ಮಹದಾಯಿ ಐತಿಹಾಸಿಕ ತೀರ್ಪಿನ ಬಗ್ಗೆ ಯಾರು ಏನು ಹೇಳಿದರು?
ಬೆಂಗಳೂರು, ಆಗಸ್ಟ್ 14: ಮಹದಾಯಿ ವಿವಾದ ನ್ಯಾಯಾಧಿಕರಣವು ಮಹದಾಯಿ ನೀರು ಹಂಚಿಕೆಯ ಕುರಿತು ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿರುವ ಅಂಶಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಪ್ರತಿಕ್ರಿಯಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ನಾನು ಈಗಾಗಲೇ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಾಗೂ ಕಾನೂನು ತಜ್ಞರೊಂದಿಗೆ ಈ ವಿಷಯ ಚರ್ಚಿಸಿದ್ದು, ನ್ಯಾಯಾಧಿಕರಣದ ತೀರ್ಪು 12 ಸಂಪುಟಗಳಷ್ಟಿದ್ದು, ಅದನ್ನು ಕೂಲಂಕಷವಾಗಿ ಅಧ್ಯಯನ ನಡೆಸಿದ ನಂತರ ಎಲ್ಲರೊಂದಿಗೆ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
'ಮಹದಾಯಿ ತೀರ್ಪು ಸ್ವಲ್ಪ ಸಮಾಧಾನ, ಸ್ವಲ್ಪ ಬೇಸರ ತಂದಿದೆ'
ಮಹದಾಯಿ ಕುರಿತು ಇಂದು ತೀರ್ಪು ಪ್ರಕಟವಾಗಿದ್ದು ರಾಜ್ಯವು 37 ಟಿಎಂಸಿ ಅಡಿ ನೀರಿಗೆ ಬೇಡಿಕೆ ಇಟ್ಟಿತ್ತು ಆದರೆ 13.5 ಟಿಎಂಸಿ ಅಡಿ ನೀರು ಮಾತ್ರವೇ ರಾಜ್ಯಕ್ಕೆ ಧಕ್ಕಿದೆ. ತೀರ್ಪಿನ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಹಲವು ರಾಜಕೀಯ ನಾಯಕರು ತೀರ್ಪಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಹೇಳಿದ್ದು ಹೀಗೆ
ನ್ಯಾಯಾಧಿಕರಣದ ತೀರ್ಪನ್ನು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅವರು ಸ್ವಾಗತಿಸಿದ್ದು, ಇದು ಮಹದಾಯಿ ಹೋರಾಟಗಾರರಿಗೆ ಸಿಕ್ಕ ಜಯ ಎಂದು ಹೇಳಿದ್ದಾರೆ ಈ ಹಿಂದೆ ಚುನಾವಣೆ ಸಮಯದಲ್ಲಿ ಮಹದಾಯಿ ವಿವಾದವನ್ನು ಇತ್ಯರ್ಥ ಮಾಡುವುದಾಗಿ ಯಡಿಯೂರಪ್ಪ ಅವರು ಮಾಡಿದ್ದ ಪ್ರಯತ್ನ ಭಾರಿ ಸುದ್ದಿಯಾಗಿತ್ತು.
