ಈಗಲಾದರೂ ಸ್ವಂತ ನಿರ್ಧಾರ ತೆಗೆದುಕೊಳ್ಳಿ; ಸರ್ಕಾರಕ್ಕೆ ಎಚ್ಡಿಕೆ ಸಲಹೆ
ಬೆಂಗಳೂರು, ಮೇ 22: ರಾಜ್ಯದಲ್ಲಿ ಕೊರೊನಾ ನಡುವೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂಥ ಸಮಯದಲ್ಲಿ ರಾಜ್ಯ ಸರ್ಕಾರ ಶೀಘ್ರವೇ ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ಸೋಂಕಿನ ಚಿಕಿತ್ಸೆಗೆ ಬೇಕಿರುವ ಆಂಫೋಟೆರಿಸಿನ್ ಬಿ ಔಷಧಕ್ಕಾಗಿ ರಾಜ್ಯ ಕೇಂದ್ರದತ್ತ ನೊಡುತ್ತಿದೆ. ಮುಂದಿನ ದಿನಗಳಲ್ಲಿ ಔಷಧ ನೀಡುವುದಾಗಿ ಕೇಂದ್ರ ಹೇಳಿದೆ. ಆದರೆ ಇತರ ರಾಜ್ಯಗಳು ಈಗಾಗಲೇ ಖಾಸಗಿ ಸಂಸ್ಥೆಗಳಿಂದ ಖರೀದಿ ಪ್ರಕ್ರಿಯೆ ಆರಂಭಿಸಿವೆ. ಮಾರಕ ರೋಗದ ವಿಚಾರದಲ್ಲಿ ರಾಜ್ಯಕ್ಕೇಕೆ ಇಷ್ಟು ಆಲಸ್ಯ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಶನಿವಾರ ಈ ಕುರಿತು ಟ್ವೀಟ್ ಮಾಡಿರುವ ಅವರು, ಬ್ಲ್ಯಾಕ್ ಫಂಗಸ್ ತಡೆಗೆ ರಾಜ್ಯ ಸರ್ಕಾರ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ 'ರಾಕ್ಷಸ ಆಲಸ್ಯ'ದಲ್ಲಿರುವ ಹೊತ್ತಲ್ಲೇ ತೆಲಂಗಾಣ ಸರ್ಕಾರ ಆಂಫೋಟೆರಿಸಿನ್ ಬಿ ಔಷಧ ತಯಾರಕ ಸಂಸ್ಥೆಗಳಿಗೆ ಪತ್ರ ಬರೆದು ಔಷಧ ಪೂರೈಸಲು ಕೋರಿದೆ. ಇದರ ಮಾಹಿತಿ ನನಗಿದೆ. ಇದು ರೋಗದ ವಿರುದ್ಧ ಸರ್ಕಾರವೊಂದು ವರ್ತಿಸುವ ರೀತಿ ಮತ್ತು ಸರ್ಕಾರಕ್ಕೆ ಜನರ ಮೇಲಿರುವ ಕಾಳಜಿ. ಆದರೆ, ಕನ್ನಡಿಗರ ಮೇಲೆ ಬಿಜೆಪಿ ಸರ್ಕಾರಕ್ಕೆ ಏಕಿಲ್ಲ ಕಾಳಜಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...
ಬ್ಲ್ಯಾಕ್ ಫಂಗಸ್; ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಎಚ್ಡಿಕೆ
"ರಾಜ್ಯ ಔಷಧ ಹೊಂದಿಸಿದೆಯೇ?"
ಮುಂದಿನ ದಿನಗಳಲ್ಲಿ ಪ್ರತಿ ವಾರ 400 ಮಂದಿ ಕಪ್ಪು ಶಿಲೀಂಧ್ರ ರೋಗಕ್ಕೆ ಗುರಿಯಾಗುವುದಾಗಿ ತಜ್ಞರು ಹೇಳಿದ್ದಾರೆ. ಈ ಸಂಖ್ಯೆ ಹೆಚ್ಚಲೂಬಹುದು. ಇಲ್ಲಿ ಗಮನಿಸಬೇಕಾದ್ದೇನೆಂದರೆ, ಈ ಕಾಯಿಲೆಗೆ ಮೊದಲ 2 ದಿನಗಳಲ್ಲೇ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲವಾದರೆ, ಸಾವು ತರುವ ರೋಗವಾಗಿ ಇದು ಪರಿಣಮಿಸುತ್ತದೆ. ಆದರೆ, ರಾಜ್ಯ ಸರ್ಕಾರ ಇದಕ್ಕೆ ಔಷಧ ಹೊಂದಿಸಿದೆಯೇ? ಎಂದು ಪ್ರಶ್ನಿಸಿದ್ದಾರೆ.
