ಬುರ್ಖಾ ತೊಟ್ಟಿದ್ದ ವಿದ್ಯಾರ್ಥಿನಿಗೆ ಅಧಿವೇಶನಕ್ಕೆ ಪ್ರವೇಶ ನಿರಾಕರಣೆ
ಬೆಂಗಳೂರು, ಜೂನ್ 7: ಬುರ್ಖಾ ಧರಿಸಿದ್ದ ವಿದ್ಯಾರ್ಥಿಯೋರ್ವಳನ್ನು ಕರ್ನಾಟಕ ವಿಧಾನಸಭೆಯ ಅಧಿವೇಶನ ಪ್ರವೇಶಿಸಿದಂತೆ ತಡೆದ ಘಟನೆ ಬುಧವಾರ ನಡೆದಿದೆ. ಅಧಿವೇಶನ ವೀಕ್ಷಣೆಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಒಳ ಪ್ರವೇಶಿಸದಂತೆ ಮಾರ್ಷಲ್ ಗಳು ಬಾಗಿಲಲ್ಲಿ ತಡೆದಿದ್ದರು.
ಬುರ್ಖಾ ತೆಗೆದೇ ವಿಧಾನಸಭೆ ಪ್ರವೇಶಿಸುವಂತೆ ಮಾರ್ಷಲ್ ಗಳು ಆಕೆಗೆ ಹೇಳಿದ್ದಾರೆ. ಆದರೆ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ಬುರ್ಖಾ ತೆಗೆಯಲು ನಿರಾಕರಿಸಿದ್ದಾಳೆ. ಕೊನೆಗೆ ಮಹಿಳಾ ಸಿಬ್ಬಂದಿಗಳು ಆಕೆಯನ್ನು ಕೋಣೆಗೆ ಕರೆದುಕೊಂಡು ಹೋಗಿ ವಿವರವಾಗಿ ಭದ್ರತಾ ಪರಿಶೀಲನೆ ನಡೆಸಿ ಒಳಕ್ಕೆ ತೆರಳಲು ಅನುಮತಿ ನೀಡಿದ್ದಾರೆ.
ಬುರ್ಖಾ ಧರಿಸಿದ ಯುವತಿ ಕಾಲೇಜು ಗುರುತಿನ ಚೀಟಿಯೊಂದಿಗೆ ವಿದ್ಯಾರ್ಥಿಗಳ ತಂಡದಲ್ಲೇ ಬಂದಿದ್ದಳು. ವಿಧಾನಸಭೆಯ ಕಲಾಪವನ್ನು ವೀಕ್ಷಣೆ ಮಾಡಲು ಕಾಲೇಜು ವಿದ್ಯಾರ್ಥಿಗಳು ಬಂದಿದ್ದರು. ಈ ವೇಳೆ ಬುರ್ಖಾ ಗಲಾಟೆಯಿಂದಾಗಿ ಸುಮಾರು 20 ನಿಮಿಷ ತಡವಾಗಿ ಯುವತಿಯನ್ನು ಒಳಕ್ಕೆ ಬಿಡಲಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಭದ್ರತಾ ಸಿಬ್ಬಂದಿಗಳು ಭದ್ರತಾ ತಪಾಸಣೆ ನಿಯಮದಂತೆ ತಪಾಸಣೆ ಮಾಡಿದ್ದೇವೆ. ಇದರಲ್ಲಿ ಧರ್ಮದ ವಿಷಯ ಬರುವುದೇ ಇಲ್ಲ ಎಂದು ಹೇಳಿದ್ದಾರೆ.