'ಆರೋಗ್ಯ ಕರ್ನಾಟಕ' ಯೋಜನೆಯ ಅನುಷ್ಠಾನ ಸರಳೀಕರಣ
ಬೆಂಗಳೂರು, ಜೂನ್ 6: ರಾಜ್ಯ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆಯ ಅನುಷ್ಠಾನನ ಮಾರ್ಗಸೂಚಿಗಳನ್ನು ರೋಗಿಗಳ ಮತ್ತು ಆಸ್ಪತ್ರೆಗಳ ಅನುಕೂಲಕ್ಕಾಗಿ ಸರಳೀಕರಣಗೊಳಿಸಿ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆ ಕಾರ್ಡ್ ಹೊಂದಿರುವ ಸದಸ್ಯರು ಮುಂದಿನ ಆಗಸ್ಟ್ 31ರವರೆಗೆ ಸರ್ಕಾರಿ ಆಸ್ಪತ್ರೆಯಿಂದ ರೆಫರ್ ಆಗದೇ ದ್ವಿತೀಯ ಹಂತದ ಚಿಕಿತ್ಸೆಯನ್ನು ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ.
ಸುವಿಧ ಯೋಜನೆ: ಸ್ಯಾನಿಟರಿ ನ್ಯಾಪ್ಕಿನ್ಸ್ 2.50 ರೂಗೆ ಲಭ್ಯ!
ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನೋಂದಣಿಯಾಗದೇ ಇರುವ ಇತರೆ ರೋಗಿಗಳು ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನೀಡಿ ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸಾ ಸೇವೆಯನ್ನು ಸರ್ಕಾರದಿಂದ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ.
ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಿಂದ ರೆಫರ್ ಆದ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
ಖಾಸಗಿ ಆಸ್ಪತ್ರೆಗಳಿಗೂ ಕೆಲ ಬದಲಾವಣೆ ಮಾಡಲಾಗಿದ್ದು, ವಾಜಪೇಯಿ ಆರೋಗ್ಯಶ್ರೀ, ಯಶಸ್ವಿನಿ ಮತ್ತು ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆಯಲ್ಲಿ ಸಮ್ಮತಿ ಪತ್ರ ನೀಡಿ ತಾತ್ಕಾಲಿಕ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಇತರೆ ಶಾಸನಬದ್ಧ ಅನುಮೋದನೆ ಪಡೆಯಲು 6 ತಿಂಗಳುಗಳ ಕಾಲಾವಕಾಶ ನೀಡಲಾಗಿದೆ.
ಎಂಪ್ಯಾನ್ಮೆಂಟ್ ದರವನ್ನು ವಿವೇಚನಾಶೀಲ ಮತ್ತು ಮಾಡರೇಟ್ ಮಾಡಲಾಗಿದೆ. ರಾಜ್ಯದಲ್ಲಿ ಪ್ರಸ್ತುತ 11 ಆಸ್ಪತ್ರೆಗಳ ಹೊರರೋಗಿ ವಿಭಾಗದಲ್ಲಿ 10 ರೂ.ಗಳನ್ನು ನೋಂದಣಿ ಶುಲ್ಕವಾಗಿ ಪಡೆದು ಆರೋಗ್ಯ ಕರ್ನಾಟಕ ಕಾರ್ಡ್ಗಳನ್ನು ನೀಡಲಾಗುತ್ತಿದೆ. ಈ 11 ಸರ್ಕಾರಿ ಆಸ್ಪತ್ರೆಗಳ ಹತ್ತಿರದಲ್ಲಿರುವ ಸಾರ್ವಜನಿಕರು ಚಾಲ್ತಿಯಲ್ಲಿರುವ ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.