ರಾಜ್ಯಾದ್ಯಂತ ಇಂದು ಕೊರೊನಾ ಲಸಿಕೆ ಡ್ರೈ ರನ್: ವಿವಿಧ ಜಿಲ್ಲೆಗಳ ಅಪ್ಡೇಟ್ಸ್
ಕರ್ನಾಟಕ, ಜನವರಿ 8: ದೇಶದಾದ್ಯಂತ ಇಂದಿನಿಂದ (ಜ.8) ಎರಡನೆ ಹಂತದ ಕೊರೊನಾ ಲಸಿಕೆ ಡ್ರೈ ರನ್ ಪ್ರಾರಂಭವಾಗಿದ್ದು, ಕರ್ನಾಟಕದ 24 ಜಿಲ್ಲೆಗಳಲ್ಲಿಯೂ ಕೊರೊನಾ ಲಸಿಕಾ ತಾಲೀಮು ಆರಂಭವಾಗಲಿದೆ. ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತಗಳ ನೇತೃತ್ವದಲ್ಲಿ ಸಕಲ ಸಿದ್ಧತೆಗಳೊಂದಿಗೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ಡ್ರೈ ರನ್ ಪ್ರಾರಂಭಿಸಲಾಯಿತು. ಕೆಲವು ಜಿಲ್ಲೆಗಳ ವರದಿ ಇಲ್ಲಿದೆ.
ಕೋಲಾರ ಜಿಲ್ಲೆಯಲ್ಲಿ ಜ.8ರಿಂದ ಕೊರೊನಾ ಲಸಿಕೆ ಡ್ರೈ ರನ್; ಎಲ್ಲೆಲ್ಲಿ ನಡೆಯಲಿದೆ?
ಕೋಲಾರ :
ಕೋಲಾರದಲ್ಲಿ ಕೊರೊನಾ ಲಸಿಕೆ ಡ್ರೈ ರನ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅವರು ಚಾಲನೆ ನೀಡಿದರು. ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ 11.30 ರಿಂದ ಡ್ರೈ ರನ್ ಆರಂಭವಾಗಿದೆ. ಕೋಲಾರ ಜಿಲ್ಲೆಯ 8 ಕಡೆಗಳಲ್ಲಿ ನಡೆಯುತ್ತಿರುವ ಕೊರೊನಾ ಲಸಿಕೆ ಡ್ರೈ ರನ್ ನಡೆದಿದ್ದು, ಕೋಲಾರ ಜಿಲ್ಲಾ ಕೇಂದ್ರದ 4 ಕಡೆಗಳಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಚಾಲನೆ ನೀಡಿದರು.
ಕೋಲಾರದಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಉದ್ಘಾಟಸಿದ ನಂತರ ಅದೇ ಕಾರ್ಯಕ್ರಮವನ್ನು ಕೋಲಾರ ಸಂಸದ ಮುನಿಸ್ವಾಮಿ ಅವರು ಮತ್ತೆ ಉದ್ಘಾಟಿಸಿದ ಪ್ರಸಂಗ ನಡೆಯಿತು.
ರಾಮನಗರ ವರದಿ:
ರಾಮನಗರ ಜಿಲ್ಲಾ ಆಸ್ಪತ್ರೆಯ ಕೋವಿಡ್-19 ಸೆಂಟರ್ ನಲ್ಲಿ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಕೊರೊನಾ ಡ್ರೈರನ್ ಗೆ ಚಾಲನೆ ನೀಡಿದರು.
ಕೊಡಗು ವರದಿ
ಕೋವಿಡ್ ಲಸಿಕೆಯ ಪೂರ್ವಭ್ಯಾಸವು (ಡ್ರೈ ರನ್) ಶುಕ್ರವಾರ ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವೀಕ್ಷಿಸಿದರು. ಕೊಡಗು ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ.ಕಾರ್ಯಪ್ಪ, ಡಿಎಚ್ಒ ಡಾ.ಕೆ.ಮೋಹನ್, ಡಾ.ಗೋಪಿನಾಥ್, ಡಾ.ಮಹೇಶ್ ಇತರರು ಇದ್ದರು. ಅದೇ ರೀತಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರ ಮತ್ತು ವಿರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈ ರನ್ ನಡೆಯುತ್ತಿದೆ.
ಉಡುಪಿ ವರದಿ:
ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್ ನಡೆಸಲಾಗಿದ್ದು, ಜಿಲ್ಲೆಯ 8 ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಡ್ರೈ ರನ್ ನಡೆಯಿತು. ಜಿಲ್ಲಾಕೇಂದ್ರದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಂದ ಚಾಲನೆ ದೊರಕಿತು. ಜಿಲ್ಲೆಯ 8 ಕೇಂದ್ರಗಳಲ್ಲಿ ಏಕಕಾಲದಲ್ಲಿ 25 ಜನರಿಗೆ ಕೋವ್ಯಾಕ್ಸಿನ್ ಚುಚ್ಚುಮದ್ದು ಮಾಕ್ ಟೆಸ್ಟ್ ಮಾಡಲಾಗುತ್ತದೆ.