ಸಚಿವ ರೇವಣ್ಣ ಅಸಮಾಧಾನ
ನ್ಯಾಯಾಧಿಕರಣದ ತೀರ್ಪು ಅನ್ಯಾಯಯುತವಾದುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ. ಕೇಳಿದಷ್ಟು ನೀರು ನಮಗೆ ದೊರೆತಿಲ್ಲ. ಕೂಡಲೇ ಈ ಬಗ್ಗೆ ಪ್ರಧಾನಿ ಮಧ್ಯ ಪ್ರವೇಶ ಮಾಡಬೇಕು, ರಾಜ್ಯದ ಬಿಜೆಪಿ ಸಂಸದರು ಈ ಕುರಿತು ಒತ್ತಡ ಹೇರಬೇಕು ಎಂದಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳು ಕೂಡಲೇ ಸರ್ವ ಪಕ್ಷ ಸಭೆ ಕರೆದು ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಮಹದಾಯಿ ತೀರ್ಪು ಪ್ರಕಟ: ಉ.ಕರ್ನಾಟಕ ಹೋರಾಟಗಾರರಿಗೆ ಸಂದ ಜಯ
ಇದು ಹೋರಾಟಗಾರರ ಜಯ: ದಿನೇಶ್
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಬಿಜೆಪಿಯು ಮಹದಾಯಿ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ನೋಡಿತ್ತು. ಹಲವು ಬಾರಿ ಪ್ರಧಾನಿ ಅವರಿಗೆ ಮಧ್ಯಸ್ಥಿಕೆ ವಹಿಸುವಂತೆ ಕೇಳಿದ್ದರೂ ಅವರು ಬರಲಿಲ್ಲ ಆದರೆ ಇಂದು ನ್ಯಾಯ ವ್ಯವಸ್ಥೆ ನಮಗೆ ನಮ್ಮ ಹಕ್ಕು ಕೊಡಿಸಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಇದು ಮಹದಾಯಿ ಹೋರಾಟಗಾರರಿಗೆ ದೊರೆತ ಜಯ ಎಂದು ಅವರು ಹೇಳಿದರು.
ಎಚ್.ಕೆ.ಪಾಟೀಲ್ ಅಸಮಾಧಾನ
ಮಾಜಿ ನೀರಾವರಿ ಸಚಿವರೂ ಆಗಿರುವ ಉತ್ತರ ಕರ್ನಾಟಕ ಭಾಗದ ಪ್ರಭಾವಿ ರಾಜಕಾರಣಿ ಎಚ್.ಕೆ.ಪಾಟೀಲ್ ಅವರು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹದಾಯಿ ಜಲಾನಯನ ಪ್ರದೇಶದಲ್ಲಿ 188 ಟಿಎಂಸಿ ನೀರಿದ್ದರೂ ಸಹ ಕರ್ನಾಟಕಕ್ಕೆ ಅದು ಕೇಳಿದಷ್ಟು ನೀರು ನೀಡದೇ ಇರುವುದು ಸರಿಯಾದ ಕ್ರಮವಲ್ಲ. ನೀರು ಅನುಪಯುಕ್ತವಾಗಿ ಸಮುದ್ರ ಸೇರಲು ಒಪ್ಪಿಗೆ ನೀಡುವಂತಿದೆ ಈ ತೀರ್ಪು ಎಂದು ಅವರು ಟೀಕಿಸಿದ್ದಾರೆ.
ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ
ಹೋರಾಟಗಾರ ವೀರೇಶ ಸೊರಬದ ಮಠ ಹೇಳಿದ್ದು ಹೀಗೆ
ಮಹದಾಯಿ ಹೋರಾಟಗಾರ ವೀರೇಶ ಸೊರಬದ ಮಠ ಅವರು, ತೀರ್ಪನ್ನು ಸ್ವಾಗತಿಸಿದ್ದಾರಾದರೂ ಹೆಚ್ಚಿನ ಕಾನೂನು ಅಗತ್ಯವಿದೆ ಎಂದಿದ್ದಾರೆ. ಮಹದಾಯಿ ನೀರನ್ನು ಮಲಪ್ರಭಾ ಅಣೆಕಟ್ಟೆಗೆ ಹರಿಸಬೇಕು ಎಂದು 1976 ರಿಂದ ಹೋರಾಟ ನಡೆಯುತ್ತಿತ್ತು. ಅದಕ್ಕೆ ಇಂದಿನ ತೀರ್ಪಿನಲ್ಲಿ ಜಯ ದೊರೆತಿದೆ ಎಂದಿರುವ ಅವರು, ರಾಜ್ಯ ಕೇಳಿದಷ್ಟು ನೀರು ನಮಗೆ ಲಭ್ಯವಾಗಿಲ್ಲ ಹಾಗಾಗಿ ಸರ್ಕಾರ ಮುಂದಿನ ಕಾನೂನು ಹೋರಾಟ ಮಾಡಬೇಕು ಎಂದು ಅವರು ಹೇಳಿದರು.