ಅಂಕ ಪಡೆಯುವಲ್ಲಿ ಹಿನ್ನಡೆಯಾಗಿಲ್ಲ, ಅದರೆ ಅಂಕದ ಜೊತೆಯಲ್ಲಿ ಸಾಮಾನ್ಯ ಜ್ಞಾನ ಪೂರಕವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸುವ ಅಗತ್ಯವಿದೆ ಎಂದರು.
ಜಾತಿ ಹೆಸರಿನಲ್ಲಿ ನಡೆಯುವ ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳನ್ನು ಸಂಕುಚಿತ ಮನೋಭಾವನೆಗೆ ರೂಪಿಸುವ ಮಾರ್ಗವಾಗಿದೆ. ಜಾತಿ ಧರ್ಮ ವರ್ಗವನ್ನು ಬಿಟ್ಟು ಇಂತಹ ಸಾಹಿತ್ಯ ಪರಿಷತ್ತಿನಿಂದ ಪ್ರತಿಭಾ ಪುರಸ್ಕಾರ ಅರ್ಥಪೂರ್ಣವಾಗಿರುತ್ತದೆ ಎಂದು ಅವರು ನುಡಿದರು.
ಕರ್ನಾಟಕ ರಾಜ್ಯ ವಿವಿಧತೆಯಲ್ಲಿ ಏಕತೆಯನ್ನ ಕಾಣುವ ಪ್ರದೇಶ, ಕರ್ನಾಟಕದ ಕನ್ನಡ ಭಾಷೆಯ ಅಪ್ಪಟ ಮೂಲ ಸ್ಥಾನ ಹಾಸನ ಜಿಲ್ಲೆ. ಉಳಿದ ಜಿಲ್ಲೆಗಳು ಅನ್ಯ ಭಾಷೆಯಿಂದ ಮುಕ್ತವಾಗಿಲ್ಲ. ಮಾತೃ ಭಾಷೆಯ ಮೇಲಿನ ದಾಳಿ ಎಂದಿಗೂ ಸಹಿಸುವ ಮಾತು ಇಲ್ಲ ಎಂದ ಅವರು ಕನ್ನಡ ಭಾಷೆಯ ಉಳಿಸಲು ಕಂಕಣ ಬದ್ದರಾಗಬೇಕು ಎಂದಾಗ ವಿದ್ಯಾರ್ಥಿಗಳ ಚಪ್ಪಾಳೆಗಳ ಸುರಿಮಳೆ.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ|| ಎಚ್.ಎಲ್.ಜನಾರ್ಧನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಹಾಗೂ ಪಿಯು ಪರೀಕ್ಷೆಗಳು ಪ್ರಮುಖ ಘಟ್ಟವಾಗಿವೆ. ಮಕ್ಕಳು ಪಿಯುಸಿ ಪರೀಕ್ಷೆಯನ್ನು ಸುಲಭದಿಂದ ಪಾಸ್ ಮಾಡಿದರೂ, ಸಿಇಟಿ ಪರೀಕ್ಷೆಯಲ್ಲಿ ಬಹುತೇಕ ಹಿನ್ನಡೆಯಾಗುವ ಸಾಧ್ಯತೆ ಇರುತ್ತದೆ. ಪಿಯು ಶಿಕ್ಷಣದ ಜೊತೆಯಲ್ಲಿ ಸಿಇಟಿಗೆ ಹೆಚ್ಚು ಗಮನ ನೀಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಾಸನ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ನಂತರ, ಹಲ್ಮಡಿಗೆ ಕನ್ನಡ ಭವನ ಮತ್ತು ರಾಜ್ಯ ಹಲ್ಮಿಡಿ ಉತ್ಸವ ನಡೆಸುವ ಮೂಲಕ ಹಲ್ಮಿಡಿಗೆ ನ್ಯಾಯ ಒದಗಿಸಿದ ತೃಪ್ತಿ ನಮ್ಮಲ್ಲಿದೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆ. ವಿಶ್ವವಿಖ್ಯಾತ ಬೇಲೂರಿನಲ್ಲಿ ಕನ್ನಡ ಭವನ ಮತ್ತು ಸಾಹಿತ್ಯ ಪರಿಷತ್ತಿಗೆ ನಿವೇಶನವಿಲ್ಲ. ಈ ಬಗ್ಗೆ ಸ್ಥಳೀಯ ಆಡಳಿತ ಚಿಂತನೆ ನಡೆಸಬೇಕಿದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ ಬಿ.ಎನ್.ಆನಂದ್ ಮಾತನಾಡಿ, ತಾಲ್ಲೂಕಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಕನ್ನಡ ಭಾಷೆಯಲ್ಲಿ ಅಧಿಕ ಅಂಕದಿಂದ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅಭಿನಂದನೆ ನಡೆಸಲಾಗಿದ್ದು, ಮಕ್ಕಳು ವಿದ್ಯೆಯ ಜೊತೆಯಲ್ಲಿ ವಿನಯವನ್ನು ಮೈಗೊಡಿಸಿಕೊಂಡು ಮುಂದಿನ ಸುಗಮ ಬದುಕಿಗೆ ಮುನ್ನಡಿ ಬರೆಯಬೇಕು ಎಂದರು.
'ಹಳಿ ತಪ್ಪಿದ ಬದುಕು' ಎಂಬ ಕೃತಿ ಕುರಿತು ಮಾತನಾಡಿದ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಮಾ.ನ.ಮಂಜೇಗೌಡ, ಬೇಲೂರು ತಾಲ್ಲೂಕು ಕೇಂದ್ರದಿಂದ ಸಮೀಪದ ಸೋಂಪುರದ ಗ್ರಾಮದ ಪ್ರಕಾಶ್ ಕನ್ನಡ ಸಾಹಿತ್ಯಲೋಕಕ್ಕೆ ತಮ್ಮದೇ ಆದ ಪುಸ್ತಕಗಳನ್ನು ನೀಡುವ ಮೂಲಕ ಹೆಸರು ಮಾಡಿದ್ದು, ಅವರ ಸಾಮಾಜಿಕ ಕಳಕಳಿ ಇಡೀ ಪುಸ್ತಕದಲ್ಲಿ ಹೊರ ಚೆಲ್ಲಿದೆ. ಬಡತನದ ನೋವು, ಹಸಿವು, ಮೌಡ್ಯ, ಅಂಧಕಾರ ಇನ್ನು ಹತ್ತಾರು ವಿಷಯಗಳ ಬಗ್ಗೆ ಬಹಳ ಸವಿಸ್ತಾರವಾದ ಮಾಹಿತಿ ಈ ಕೃತಿಯಲ್ಲಿ ಮೂಡಿಬಂದಿದೆ. ಇನ್ನು ಹಲವು ಕಾದಂಬರಿ ಹಾಗೂ ಕವನ ಸಂಕಲಗಳ ಹಸ್ತಪ್ರತಿಗಳು ಲಭ್ಯವಿದ್ದು, ಮುಂದಿನ ದಿನದಲ್ಲಿ ಸಾಹಿತ್ಯ ಲೋಕಕ್ಕೆ ಬರಲಿವೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಸುಭಾನ್, ವಿಜಯ ದೃವ ಗ್ರೂಪ್ ಅಧ್ಯಕ್ಷ ಕೆ.ಎನ್.ಪುನೀತ್, ಸಾಹಿತಿ ಪ್ರಕಾಶ್ ಸೋಂಪುರ, ಗೌರವ ಕಾರ್ಯದರ್ಶಿ ಆರ್.ಎಸ್.ಮಹೇಶ್, ಕೋಶಾಧ್ಯಕ್ಷ ಚಂದ್ರಶೇಖರಪ್ಪ, ಕಿರಿಣ್,ಶ್ಯಾಮ್, ಚೇತನ ಇನ್ನು ಮುಂತಾದವರು ಹಾಜರಿದ್ದರು.