ಸೆ. 1ರಂದು ವಿಟಿಯು ಕಾಲೇಜುಗಳು ಬಂದ್
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಫಲಿತಾಂಶ ವಿಳಂಬದಿಂದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿ ಸೆಪ್ಟೆಂಬರ್ 1ರಂದು ಎಂಜಿನಿಯರಿಂಗ್ ಕಾಲೇಜುಗಳ ಬಂದ್ಗೆ ಕರೆ ಕೊಟ್ಟಿವೆ.
ಫಲಿತಾಂಶ ವಿಳಂಬದಿಂದ ಸುಮಾರು 15,000 ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಶುಕ್ರವಾರ (ಸೆ.1) ಎಲ್ಲಾ ಜಿಲ್ಲೆಗಳ ವಿಟಿಯು ತರಗತಿಗಳನ್ನು ಬಹಿಸ್ಕರಿಸಿ ಪ್ರತಿಭಟನೆಗೆ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ ಓ) ಸಾಥ್ ನೀಡಲಿದೆ ಎಂದು ಎಐಡಿಎಸ್ ಓ ರಾಜ್ಯ ಉಪಾಧ್ಯಕ್ಷ ಬಿ.ಬಿ. ರವಿನಂದನ್ ಹೇಳಿದ್ದಾರೆ.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಧ್ಯಾಹ್ನ 12ಕ್ಕೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರವಿನಂದನ್ ತಿಳಿಸಿದ್ದಾರೆ.
2016ರ ಡಿಸೆಂಬರ್ನಲ್ಲಿ ನಡೆಸಲಾದ ಎಲ್ಲ ಸೆಮಿಸ್ಟರ್ ಗಳ ಪರೀಕ್ಷೆಯ ಫಲಿತಾಂಶವನ್ನು ಐದು ತಿಂಗಳ ವಿಳಂಬವಾಗಿ ಪ್ರಕಟಿಸಲಾಗಿದೆ. ಮರು ಮೌಲ್ಯಮಾಪನದ ಫಲಿತಾಂಶವನ್ನು ಪೂರಕ ಪರೀಕ್ಷೆಗೆ ತೆರಳುವ ಕೆಲವು ತಾಸುಗಳ ಮೊದಲು ಪ್ರಕಟಿಸಲಾಗಿದೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.