ಪಂಚತಾರಾ ಹೋಟೆಲ್ ನಲ್ಲಿ ಎಚ್ಡಿಕೆ: ಬಿಎಸ್ವೈ ಏಟಿಗೆ ಕುಮಾರಸ್ವಾಮಿ ತಿರುಗೇಟು
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾಜಿ ಮತ್ತು ಹಾಲೀ ಮುಖ್ಯಮಂತ್ರಿಗಳ ನಡುವೆ, ಬೆಂಗಳೂರಿನಲ್ಲಿರುವ ಪಂಚತಾರಾ ಹೋಟೆಲ್ ನಲ್ಲಿ ಕುಮಾರಸ್ವಾಮಿ ಉಳಿದುಕೊಳ್ಳುವ ವಿಚಾರದಲ್ಲಿ ಮಾತಿಗೆ ಮಾತು, ಬೆಳೆದ ವಿದ್ಯಮಾನ ಬುಧವಾರ (ಡಿ 19) ನಡೆದಿದೆ.
ಮುಖ್ಯಮಂತ್ರಿಗಳು ಫೈವ್ ಸ್ಟಾರ್ ಹೋಟೆಲ್ ನಲ್ಲಿ ತಂಗಿರುವುದರಿಂದ, ಸರಕಾರೀ ಅಧಿಕಾರಿಗಳಿಗೆ ಮತ್ತು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ ಸದನದ ಗಮನ ಸೆಳೆದಿದ್ದರು.
2018ರಲ್ಲಿ ಧೂಳೆಬ್ಬಿಸಿದ ಎಚ್ ಡಿ ಕುಮಾರಸ್ವಾಮಿ ಭಾಷಣ
ಇದಕ್ಕೆ ಉತ್ತರಿಸುತ್ತಾ, ನಾನು ಬೆಂಗಳೂರಿನ ಜೆ ಪಿ ನಗರದ ನಿವಾಸದಲ್ಲೇ ವಾಸವಾಗಿರುವುದು. ನಾನು ಸರಕಾರೀ ಬಂಗಲೆಯನ್ನು ತೆಗೆದುಕೊಂಡಿಲ್ಲ. ನನ್ನ ಓಡಾಟಕ್ಕೆ ಸರಕಾರದ ಕಾರನ್ನೂ ಬಳಸುತ್ತಿಲ್ಲ. ಟಿಎಡಿಎ, ಪೆಟ್ರೋಲ್ ಬಿಲ್ ಇದ್ಯಾವುದನ್ನೂ ತೆಗೆದುಕೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ನೀವು ಮೊನ್ನೆ ಮೊನ್ನೆ ಮೂರು ದಿನ ಮುಖ್ಯಮಂತ್ರಿಯಾಗಿದ್ದಾಗ, ಅದೇ ಪಂಚತಾರಾ ಹೋಟೆಲ್ ನಿಂದಲೇ ಕಾರ್ಯನಿರ್ವಹಿಸಿರುವ ವಿಚಾರ ನನಗೇನು ಗೊತ್ತಿಲ್ಲ ಎಂದು ಕೊಳ್ಳಬೇಡಿ ಎಂದು ಯಡಿಯೂರಪ್ಪನವರನ್ನು ಕುಮಾರಸ್ವಾಮಿ ಚೇಡಿಸಿದರು.
ರೈತ ಮಹಿಳೆ ಬಗ್ಗೆ ಹೇಳಿಕೆ: ಸದನದಲ್ಲಿ ಕುಮಾರಸ್ವಾಮಿ ಸ್ಪಷ್ಟೀಕರಣ
ಇದಕ್ಕೆ ಉತ್ತರ ನೀಡಿದ ಮಾಜಿ ಮುಖ್ಯಮಂತ್ರಿಗಳು, ನಾನು ಪಂಚತಾರಾ ಹೋಟೆಲ್ ನಿಂದ ಕಾರ್ಯನಿರ್ವಹಿಸಿದ್ದು ಎನ್ನುವುದನ್ನು ನೀವು ರುಜುವಾತು ಪಡಿಸಿದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನಾನು ನೀಡುತ್ತೇನೆಂದು ಯಡಿಯೂರಪ್ಪ ಸವಾಲೆಸೆದರು. ಮಾಜೀ, ಹಾಲೀಗಳ ಗಮನಸೆಳೆಯುವ ಚರ್ಚೆಯ ಪ್ರಮುಖಾಂಶ, ಮುಂದೆ ಓದಿ..
