ಕಸ್ತೂರಿ ರಂಗನ್ ವರದಿ: ಜನಾಭಿಪ್ರಾಯಕ್ಕೇ ಮನ್ನಣೆ
ಕಾರವಾರ, ಜ. 27: ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಡಾ. ಕಸ್ತೂರಿ ರಂಗನ್ ವರದಿಯ ಶಿಫಾರಸ್ಸುಗಳ ಜಾರಿ ಕುರಿತು ಜನರ ಅಭಿಪ್ರಾಯ ಪಡೆದ ನಂತರವೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲಿನ ನಿವಾಸಿಗಳು ಭಯಪಡುವ ಅಗತ್ಯವಿಲ್ಲ ಎಂದು ಶಿಫಾರಸುಗಳ ಪರಿಶೀಲನೆಗಾಗಿ ಸರ್ಕಾರ ರಚಿಸಿರುವ ಸಚಿವ ಸಂಪುಟ ಉಪಸಮಿತಿಯ ಸದಸ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಭರವಸೆ ನೀಡಿದ್ದಾರೆ.
ಅವರು ಕಸ್ತೂರಿ ರಂಗನ್ ಸಮಿತಿ ಶಿಫಾರಸುಗಳ ಜಾರಿ ಕುರಿತು ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಜನಸಾಮಾನ್ಯರ ಅಭಿಪ್ರಾಯಗಳನ್ನು ಆಲಿಸಿದರು.
ಕಸ್ತೂರಿ ರಂಗನ್ ವರದಿ ಕುರಿತು ಭಯ ಅನಗತ್ಯ. ಪಶ್ಚಿಮಘಟ್ಟಗಳ ಅರಣ್ಯ ಸಂರಕ್ಷಣೆಯಲ್ಲಿ ನಿವಾಸಿಗಳ ಪಾಲು ದೊಡ್ಡದು. ಪರಿಸರ ಸಂರಕ್ಷಣೆ ಹಾಗೂ ಜನರ ಬದುಕಿಗೆ ಒಟ್ಟಿಗೆ ಅವಕಾಶ ಮಾಡಿಕೊಡಬೇಕಾಗಿದೆ ಎಂದು ಹೇಳಿದರು. [ಕೈಗಾದಲ್ಲಿ ಇನ್ನೆರಡು ಘಟಕ]
ಉಪಗ್ರಹದಿಂದ ಸಮೀಕ್ಷೆ : ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಉಪಗ್ರಹಗಳ ನೆರವಿನಿಂದ ಸಿದ್ಧಪಡಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಸಮೀಕ್ಷೆ ನಡೆಸಿಲ್ಲ. ತಳಮಟ್ಟದಿಂದ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದರು. [ಅಣು ಮಾಹಿತಿ ಸೋರಿಕೆಯಾಗಿಲ್ಲ]
ಶೇ. 2೦ರಷ್ಟು ಅರಣ್ಯಭೂಮಿ ಇರುವ ಪ್ರದೇಶವನ್ನು ವರದಿಯಲ್ಲಿ ಅತಿಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಇದನ್ನು ಶೇ. 5೦ಕ್ಕಿಂತ ಹೆಚ್ಚಿನ ಅರಣ್ಯ ಭೂಮಿ ಎಂದು ಮರು ನಿಗದಿಪಡಿಸುವಂತೆ ರಾಜ್ಯ ಸರ್ಕಾರ ವರದಿಯಲ್ಲಿ ಶಿಫಾರಸು ಮಾಡಬೇಕು. ಶತಮಾನಗಳಿಂದ ವಾಸಿಸುತ್ತಿರುವ ಜನರ ಪಾರಂಪರಿಕ ಬದುಕಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಶಾಸಕರಾದ ಸತೀಶ್ ಸೈಲ್, ಶಿವರಾಮ ಹೆಬ್ಬಾರ್ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಗೌಡ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಈಗಾಗಲೇ ಹಲವು ಯೋಜನೆಗಳಿಗೆ ತಮ್ಮ ಅಮೂಲ್ಯ ಭೂಮಿ ತ್ಯಾಗ ಮಾಡಿದೆ. ಈಗ ಪಶ್ಚಿಮ ಘಟ್ಟಗಳ ಸಂರಕ್ಷಣೆ ಹೆಸರಿನಲ್ಲಿ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಿದರೆ ಜನರ ಬದುಕು ಇನ್ನಷ್ಟು ದುಸ್ತರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. [ಆಲಮಟ್ಟಿಯಿಂದ ಕಾರವಾರಕ್ಕೆ ದೋಣಿ ಪ್ರಯಾಣ]
ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ಮಾಧವ ನಾಯಕ್, ಸದಾನಂದ ಭಟ್, ಯಮುನಾ ಗಾಂವ್ಕರ್, ಗಣಪತಿ ಮಾಂಗ್ರೆ, ಡಿ.ಪಿ. ಭಟ್ ಸೇರಿದಂತೆ ಹಲವರು ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ನಿರೂಪಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಿ ಹಣಬರ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮಪ್ರಸಾದ್ ಮನೋಹರ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ದೀಪಾ ಪೆಡ್ನೇಕರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿನಯ ಲೂತ್ರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಂತಕುಮಾರ್, ಡಿಸಿಎಫ್ ಹೀರಾಲಾಲ್ ಇತರರು ಇದ್ದರು.