ಅಕ್ರಮ ವಲಸಿಗರಿಗೆ ದೇವೇಗೌಡರು ಬೆಂಬಲ ನೀಡ್ತಿದ್ದಾರೆಯೇ?: ಆರ್. ಅಶೋಕ್
ಬೆಂಗಳೂರು, ಆಗಸ್ಟ್ 4: ಹೀಗೆ ಅಕ್ರಮ ವಲಸಿಗರಿಗೆ ಅವಕಾಶ ನೀಡುತ್ತಾ ಹೋದರೆ ಇಂದು ಅಸ್ಸಾಂಗೆ ಆಗಿರುವ ಪರಿಸ್ಥಿತಿ ನಾಳೆ ಬೆಂಗಳೂರಿಗೆ ಆಗುತ್ತದೆ ಎಂದು ಬಿಜೆಪಿ ಶಾಸಕ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿಗೆ ಪ್ರತಿನಿತ್ಯ ಬಾಂಗ್ಲಾ ಮೂಲದ ಅಕ್ರಮ ವಲಸಿಗರು ಬಂದಿಳಿಯುತ್ತಿದ್ದಾರೆ. ಅಲ್ಲಿ ನೀಡಿದ ಮತದಾನದ ಗುರುತಿನ ಚೀಟಿಗಳನ್ನು ತೋರಿಸಿ ತಾವು ಪಶ್ಚಿಮ ಬಂಗಾಳದವರು ಎಂದು ಹೇಳಿಕೊಳ್ಳುತ್ತಿದ್ದಾರೆ.
'ಅಕ್ರಮ ನುಸುಳುಕೋರರಿಗೆ ಆಶ್ರಯ ನೀಡೋಕೆ ಭಾರತ ಧರ್ಮಛತ್ರವಲ್ಲ!'
ಇದು ಹೀಗೆಯೇ ಮುಂದುವರಿದರೆ ನಮ್ಮ ಆಸ್ತಿ ಪಾಸ್ತಿಗಳು ಅಕ್ರಮ ವಲಸಿಗರ ಪಾಲಾಗುತ್ತದೆ. ಇದರ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಬಾಂಗ್ಲಾದ ವಲಸಿಗರು ಇದ್ದರೆ ತಪ್ಪೇನು ಎಂದು ಹೇಳುತ್ತಾರೆ. ಮುಂದೆ ಪಾಕಿಸ್ತಾನಿಗಳೂ ಇರಲಿ ಎನ್ನಬಹುದು? ಇಂತಹ ಮಮತಾ ಬ್ಯಾನರ್ಜಿ ಅವರನ್ನು ದೇವೇಗೌಡರು ಬೆಂಬಲಿಸುತ್ತಾರೆ. ಹಾಗಾದರೆ ದೇವೇಗೌಡರೂ ಅಕ್ರಮ ವಲಸಿಗರನ್ನು ಬೆಂಬಲಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಮಾದಕವಸ್ತು ಅಕ್ರಮದ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಈ ಪ್ರಕರಣಗಳಲ್ಲಿ ಬಾಂಗ್ಲಾದೇಶ ಮತ್ತು ನೈಜೀರಿಯಾದ ಪ್ರಜೆಗಳೇ ಹೆಚ್ಚಾಗಿದ್ದಾರೆ.
ರಾಷ್ಟ್ರೀಯ ಪೌರತ್ವ ನೋಂದಣಿ ಎಂದರೇನು?, ವಿವಾದ, ವಿವರ
ಅವರನ್ನು ತಡೆಯಲು ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಪೊಲೀಸ್ ಆಯುಕ್ತರನ್ನು ಸೋಮವಾರ ಭೇಟಿ ಮಾಡಲಿದ್ದೇವೆ. ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೋರುತ್ತೇವೆ ಎಂದು ಹೇಳಿದರು.