ಬಿಎಸ್ವೈ ಏಟಿಗೆ ಕುಮಾರಸ್ವಾಮಿ ತಿರುಗೇಟು
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬಿಎಸ್ವೈ ಹೇಳಿದಾಗ, ಸ್ಪೀಕರ್ ರಮೇಶ್ ಕುಮಾರ್ ಮತ್ತು ಸಿಎಂ ಕುಮಾರಸ್ವಾಮಿ ಒಕ್ಕೂರಿಲಿನಿಂದ, ಅಯ್ಯಯ್ಯೋ.. ಹಾಗೆಲ್ಲಾ ಮಾಡೋಕೆ ಹೋಗಬೇಡಿ. ಈ ಸದನಕ್ಕೆ ನಿಮ್ಮ ಅವಶ್ಯಕತೆಯಿದೆ ಎಂದು ಮನವಿ ಮಾಡಿದರು. ಇವರ ಮನವಿಗೆ ಸ್ಪಂದಿಸದ ಯಡಿಯೂರಪ್ಪ, ಮತ್ತೆ ಕುಮಾರಸ್ವಾಮಿ ವಿರುದ್ದ ಮಾತಿಗಿಳಿದರು.
ಉತ್ತರ ಕರ್ನಾಟಕಕ್ಕೆ ಸ್ಥಳಾಂತರವಾಗಲಿವೆ 9 ಸರ್ಕಾರಿ ಕಚೇರಿ
ವಿರೋಧ ಪಕ್ಷದ ನಾಯಕ ಎನ್ನುವ ಕನಿಷ್ಟ ಸೌಜನ್ಯವಿಲ್ಲವೇ
ಸ್ಪೀಕರ್ ಮತ್ತು ಸಿಎಂ ಮನವಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಎನ್ನುವ ಕನಿಷ್ಟ ಸೌಜನ್ಯವಿಲ್ಲದೇ ಆಪಾದನೆ ಹೊರಿಸಬಾರದು. ಇಲ್ಲಿ ಮಾತನಾಡುವ ಎಲ್ಲಾ ವಿಚಾರಗಳು ಕಡತಕ್ಕೆ ಸೇರುತ್ತದೆ, ನಿಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನನ್ನ ಮೇಲೆ ಯಾಕೆ ಆರೋಪ ಹೊರಿಸುತ್ತಿದ್ದೀರಾ ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.
ಮಾನ್ಯ ಮುಖ್ಯಮಂತ್ರಿಗಳೇ ನಮಗಿರುವ ದುಃಖ
ಮಾತು ಮುಂದುವರಿಸಿದ ಯಡಿಯೂರಪ್ಪ, ಮಾನ್ಯ ಮುಖ್ಯಮಂತ್ರಿಗಳೇ ನಮಗಿರುವ ದುಃಖವೇನಂದರೆ, ನೀವು ಸಾರ್ವಜನಿಕರ ದುಡ್ಡಿನಲ್ಲಿ ವೆಸ್ಟ್ ಎಂಡ್ ಅಂತಹ ಫೈವ್ ಸ್ಟಾರ್ ಹೋಟೆಲ್ ನಲ್ಲಿದ್ದರೆ, ಜನಸಾಮಾನ್ಯರಲ್ಲಿ ಯಾವ ಭಾವನೆ ಮೂಡುತ್ತದೆ. ಅಧಿಕಾರಿಗಳನ್ನು ವರ್ಗಾವಣೆ ಮಾಡುವ ದಂಧೆಗಾಗಿ ನೀವು, ಫೈವ್ ಸ್ಟಾರ್ ಹೋಟೆಲ್ ನಲ್ಲಿ ಇದ್ದೀರಾ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿದೆ, ಅದು ನನ್ನ ಭಾವನೆ ಕೂಡಾ ಎಂದು ಯಡಿಯೂರಪ್ಪ ಹೇಳಿದರು.
