ರಾಜ್ಯದಲ್ಲಿ ಕರೋನಾ ವೈರಸ್ ಭೀತಿ: ರಸ್ತೆಗೆ ಇಳಿದ 15 LED ವಾಹನಗಳು
ಬೆಂಗಳೂರು, ಜ. 05: ಕರೋನಾ ವೈರಸ್ ಭೀತಿ ನಿಧಾನವಾಗಿ ರಾಜ್ಯಕ್ಕೂ ಹರಡುತ್ತಿದ್ದಂತೆಯೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಬಂದರು, ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮುಂದುವರೆಸಿರಿಸುವ ರಾಜ್ಯ ಸರ್ಕಾರ, ಇದೀಗ ಗ್ರಾಮೀಣ ಪ್ರದೇಶದಲ್ಲಿಯೂ ಕರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ. ಜಾಗೃತಿ ಮೂಡಿಸಲು ಇಂದಿನಿಂದಲೇ ಎಲ್ಇಡಿ ವಾಹನಗಳು ರಸ್ತೆಗೆ ಇಳಿದಿವೆ.
ರಾಜ್ಯದ ಅಲ್ಲಲ್ಲಿ ಕರೋನಾ ವೈರಸ್ ಭೀತಿ ಹರಡುತ್ತಿದ್ದಂತೆಯೆ ಆರೋಗ್ಯ ಇಲಾಖೆ ಜನರಲ್ಲಿನ ಭೀತಿ ಹೋಗಲಾಡಿಸಲು ಮುಂದಾಗಿದೆ. ಗ್ರಾಮೀಣ ಭಾಗದಲ್ಲಿಯೂ ಭೀತಿ ಹರಡದಂತೆ, ಜಾಗೃತಿ ಮೂಡಿಸಲು ಎಲ್ಇಡಿ ವಾಹನಗಳ ಬಳಕೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಕರೋನಾ ವೈರಸ್ ಕುರಿತು ಜಾಗೃತಿ ಹಾಗೂ ಜನರಲ್ಲಿನ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಬೆಂಗಳೂರು ಹೊರವಲಯದ ಚಿಕ್ಕಜಾಲದಲ್ಲಿ ಎಲ್ಇಡಿ ಜಾಗೃತಿ ವಾಹಗನಳಿಗೆ ಹಸಿರು ನಿಶಾನೆ ತೀರಿಸಿದ್ದಾರೆ.
ಕರೋನಾ ವೈರಸ್ ಭೀತಿ ಹೋಗಲಾಡಿಸಲು ಎಲ್ಎಇಡಿ ವಾಹನ
ಕರೋನಾ ವೈರಸ್ ಚೀನಾದಿಂದ ಹೊರಗೆ ಹರಡುತ್ತಿದ್ದಂತೆಯೆ ರಾಜ್ಯದ ಜನರಲ್ಲಿಯೂ ಭೀತಿ ಉಂಟಾಗಿದೆ. ಆದರಿಂದ ಜನರಲ್ಲಿನ ಭೀತಿ ಹೋಗಲಾಡಿಸಲು ಹಾಗೂ ಕರೋನಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ತಿಳಿವಳಿಕೆ ನೀಡಲು ಎಲ್ಇಡಿ ವಾಹನಗಳನ್ನು ರಾಜ್ಯ ಆರೋಗ್ಯ ಇಲಾಖೆ ರಸ್ತೆಗೆ ಇಳಿಸಿವೆ. ಒಟ್ಟು 15 ವಾಹನಗಳು ಕೊರೋನಾ ವೈರಸ್ ಬಗ್ಗೆ ತಿಳಿವಳಿಕೆ ಮೂಡಿಸಲಿವೆ. ಪ್ರತಿ ಎರಡು ಜಿಲ್ಲೆಗಳಲ್ಲಿ ಒಂದು ಎಲ್ಇಡಿ ವಾಹನ ಸಂಚಾರ ಮಾಡಲಿದೆ. ಪ್ರತಿದಿನ ಕನಿಷ್ಠ 4 ಗ್ರಾಮಗಳಿಗೆ ತೆರಳಿ ವೈರಸ್ ಬಗ್ಗೆ ತಿಳಿವಳಿಕೆ ಮೂಡಿಸಲಿದ್ದೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಹುಬ್ಬಳ್ಳಿ, ತುಮಕೂರುಗಳಲ್ಲಿ ಸ್ಯಾಂಪಲ್ ಸಂಗ್ರಹದ ಬಳಿಕ ಭೀತಿ
