ಬಿಎಸ್ವೈ ಬದಲಾವಣೆ: ಜೆಡಿಎಸ್ ಮುಖಂಡ ಸಿಡಿಸಿದ ಹೊಸ ಬಾಂಬ್
ಬಿಎಸ್ವೈ - ಎಚ್ಡಿಕೆ ಭೇಟಿಯ ಹಿಂದಿನ ಮರ್ಮ ಏನು? ಜೆಡಿಎಸ್ ಮುಖಂಡ ಸಿಡಿಸಿದ ಹೊಸ ಬಾಂಬ್!
ಹುಬ್ಬಳ್ಳಿ, ಸೆ 14: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು, ಸಿಎಂ ಗೃಹಕಚೇರಿಯಲ್ಲಿ ಭೇಟಿಯಾದ ಹಿಂದೆ, ಬೇರೇನೋ ರಾಜಕೀಯವಿದೆಯಾ? ಗೊತ್ತಿಲ್ಲ, ಆದರೆ..
ಕುತೂಹಲ ಮೂಡಿಸಿದ ಎಚ್ಡಿಕೆ, ಯಡಿಯೂರಪ್ಪ ಭೇಟಿ!
ಹಿರಿಯ ಜೆಡಿಎಸ್ ಮುಖಂಡರೊಬ್ಬರು ನೀಡಿದ ಹೇಳಿಕೆಯ ಪ್ರಕಾರ, ಯಡಿಯೂರಪ್ಪನವರನ್ನು ಕೆಳಗಿಳಿಸುವ ಕೆಲಸ ಬಿಜೆಪಿಯಲ್ಲಿ ಹಿಂದಿನಿಂದಲೂ ನಡೆಯುತ್ತಿದೆ. ಅದೀಗ ವೇಗ ಪಡೆದುಕೊಂಡಿದೆ.
"ಯಡಿಯೂರಪ್ಪನವರನ್ನು ಬದಲಾಯಿಸುವ ಬೆಳವಣಿಗೆಗಳು ಪಕ್ಷದಲ್ಲಿ ನಡೆಯುತ್ತಿರುವುದು ಹೌದು ಎನ್ನುವುದನ್ನು ಬಿಜೆಪಿಯವರೇ ನನ್ನಲ್ಲಿ ಹೇಳಿದ್ದಾರೆ. ಆ ಕಾರಣಕ್ಕೆ ಕುಮಾರಸ್ವಾಮಿ, ಸಿಎಂ ಅವರನ್ನು ಭೇಟಿಯಾಗಿರಬಹುದು"ಎಂದು ಹಿರಿಯ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಯಾವ ಕಾರಣಕ್ಕೂ ಸಿಎಂ ಬಿಎಸ್ವೈ ಬದಲಾವಣೆ ಇಲ್ಲ: ಸಚಿವ ಸೋಮಣ್ಣ
ರಾಜ್ಯ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ದೆಹಲಿಗೆ ಹೋಗಿದ್ದು, ಇತ್ತ, ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿದ್ದು, ಒಂದಕ್ಕೊಂದು ಸಿಂಕ್ ಆಗುತ್ತಿದೆಯಾ ಎನ್ನುವ ಅನುಮಾನ ಕಾಡುತ್ತಿರುವ ಈ ಸಮಯದಲ್ಲಿ ಹೊರಟ್ಟಿಯವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮೂವರು ಉಪ ಮುಖ್ಯಮಂತ್ರಿಗಳು
ಮೂವರು ಉಪ ಮುಖ್ಯಮಂತ್ರಿಗಳನ್ನು ಹೇರಿದಾಗಲೇ, ಯಡಿಯೂರಪ್ಪನವರ ಕೈಕಟ್ಟಿ ಹಾಕಿದ್ದಂತಾಗಿತ್ತು ಎನ್ನುವ ವಿಷಯ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ವೇಳೆ ಚರ್ಚೆಯ ವಿಷಯವಾಗಿತ್ತು. ಬಿಎಸ್ವೈ ಕೂಡಾ ಅಸಮಾಧಾನ ವ್ಯಕ್ತ ಪಡಿಸಿದ್ದೂ ಗೌಪ್ಯವಾಗಿ ಉಳಿದಿರಲಿಲ್ಲ. ಹಂಗೂಹಿಂಗೂ ಸರಕಾರ ಒಂದು ವರ್ಷದ ಪೂರೈಸಿದ ನಂತರ ಯಡಿಯೂರಪ್ಪ ಬದಲಾವಣೆಯ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ
"ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲು ಬಿಜೆಪಿಯಲ್ಲೇ ಲಾಬಿ ಬಿರುಸುಗೊಂಡಿದೆ" ಎಂದು ಹೇಳಿರುವ ಬಸವರಾಜ ಹೊರಟ್ಟಿ, "ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವ ವಿಚಾರವನ್ನು ಬಿಜೆಪಿಯ ಹಿರಿಯ ಮುಖಂಡರೊಬ್ಬರು ನನಗೆ ಹೇಳಿದ್ದಾರೆ. ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ವಿಚಾರವಾಗಿ ಆ ಮುಖಂಡರು ನನ್ನ ಜೊತೆ ಚರ್ಚೆ ಮಾಡಿದ್ದಾರೆ" ಎಂದು ಹೊರಟ್ಟಿ ಹೇಳಿದ್ದಾರೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಎಸ್ವೈ ಕಾರಣ
"ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದಾದರೆ, ಅದಕ್ಕೆ ಕಾರಣ, ಯಡಿಯೂರಪ್ಪನವರು. ಇದು ಸಿಎಂ ಆಗಿ ಅವರ ಕೊನೆಯ ಅವಧಿ, ಅವರನ್ನು ಕೆಳಗಿಳಿಸುವುದು ಸರಿಯಾದ ನಿರ್ಧಾರ ಅಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ" ಎಂದು ಹೊರಟ್ಟಿ ಹೇಳಿದ್ದಾರೆ.
ಕುಮಾರಸ್ವಾಮಿ, ಯಡಿಯೂರಪ್ಪನವರನ್ನು ಭೇಟಿಯಾಗಿರಬಹುದು
"ಪಕ್ಷದೊಳಗೆ ನಡೆಯುತ್ತಿರುವ ವಿದ್ಯಮಾನದಿಂದಾಗಿ ಕುಮಾರಸ್ವಾಮಿಯವರು, ಯಡಿಯೂರಪ್ಪನವರನ್ನು ಭೇಟಿಯಾಗಿರಬಹುದು. ರಾಜ್ಯದ ಹಿತದೃಷ್ಟಿಯಿಂದ ಕುಮಾರಸ್ವಾಮಿಯವರು ಯಡಿಯೂರಪ್ಪನವರ ಜೊತೆ ಚರ್ಚೆ ನಡೆಸಿದ್ದಾರೆ"ಎಂದು ಬಸವರಾಜ ಹೊರಟ್ಟಿ ಹೇಳುವ ಮೂಲಕ, ಕುಮಾರಸ್ವಾಮಿ - ಯಡಿಯೂರಪ್ಪನವರ ಭೇಟಿಯ ಸತ್ಯಾಸತ್ಯತೆ ಏನಿರಬಹುದು ಎನ್ನುವುದು ಮತ್ತೆ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.
Recommended Video
ಕುಮಾರಸ್ವಾಮಿ ಅವರು ರಾಜಕೀಯ ಉದ್ದೇಶದಿಂದ ಬಂದು ಭೇಟಿ ಮಾಡಿಲ್ಲ
"ಕುಮಾರಸ್ವಾಮಿ ಅವರು ರಾಜಕೀಯ ಉದ್ದೇಶದಿಂದ ಬಂದು ಭೇಟಿ ಮಾಡಿಲ್ಲ. ದಾಸರಹಳ್ಳಿ ಶಾಸಕ ಮಂಜುನಾಥ್ ಅವರ ಜೊತೆಯಲ್ಲಿ ಬಂದು ಭೇಟಿ ಮಾಡಿದ್ದಾರೆ. ದಾಸರಹಳ್ಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗಿದೆ. ಮಳೆಯಿಂದ ಆ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದ ಹಾನಿಯಾಗಿದೆ. ಹೀಗಾಗಿ ಹೆಚ್ಚಿನ ಪರಿಹಾರ ನೀಡುವಂತೆ ಕೇಳಲು ಬಂದಿದ್ದರು" ಎಂದು ಯಡಿಯೂರಪ್ಪ ಸ್ಪಷ್ಟನೆಯನ್ನು ನೀಡಿದ್ದರು.