ನಾಡಿನ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿದ ರಾಜಕೀಯ ನಾಯಕರು!
ಬೆಂಗಳೂರು, ಸೆ. 10: ಹೊಸ ಭರವಸೆಯೊಂದಿಗೆ ನಾಡಿನಾದ್ಯಂತ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ವಿಘ್ನವಿನಾಶಕ ಗಣೇಶ ಹಬ್ಬದ ಬಳಿಕ ಕೊರೊನಾ ವೈರಸ್ನಿಂದ ಮುಕ್ತ ಸಿಗಲಿದೆ ಎಂಬ ನಂಬಿಕೆಯನ್ನು ಗಣಪತಿ ಭಕ್ತರು ಹೊಂದಿದ್ದಾರೆ. ಗಣೇಶ ಚತುರ್ಥಿ ಆಚರಣೆಗೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗೆ ಪರ-ವಿರೋಧವೂ ವ್ಯಕ್ತವಾಗಿದೆ.
ಮನೆಯಲ್ಲಿ ಗಣಪತಿ ಕೂಡಿಸಲು ಹಾಗೂ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗೆ ವಿರೋಧ ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರ್ಗಸೂಚಿ ಅನುಸರಿಸಿ ಕೊರೊನಾ ವೈರಸ್ ನಿಯಂತ್ರಿಸಲು ಜನರಲ್ಲಿ ಮನವಿ ಮಾಡಿಕೊಂಡಿದೆ.
ಇದೇ ವೇಳೆ ಗಣೇಶ ಹಬ್ಬಕ್ಕೆ ರಾಜ್ಯದ ರಾಜಕೀಯ ನಾಯಕರು ಶುಭಾಶಯ ಹೇಳಿದ್ದಾರೆ. ರಾಜಕೀಯ ನಾಯಕರು ಜನರಲ್ಲಿ ತಿಳಿವಳಿಕೆ ಮೂಡಿಸುವುದರ ಜೊತೆಗೆ ಶುಭಕೋರಿರುವುದು ಮುಂದಿದೆ.
ಗಣೇಶ ಜನರಿಗೆ ಸುಖ ಶಾಂತಿ ಸಮೃದ್ಧಿ ತರಲಿ: ಬೊಮ್ಮಾಯಿ!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿನ ಸಮಸ್ತ ಜನತೆಗೆ ಗೌರಿ, ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ವಿಘ್ನ ನಿವಾರಕ ಗಣೇಶನು ನಾಡಿಗೆ ಎದುರಾಗಿರುವ ಕಂಟಕ ಕಳೆದು, ಸುಖ ಶಾಂತಿ ಸಮೃದ್ಧಿ ನೆಲೆಸುವಂತೆ ಮಾಡಲಿ. ಗಣೇಶ ಚತುರ್ಥಿ ನಾಡಿನ ಜನತೆಗೆ ಶಾಂತಿ, ಸೌಹಾರ್ದತೆ, ಸಹಬಾಳ್ವೆಯನ್ನು ತರಲಿ ಎಂದು ಹಾರೈಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಕೊರೊನಾ ವೈರಸ್ ವಿರುದ್ಧದ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಹೊರಡಿಸಿರುವ ಮಾರ್ಗ ಸೂಚಿಗಳನ್ನು ಪಾಲಿಸಿ, ಸುರಕ್ಷಿತ, ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.
ವಿಘ್ನೇಶ್ವರ ಎಲ್ಲರ ವಿಘ್ನಗಳನ್ನು ನಿವಾರಿಸಿ ಕರುಣೆ ತೋರಲಿ: ಎಚ್ಡಿಕೆ
ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು. ಆ ತಾಯಿ ಗೌರಿ ಸರ್ವರಿಗೂ ಸನ್ಮಂಗಳ ಉಂಟು ಮಾಡಲಿ. ಶ್ರೀ ವಿಘ್ನೇಶ್ವರನು ಎಲ್ಲರ ವಿಘ್ನಗಳನ್ನು ನಿವಾರಿಸಿ ಕರುಣೆ ತೋರಲಿ ಎಂದು ನಾಡಿನ ಜನರಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಗಣೇಶ ಚತುರ್ಥಿ ಶುಭಾಶಯಗಳನ್ನು ಕೋರಿದ್ದಾರೆ.
ಹಬ್ಬವನ್ನು ನಮ್ಮ ಮನೆ-ಮನಗಳಲ್ಲಿ ಸಂಭ್ರಮದಿಂದ, ಶ್ರದ್ಧೆ-ಭಕ್ತಿಯಿಂದ ಆಚರಿಸೋಣ. ಕೊರೊನಾ ಅಪಾಯ ಮರೆಯದಿರೋಣ. ಆದಷ್ಟು ಬೇಗ ಮಹಾಮಾರಿ ವೈರಸ್ ತೊಲಗಲಿ ಎಂದು ಪ್ರಾರ್ಥಿಸೋಣ. ಎಲ್ಲೂ ಮೈಮರೆಯುವುದು ಬೇಡ, ಇನ್ನೊಬ್ಬರಿಗೆ ತೊಂದರೆ ಆಗುವುದೂ ಬೇಡ. ರಾಜ್ಯ ಸರಕಾರ ಜಾರಿ ಮಾಡಿರುವ ಕೊರೊನಾ ವೈರಸ್ ನಿಯಮಗಳನ್ನು ಪಾಲಿಸುತ್ತಲೇ ವಿನಾಯಕನನ್ನು ಪೂಜಿಸೋಣ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆ ಗೌರಿಪುತ್ರನಲ್ಲಿ ಪ್ರಾರ್ಥನೆ ಮಾಡುವೆ ಎಂದು ಜನರಲ್ಲಿ ಎಚ್ಡಿಕೆ ಮನವಿ ಮಾಡಿದ್ದಾರೆ.