ಸರಕಾರೀ ಅಧಿಕಾರಿಗಳು ಮುಖಮುಚ್ಚಿಕೊಂಡು ಹೋಗಿರುವ ವಿಚಾರ
ಯಡಿಯೂರಪ್ಪನವರೇ, ನೀವು ಮೂರು ದಿನ ಮುಖ್ಯಮಂತ್ರಿಯಾಗಿದ್ದಾಗ, ನಾನೂ ಒಮ್ಮೆ ಅಲ್ಲಿಗೆ ಬರಬೇಕಾಯಿತು. ನಾನು ಬಂದಾಗ, ಇದೇ ಸರಕಾರೀ ಅಧಿಕಾರಿಗಳು ಮುಖಮುಚ್ಚಿಕೊಂಡು ಹೋಗಿರುವ ವಿಚಾರ ನನ್ನ ಕಣ್ಣಮುಂದಿದೆ. ಆ ವಿಚಾರವನ್ನು ನಾನು ದೊಡ್ಡದು ಮಾಡಲು ಹೋಗುವುದಿಲ್ಲ. ನಾನು ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಇದ್ದದ್ದು ಸತ್ಯ. ಆದರೆ, ಯಾವುದೇ ಅಧಿಕಾರಿಗಳನ್ನು ನಾನು ಹೋಟೆಲ್ ಗೆ ಕರೆಸಿಕೊಂಡಿಲ್ಲ. ಅಧಿಕಾರಿಗಳು ಇಲ್ಲೇ ಇದ್ದಾರೆ, ಬೇಕಾದಲ್ಲಿ ಅವರಲ್ಲಿ ಕ್ರಾಸ್ ಚೆಕ್ ಮಾಡಿಕೊಳ್ಳಬಹುದು - ಎಚ್ ಡಿ ಕುಮಾರಸ್ವಾಮಿ.
ಬ್ಯಾಕ್ ಗ್ರೌಂಡ್ ನಲ್ಲಿ ರೇವಣ್ಣ
ಆವಾಗ ಹಿಂದಿನಿಂದ ನಮಗೆ ಯಾವ ಸ್ಟಾರ್ ಹೋಟೆಲ್ ಗಳೂ ಗೊತ್ತಿಲ್ಲ ಸ್ವಾಮಿ ಎಂದು ರೇವಣ್ಣ ಹೇಳಿದಾಗ, ನೀನು ಬಿಡಪ್ಪಾ.. ನೀನೇ ದೊಡ್ಡ ಸ್ಟಾರ್ ಎಂದು ಸ್ಪೀಕರ್ ಹೇಳಿದಾಗ, ಸದನ ನಗೆಗಡಲಲ್ಲಿ ತೇಲಿತು. ಇಡೀ ರಾಜ್ಯಕ್ಕೆ ನನ್ನ ಆರೋಗ್ಯದ ಬಗ್ಗೆ ಕಾಳಜಿಯಿದೆ. ಹಾಗಾಗಿ, ವಾಕಿಂಗ್ ಮಾಡುತ್ತೇನೆ, ಕಬ್ಬನ್ ಪಾರ್ಕ್ ನಲ್ಲಿ ಓಡಾಡಿದರೆ, ಜನರಿಗೆ ನಮಸ್ಕಾರ ಮಾಡಿಕೊಂಡಿರುವುದೇ ಕೆಲಸವಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಈ ವಿಚಾರವನ್ನು ಇಟ್ಟುಕೊಂಡು, ತಮ್ಮ ಜನಪರ ನಿಲುವಿನ ಬಗ್ಗೆ ಕೆಲವು ಉದಾಹರಣೆಗಳನ್ನು ಕುಮಾರಸ್ವಾಮಿ ನೀಡಿದರು.