|
"ರಾಜ್ಯ ಸರ್ಕಾರ ಈ ವಿಚಾರದಲ್ಲಾದರೂ ಸ್ವಂತ ನಿರ್ಧಾರ ಕೈಗೊಳ್ಳಲಿ"
ಈಗಾಗಲೇ ಆಮ್ಲಜನಕ, ಕೊರೊನಾ ಲಸಿಕೆಗಾಗಿ ಕೇಂದ್ರದತ್ತ ನೋಡಿದ ರಾಜ್ಯ 'ಇಲ್ಲ' ಎನಿಸಿಕೊಂಡಿದೆ. ಅದರ ಪರಿಣಾಮವನ್ನು ಜನರು ಅನುಭವಿಸುತ್ತಿದ್ದಾರೆ. ಈಗ ಕಪ್ಪು ಶಿಲೀಂಧ್ರದ ವಿಚಾರದಲ್ಲೂ ರಾಜ್ಯ ಸರ್ಕಾರ ಆಲಸ್ಯದಿಂದ ಕೇಂದ್ರದ ಕಡೆ ನೋಡುತ್ತಿದೆ. ಈಗಲೂ ಕೇಂದ್ರ ಇಲ್ಲ ಎಂದಿದೆ. ರಾಜ್ಯ ಸರ್ಕಾರ ಈ ವಿಚಾರದಲ್ಲಾದರೂ ಸ್ವತಂತ್ರ ನಿರ್ಧಾರ ಕೈಗೊಳ್ಳಲಿ. ಜನರ ಜೀವ ಉಳಿಸಲಿ ಎಂದು ಟ್ವೀಟ್ ಮಾಡಿದ್ದಾರೆ.
"ಎಲ್ಲಾ ವಿಷಯದಲ್ಲೂ ಕೇಂದ್ರದ ತಾರತಮ್ಯ ಮುಂದುವರೆದಿದೆ"
ಕೇಂದ್ರ ಸದಾ ತಾರತಮ್ಯ ಮಾಡುತ್ತದೆ. ರಾಜ್ಯದಲ್ಲಿ ಒಬ್ಬ ಕೋವಿಡ್ ರೋಗಿಗೆ ಲಭ್ಯವಿರುವ ಆಮ್ಲಜನಕ 1.90 ಲೀಟರ್. ಗುಜರಾತ್ನಲ್ಲಿ ಪ್ರತಿ ರೋಗಿಗೆ 10.95 ಲೀಟರ್ ಸಿಗುತ್ತಿದೆ. ಆದರೆ, ಅಲ್ಲಿಗಿಂತ ಹೆಚ್ಚು ಪ್ರಕರಣಗಳಿರುವುದು ನಮ್ಮಲ್ಲಿ. ಇದು ಕೇಂದ್ರದ ಆಕ್ಸಿಜನ್ ಮೋಸ. ಕಪ್ಪು ಶಿಲೀಂಧ್ರ ಔಷಧದಲ್ಲೂ ಇದು ಮುಂದುವರಿಯುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ದೂರಿದರು.
ಟೋಪಿವಾಲಾ ಸರ್ಕಾರ: 1250 ಕೋಟಿ ಲಾಕ್ಡೌನ್ ಪ್ಯಾಕೇಜ್ ಬಗ್ಗೆ ಕುಮಾರಸ್ವಾಮಿ ಟೀಕಾಪ್ರಹಾರ!
"ಕಪ್ಪು ಶಿಲೀಂಧ್ರ ಔಷಧಕ್ಕೆ ಪರ್ಯಾಯ ಮೂಲ ಹುಡುಕಿ"
ರಾಜ್ಯದ ಬಿಜೆಪಿ ಸರ್ಕಾರವು ಪ್ರತಿಯೊಂದಕ್ಕೂ ಕೇಂದ್ರದ ಕಡೆ ನೋಡದೇ, ತಾನೇ ನಿರ್ಧಾರಗಳನ್ನು ಕೈಗೊಳ್ಳಲಿ. ಔಷಧಕ್ಕಾಗಿ ಪರ್ಯಾಯ ಮೂಲಗಳನ್ನು ಹುಡಕಲಿ. ಕಪ್ಪು ಶಿಲೀಂಧ್ರದ ಔಷಧ ಎಲ್ಲೆಲ್ಲಿ ಲಭ್ಯವಿದೆ ಎಂದು ನಾನು ಈ ಹಿಂದೆಯೇ ಸರ್ಕಾರಕ್ಕೆ ತಿಳಿಸಿದ್ದೇನೆ. ಕೂಡಲೇ ಔಷಧ ತಯಾರಕ ಸಂಸ್ಥೆಗಳಿಗೆ ಪತ್ರ ಬರೆದು ಪೂರೈಕೆಗೆ ಸರ್ಕಾರ ಮನವಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Recommended Video