19562 ಫಲಾನುಭವಿಗಳನ್ನು ಉಡುಪಿ ಜಿಲ್ಲಾಡಳಿತ ಗುರುತಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಎರಡನೇ ಹಂತದಲ್ಲಿ ಫ್ರಂಟ್ ಲೈನ್ ವರ್ಕರ್ಸ್ ಹಾಗೂ ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರತಿಕ್ರಿಯಿಸಿದ್ದಾರೆ.
ಉತ್ತರ ಕನ್ನಡ ವರದಿ:
ದಿನಕ್ಕೆ 100 ಜನರಿಗೆ ಮಾತ್ರ ಲಸಿಕೆ ನೀಡಲು ಅವಕಾಶವಿದೆ. ಲಸಿಕೆ ನೀಡಿದ ಬಳಿಕ ಯಾವುದಾದರೂ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾದಲ್ಲಿ ತುರ್ತು ಚಿಕಿತ್ಸೆಗೆ ಪೂರಕ ಔಷಧಿಗಳಿವೆ. ಅಂಬ್ಯುಲೆನ್ಸ್ ಕೂಡ ಸಿದ್ಧವಿಡಲಿದ್ದೇವೆ. ಮೂರನೇ ಹಂತದಲ್ಲಿ ಆನ್ಲೈನ್ ನೋಂದಣಿ, ಬಳಿಕ ದಿನಾಂಕ ನಿಗದಿ ಮಾಡಿ ಕರೆಯಲಾಗುತ್ತದೆ. ಲಸಿಕೆ ಪಡೆಯಲು ಒತ್ತಾಯವಿಲ್ಲ. ಸ್ವಯಂಪ್ರೇರಿತವಾಗಿ ಬರಬೇಕು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹೇಳಿದರು. ಲಸಿಕೆ ನೀಡುವ ಮೊದಲು ಆರೋಗ್ಯ ಪರೀಕ್ಷಿಸಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗೆ ಸೂಚನೆ ನೀಡಿದರು.
ಕಾರವಾರದ ಜಿಲ್ಲಾ ಆಸ್ಪತ್ರೆ, ಬೈತಖೋಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರಸಿ ಟಿಎಸ್ಎಸ್ ಆಸ್ಪತ್ರೆ, ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರ, ಹೊನ್ನಾವರ ತಾಲೂಕು ಆಸ್ಪತ್ರೆ, ದಾಂಡೇಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ತಾಲೀಮು ನಡೆಯುತ್ತಿದೆ. ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ನಡೆದ ಕೋವಿಡ್ ಲಸಿಕೆ ಡ್ರೈ ರನ್ ಅನ್ನು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹಾಗೂ ಇತರರು ಚಾಲನೆ ನೀಡಿದರು.
ಚಿಕ್ಕಮಗಳೂರು ವರದಿ:
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಡ್ರೈರನ್ಗೆ ಅಪರ ಜಿಲ್ಲಾಧಿಕಾರಿ ಡಾ.ಕೆ.ಕುಮಾರ್ ಚಾಲನೆ ನೀಡಿದರು. ಆರೋಗ್ಯ ಇಲಾಖೆ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಕೊರೊನಾ ಡ್ರೈ ರನ್ ಪ್ರಾರಂಭಿಸಲಾಯಿತು.
ಚಿಕ್ಕಮಗಳೂರಿನಲ್ಲಿ ಆರು ಕಡೆ ಕೊರೊನಾ ಲಸಿಕೆ ಡ್ರೈರನ್ ನೀಡಲಾಗುತ್ತಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಪ್ರಾಯೋಗಿಕ ಕೋವಿಡ್ ಲಸಿಕೆ ಡ್ರೈರನ್ ಮಾಡಲಾಗುತ್ತದೆ. ಒಂದೊಂದು ಆರೋಗ್ಯ ಕೇಂದ್ರದಲ್ಲಿ 25 ಜನರಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಾಲಗುತ್ತಿದೆ.
ಮೈಸುರು ವರದಿ:
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಬೆಳಗ್ಗೆ 11:45 ಗಂಟೆಗೆ ಬೆಂಗಳೂರಿಂದ ಹೊರಟು, ಮಧ್ಯಾಹ್ನ 2:15ರ ಸುಮಾರಿಗೆ ಮೇಟಗಳ್ಳಿಯಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಕೋವಿಡ್-19 ವ್ಯಾಕ್ಸಿನೇಷನ್ ವಿತರಣೆಯ ಡ್ರೈರನ್ ಕಾರ್ಯಕ್ರಮ ವೀಕ್ಷಣೆ ಮಾಡುವರು.