ಇಡೀ ವಿಶ್ವವೇ ಶೀಘ್ರವೇ ಕೊರೊನಾ ಮುಕ್ತವಾಗಲಿ: ಕಟೀಲ್
ಗೌರಿ ಗಣೇಶ ಹಬ್ಬ ಹಾಗೂ ಗಣೇಶ ಚತುರ್ಥಿ ಶುಭಾಶಯ ಕೋರಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು
ಕೋವಿಡ್ಮುಕ್ತ ವಿಶ್ವಕ್ಕಾಗಿ ಪ್ರಾರ್ಥಿಸಲು ಮನವಿ ಮಾಡಿದ್ದಾರೆ.ಕನ್ನಡ ನಾಡು, ಭಾರತ ಹಾಗೂ ವಿಶ್ವವು ಶೀಘ್ರವೇ ಕೋವಿಡ್ಮುಕ್ತವಾಗಲಿ. ವಿಘ್ನ ವಿನಾಯಕನು ನಮ್ಮೆಲ್ಲರಿಗೂ ಅಭ್ಯುದಯ-ಸಮೃದ್ಧತೆಯನ್ನು ತಂದು ಕೊಡುವಂತಾಗಲಿ ಎಂದು ವಿಘ್ನನಿವಾರಕನಲ್ಲಿ ಪ್ರಾರ್ಥಿಸಿದ್ದಾರೆ.
ನಾಡಿನ ಜನತೆ ಕೋವಿಡ್ ನಿಯಮಾವಳಿ ಅನುಸರಿಸಿ ಹಬ್ಬವನ್ನು ಆಚರಿಸಬೇಕು. ಶಾಂತಿಯುತವಾಗಿ ಗೌರಿ ಗಣೇಶ ಹಬ್ಬ ಮತ್ತು ಗಣೇಶ ಚತುರ್ಥಿ ಆಚರಿಸುವ ಮೂಲಕ ಕೋವಿಡ್ ಮುಕ್ತ ವಿಶ್ವಕ್ಕಾಗಿ ಪ್ರಾರ್ಥಿಸಬೇಕು ಎಂದು ನಳಿನ್ಕುಮಾರ್ ಕಟೀಲ್ ಅವರು ಮನವಿ ಮಾಡಿದ್ದಾರೆ.
ಸುಖ ಶಾಂತಿ ಸಮೃದ್ಧಿ ನೆಲೆಸುವಂತೆ ಅನುಗ್ರಹಿಸಲಿ: ಆರ್. ಅಶೋಕ್
ಕಂದಾಯ ಸಚಿವ ಆರ್. ಅಶೋಕ್ ಅವರು ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಕೊರೊನಾ ವೈರಸ್ ಸೋಂಕಿನ ನಡುವೆಯೂ ಅತೀ ಎಚ್ಚರಿಕೆಯಿಂದ ಸರಳವಾಗಿ, ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸೋಣ. ವಿಘ್ನ ವಿನಾಯಕ, ಸಿದ್ಧಿ ಪ್ರದಾಯಕ ಗಣೇಶ ಎಲ್ಲ ಕಷ್ಟಗಳನ್ನು ಕಳೆದು ರಾಜ್ಯದಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸುವಂತೆ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಹಬ್ಬದ ಉತ್ಸಾಹದ ಭರದಲ್ಲಿ ಜನತೆ ಕೋವಿಡ್ ಮುನ್ನೆಚ್ಚರಿಕೆಯನ್ನು ಮರೆಯದಿರಲಿ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸುರಕ್ಷಿತ ಆಚರಣೆ ಮಾಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಮನವಿ ಮಾಡಿದ್ದಾರೆ.
ಸುಖ, ಸಂತೋಷ, ಆರೋಗ್ಯ ಭಾಗ್ಯ ಕೊಟ್ಟು ಸದಾ ರಕ್ಷಿಸಲಿ: ಬಿಎಸ್ವೈ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಡಿನ ಜನತೆಗೆ ವಿಶೇಷವಾಗಿ ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ನಾಡಿನ ಎಲ್ಲ ಭಕ್ತಜನರಿಗೆ ವಿನಾಯಕ ಚತುರ್ಥಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು ಎಂದು ತಮ್ಮ ಶುಭಾಶಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ವಿಘ್ನನಿವಾರಕನಾದ ವಿಘ್ನೇಶ್ವರ ನಾಡಿನ ಪ್ರಗತಿಗೆ ಎದುರಾಗುವ ಎಲ್ಲ ವಿಘ್ನಗಳನ್ನು ದೂರ ಮಾಡಲಿ, ಸಮಸ್ತ ಜನತೆಗೆ ಸುಖ, ಸಂತೋಷ, ಆರೋಗ್ಯ ಭಾಗ್ಯಗಳನ್ನು ಕೊಟ್ಟು ಸದಾ ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ ಅಂತಾ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಡಿನ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
Recommended Video