ಹುಬ್ಬಳ್ಳಿ ಹಾಗೂ ತುಮಕೂರುಗಳಲ್ಲಿ ಚೀನಾದಿಂದ ಹಿಂದಿರುಗಿದ ವ್ಯಕ್ತಿಗಳಿಗೆ ಕರೋನಾ ವೈರಸ್ ತಗಲಿರುವ ಶಂಕೆ ಹಿನ್ನೆಲೆಯಲ್ಲಿ ರಕ್ತದ ಮಾದರಿಯನ್ನು ಪುಣೆ ಲ್ಯಾಬ್ಗೆ ಕಳಿಸಿಕೊಡಲಾಗಿದೆ. ನೆರೆಯ ಕೇರಳ ರಾಜ್ಯದಲ್ಲಿ ಕರೋನಾ ಭೀತಿ ಹೆಚ್ಚಾಗಿದೆ. ಕೇರಳದಲ್ಲಿ ಚೀನಾದಿಂದ ಬಂದಿರುವ 2421 ಜನರ ಮೇಲೆ ನಿಗಾ ಇಡಲಾಗಿದ್ದು, ಚೀನಾದಿಂದ ಬಂದಿರುವವರು ಮುಂದಿನ 28 ದಿನಗಳ ಕಾಲ ಮನೆಯಿಮದ ಹೊರಗೆ ತೆರಳದಂತೆ ಸೂಚನೆ ಕೊಡಲಾಗಿದೆ ಎಂದು ಕೇರಳ ಆರೋಗ್ಯ ಕೆ.ಕೆ. ಶೈಲಜಾ ಮಾಹಿತಿ ಕೊಟ್ಟಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲೀಯೂ ಜಾಗೃತಿಗೆ ಸರ್ಕಾರ ಕ್ರಮಕೈಗೊಂಡಿದೆ.
ಸೋಂಕುನ ತಡೆಯಲು ಸರ್ಕಾರ ಸಿದ್ಧ
ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗ ಆಸ್ಪತ್ರೆಯಲ್ಲಿ 15 ಹಾಸಿಗೆ ಮತ್ತು ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಸುಸಜ್ಜಿತವಾದ ಐಸೋಲೇಶನ್ ವಾರ್ಡ್ ಗಳನ್ನು ಈಗಾಗಲೇ ತೆರೆಯಲಾಗಿದೆ. ಉಳಿದಂತೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ 5 ಬೆಡ್ ಗಳ ಪ್ರತ್ಯೇಕ ವಾರ್ಡ್ ತೆರೆಯಲು ರಾಜ್ಯ ಆರೋಗ್ಯ ಇಲಾಖೆ ಕ್ರಮಕೈಗೊಂಡಿದೆ.
ಭಯಬೇಡ ಎಂದ ಆರೋಗ್ಯ ಸಚಿವ ಶ್ರೀರಾಮಲು
ಕರೋನಾ ವೈರಸ್ ಎದುರಿಸಲು ರಾಜ್ಯ ಆರೋಗ್ಯ ಇಲಾಖೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜ್ಯದಲ್ಲಿ ವೃಸ್ ಹರಡದಂತೆ ಎಲ್ಲ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಚಿಕ್ಕಜಾಲದಲ್ಲಿ ಹೇಳಿದ್ದಾರೆ. ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.