ಕೊರೊನಾ ಭೀತಿ; ಕರ್ನಾಟಕದ ಹಲವೆಡೆ ಹೈ ಅಲರ್ಟ್
ಇಡೀ ವಿಶ್ವದಲ್ಲೇ ಭಾರೀ ಸದ್ದಾಗುತ್ತಿರುವ ಸದ್ಯದ ಸುದ್ದಿ "ಕೊರೊನಾ". ಚೀನಾದಲ್ಲಿ ನೂರಾರು ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೊರೊನಾ ವೈರಸ್ ಎಂಬ ಪದವೇ ಬೆಚ್ಚಿ ಬೀಳಿಸುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ರಾಜ್ಯದ ಕೆಲವೆಡೆ ಕಟ್ಟೆಚ್ಚರ ವಹಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿ ನಿಗಾ ಇಡಲಾಗಿದೆ. ಹೊರಗಿನಿಂದ ಬರುತ್ತಿರುವ ಪ್ರವಾಸಿಗರ ಮೇಲೆ ಕಣ್ಣಿಡಲಾಗಿದೆ. ಕೊರೊನಾ ವೈರಸ್ ಶಂಕೆ ಕಂಡುಬಂದಲ್ಲಿ ತಪಾಸಣೆಗೆ ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ಗಳನ್ನೂ ತೆರೆಯಲಾಗುತ್ತಿದೆ.
ಕರ್ನಾಟಕದಲ್ಲಿ ಕೊರೊನಾ ವೈರಸ್ ಕುರಿತು ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಈ ನಡುವೆ ಹುಬ್ಬಳ್ಳಿಯಲ್ಲಿ ಕೊರೊನಾ ವೈರಸ್ ಶಂಕೆ ವ್ಯಕ್ತಗೊಂಡಿದೆ. ಕೊರೊನಾ ವೈರಸ್ ಕುರಿತಂತೆ ಕರ್ನಾಟಕದ ಕೆಲವೆಡೆ ಏನೇನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ...
ಕೇರಳ ಗಡಿಭಾಗ ಚಾಮರಾಜನಗರದಲ್ಲಿ ಭಾರೀ ಕಟ್ಟೆಚ್ಚರ
ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇರಳದ ಗಡಿಗೆ ಹೊಂದಿಕೊಂಡಿರುವ ಚಾಮರಾಜನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೇರಳದಿಂದ ಬರುವ ಪ್ರತಿಯೊಬ್ಬರನ್ನೂ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಸಲಾಗುತ್ತಿದೆ. ಕೊರೊನಾ ವೈರಸ್ ಹರಡದಂತೆ ಜಾಗೃತಿ ಮೂಡಿಸಲು ಯತ್ನಿಸಲಾಗುತ್ತಿದ್ದು, ಕೇರಳಕ್ಕೆ ಸನಿಹದಲ್ಲಿರುವ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ಐಸೊಲೇಷನ್ ವಾರ್ಡ್ ತೆರೆಯಲಾಗಿದೆ. ಮೂಲೆಹೊಳೆ ಚೆಕ್ ಪೋಸ್ಟ್ ಹಾಗೂ ಬಂಡೀಪುರ ಚೆಕ್ ಪೋಸ್ಟ್ ಗಳಲ್ಲಿ ಕೇರಳದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರನ್ನು ಆರೋಗ್ಯ ಇಲಾಖೆಯಿಂದ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ವೈರಸ್ ಹರಡದಂತೆ ಜಾಗೃತಿ ಮೂಡಿಸುವ ಕರಪತ್ರವನ್ನೂ ಹಂಚಲಾಗುತ್ತಿದೆ.
ಕೊರೊನಾ ವೈರಸ್ ; ರಾಜ್ಯ ವಿಪತ್ತು ಎಂದು ಘೋಷಿಸಿದ ಕೇರಳ
ಮೈಸೂರಿನಲ್ಲಿ ವಿಶೇಷ ಕೊರೊನಾ ವಾರ್ಡ್
ಪಕ್ಕದ ಕೇರಳದಲ್ಲಿ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಮೈಸೂರು ನಾಗರಿಕರೂ ಭಯದಲ್ಲಿದ್ದಾರೆ. ಹೀಗಾಗಿ ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ಕೊರೊನಾ ವಾರ್ಡ್ ಸ್ಥಾಪನೆ ಮಾಡಲಾಗಿದೆ. 5 ಬೆಡ್, ಒಂದು ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಸಹಿತ ವಾರ್ಡ್ ಸ್ಥಾಪನೆ ಮಾಡಲಾಗಿದೆ. ಕೊರೊನಾ ವೈರಸ್ ಭೀತಿಯಿಂದ 100 N95 ಮಾಸ್ಕ್ ತರಿಸಲಾಗುತ್ತಿದೆ. ಚಿಕಿತ್ಸೆಗಾಗಿ ಇಬ್ಬರು ವೈದ್ಯರು, ನಾಲ್ಕು ನರ್ಸ್ಗಳನ್ನು ನೇಮಿಸಲಾಗಿದೆ. ಕೆಆರ್.ಆಸ್ಪತ್ರೆಯ ಜಯದೇವ ಆಸ್ಪತ್ರೆ ಕಟ್ಟಡದಲ್ಲಿ ವಾರ್ಡ್ ಸ್ಥಾಪನೆಯಾಗಿದೆ. "ಮೈಸೂರಿಗರು ಆತಂಕ ಪಡುವ ಪರಿಸ್ಥಿತಿ ಇಲ್ಲ. ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಪಾಸಿಟಿವ್ ನ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಮುಂಜಾಗ್ರತೆಯಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಔಷಧಿ ಇರಿಸಲಾಗಿದೆ" ಎಂದಿದ್ದಾರೆ ಕೆ.ಆರ್.ಆಸ್ಪತ್ರೆ ವೈದ್ಯಾಧಿಕಾರಿ ನಂಜುಂಡಸ್ವಾಮಿ.
ಹುಬ್ಬಳ್ಳಿಗೆ ಕಾಲಿಟ್ಟ ಕೊರೊನಾ ವೈರಸ್: ಟೆಕ್ಕಿ ಆಸ್ಪತ್ರೆಗೆ ದಾಖಲು
ಮುಂಡಗೋಡ ಟಿಬೇಟಿಯನ್ ಕಾಲೋನಿಗೆ ಬರುವವರ ಮೇಲೆ ನಿಗಾ
ಕಾರವಾರದಲ್ಲಿ ಯಾವುದೇ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗದಿದ್ದರೂ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರು ಸೂಚಿಸಿದ್ದಾರೆ. ಈ ಕುರಿತು ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ ನಡೆಸಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲೆಯ ಮುಂಡಗೋಡ ಟಿಬೇಟಿಯನ್ ಕಾಲೋನಿಗೆ ಬರುವವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿ, ನಿಗಾ ವಹಿಸಬೇಕು ಎಂದು ತಿಳಿಸಿದ್ದಾರೆ. ಕಾರವಾರ ನಗರದಲ್ಲಿ ಬಂದರು ಇರುವುದರಿಂದ ಸರಕುಗಳ ವಿನಿಮಯಕ್ಕಾಗಿ ವಿದೇಶಿ ಹಡಗುಗಳು ಆಗಮಿಸಿದ ಸಂದರ್ಭ ಅಲ್ಲಿಯ ಕಾರ್ಮಿಕರ ಮೂಲಕ ಸೋಂಕು ಹರಡುವ ಸಂಭವವಿದೆ. ಬಂದರು ಇಲಾಖೆ ಅಧಿಕಾರಿಗಳು ವೈದ್ಯರ ಸಹಕಾರ ಪಡೆದು ನಿಗಾ ಇಡುವ ಕೆಲಸವನ್ನು ಮಾಡಬೇಕು. ಅದೇ ರೀತಿ ರೈಲ್ವೇ ನಿಲ್ದಾಣಗಳಲ್ಲೂ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಕೋಲಾರದಲ್ಲಿನ ಚೀನಾ ಕಂಪನಿಗಳ ಮೇಲೆ ಕಣ್ಣು
ಕೋಲಾರ ತಾಲ್ಲೂಕು ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಚೀನಾದಿಂದ ಬಂದಿದ್ದ 23 ಜನರ ತಪಾಸಣೆ ನಡೆಸಲಾಗಿದೆ. ಯಾವುದೇ ರೋಗ ಲಕ್ಷಣಗಳು ಪತ್ತೆಯಾಗಿಲ್ಲ. ಈ ಕೈಗಾರಿಕಾ ಪ್ರದೇಶಕ್ಕೆ ಬೇರೆ ದೇಶಗಳಿಂದ ಬರುವವರ ಮೇಲೆ ನಿಗಾ ವಹಿಸಲಾಗಿದೆ. ನರಸಾಪುರ ಹಾಗೂ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಚೀನಾ ಹಾಗೂ ಜಪಾನ್ ಮೂಲದ ಕಂಪನಿಗಳಿವೆ. ಅಲ್ಲಿಂದ ಬರುವವರ ಮೇಲೆ ಸಂಪೂರ್ಣ ನಿಗಾ ವಹಿಸಿ ತಪಾಸಣೆ ನಡೆಸಲಾಗುವುದು ಎಂದು ಕೋಲಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಗೋಕರ್ಣಕ್ಕೆ ಬಂದಿಳಿದ ಥೈಲ್ಯಾಂಡ್ ಮಹಿಳೆಯರು; ಕಾರವಾರದಲ್ಲೂ ಕೊರೊನಾ ಭೀತಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೀತಿ ಬೇಡ
ಎಲ್ಲೆಲ್ಲೂ ತಲ್ಲಣ ಮೂಡಿಸಿರುವ ಕೊರೊನಾ ವೈರಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆತಂಕ ತಂದಿದೆ. ಹೀಗಾಗಿ ಇಲ್ಲಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್ ಕಾದಿರಿಸಲಾಗಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಂದರು, ಬಸ್ ನಿಲ್ದಾಣದಲ್ಲೂ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಸೋಂಕು ಬಾಧಿತರು ಕಂಡು ಬರದಿದ್ದರೂ, ಅತೀ ಹೆಚ್ಚಾಗಿ ಕೇರಳದಿಂದ ರೋಗಿಗಳು ಮಂಗಳೂರಿನ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವುದರಿಂದ ಜನ ಭಯದಲ್ಲಿದ್ದಾರೆ. ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ನವಮಂಗಳೂರು ಬಂದರು, ರೈಲ್ವೇ ಸ್ಟೇಷನ್, KSRTC ಮತ್ತು ಖಾಸಗಿ ಬಸ್ ನಿಲ್ದಾಣ, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಜಾಗೃತಿ ನೀಡುವ ಕಾರ್ಯ ನಡೆಯುತ್ತಿದೆ. ಮಂಗಳೂರು ವಿಮಾನನಿಲ್ದಾಣ ದ ಆಯಕಟ್ಟಿನ ಜಾಗಗಳಲ್ಲಿ LED ಫಲಕದಲ್ಲಿ ಕೊರೊನೊ ಸೋಂಕಿನ ಎಚ್ಚರಿಕೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.