Exclusive ಕೋವಿಡ್-19: ದಿಗ್ಭ್ರಮೆ ಮೂಡಿಸುತ್ತಿದೆ ಕೇಂದ್ರಕ್ಕೆ ರಾಜ್ಯ ಕೊಟ್ಟ ಮಾಹಿತಿ!
ಬೆಂಗಳೂರು, ಏ. 05: ರಾಜ್ಯದಲ್ಲಿ ಕೊರೊನಾ ವೈರಸ್ಗೆ ಈಗಾಗಲೇ 4 ಜನರು ಬಲಿಯಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವೈರಸ್ ಹರಡದಂತೆ ತಡೆಯಲು 10 ದಿನಗಳ ಹಿಂದೆಯೆ ದೇಶದಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಸಮರೋಪಾದಿಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚನೆಯನ್ನು ಕೊಟ್ಟಿದೆ.
ಕೊರೊನಾ ವೈರಸ್ ಹಾವಳಿಗೆ ಭಾರತದಲ್ಲಿ ತಡೆ, ವೈಜ್ಞಾನಿಕ ಕಾರಣ ಇಲ್ಲಿದೆ!
ಆದರೆ ಕೊರೊನಾ ವೈರಸ್ ಎದುರಿಸಲು ರಾಜ್ಯ ಸರ್ಕಾರ ಮಾಡಿಕೊಂಡಿರುವ ಸಿದ್ಧತೆಗಳನ್ನು ನೋಡಿದರೆ ಶಸ್ತ್ರಾಸ್ತಗಳಿಲ್ಲದೆ ಕೊರೊನಾ ವೈರಸ್ ವಿರುದ್ಧ ರಾಜ್ಯ ಸರ್ಕಾರ ಯುದ್ಧಕ್ಕೆ ಮುಂದಾದಂತೆ ಕಾಣುತ್ತಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಕೊಟ್ಟಿರುವ ಮಾಹಿತಿ exclusive ಆಗಿ 'ಒನ್ ಇಂಡಿಯಾ'ಕ್ಕೆ ಲಭ್ಯವಾಗಿದ್ದು, ರಾಜ್ಯಸರ್ಕಾರವು ಶಸ್ತ್ರಾಸ್ತ್ರಗಳಿಲ್ಲದೆ ಕೊರೊನಾ ವೈರಸ್ ವಿರುದ್ಧ ಯುದ್ಧಕ್ಕೆ ಇಳಿದಂತಿದೆ. ಕೊರೊನಾ ವೈರಸ್ ಚಿಕಿತ್ಸೆಗೆ ಲಭ್ಯವಿರುವ ವೆಂಟಿಲೇಟರ್ಗಳ ಸಂಖ್ಯೆ 178 ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮಾಹಿತಿ ಕೊಟ್ಟಿದೆ.
ಮಾಹಿತಿ ಕೇಳಿದ್ದ ಕೇಂದ್ರ ಆರೋಗ್ಯ ಇಲಾಖೆ
ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡಲು ರಾಜ್ಯ ಸರ್ಕಾರ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ವರದಿ ಕೊಡುವಂತೆ ಮಾರ್ಚ್ 31 ರಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಕೇಳಿತ್ತು. ಇದಕ್ಕೆ ರಾಜ್ಯ ಆರೋಗ್ಯ ಇಲಾಖೆ ಕೊಟ್ಟಿರುವ ಮಾಹಿತಿ ದಿಗ್ಭ್ರಮೆಗೊಳಿಸುವಂತಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆಗೆಂದು ನಿಗದಿ ಮಾಡಿರುವ ಆಸ್ಪತ್ರೆಗಳ ಸಂಖ್ಯೆ ಕೇವಲ 8 ಮಾತ್ರ ಎಂದು ಮಾಹಿತಿ ಕೊಡಲಾಗಿದೆ.
8 ಜಿಲ್ಲೆಗಳ 9 ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಅವಕಾಶವಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಗಳೂರು, ಕಲಬುರಗಿ, ಗದಗ್, ಬಳ್ಳಾರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರಪ್ರತ್ಯೇಕವಾಗಿ ಕೊರೊನಾ ವೈರಸ್ ಪೀಡಿತರಿಗೆ ಚಿಕಿತ್ಸೆ ಕೊಡಲು ಆಸ್ಪತ್ರೆಗಳನ್ನು ನಿಗದಿ ಮಾಡಿಕೊಂಡಿದೆ. ಉಳಿದಂತೆ ಇನ್ನುಳಿದ 22 ಜಿಲ್ಲೆಗಳಲ್ಲಿ ವಿಶೇಷ ಚಿಕಿತ್ಸಾ ಘಟಕಗಳನ್ನು ತೆರೆಯಲಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಕೇಂದ್ರಕ್ಕೆ ಮಾಹಿತಿ ಕೊಟ್ಟಿದ್ದಾರೆ.
ಕೋವಿಡ್ ಸೋಂಕಿತರಿಗೆಂದು ಲಭ್ಯರುವ ವಂಟಿಲೇಟರ್ಳು 178
ಕೊರೊನಾ ವೈರಸ್ ಸೋಂಕಿಗೆ ತುತ್ತಾಗುವವರಿಗೆ ಚಿಕತ್ಸೆ ಕೊಡಲು ಅನುಕೂಲವಾಗುವಂತೆ ಪ್ರತ್ಯೇಕ ಆಸ್ಪತ್ರೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚನೆ ಕೊಟ್ಟಿತ್ತು. ಒಂದೊಮ್ಮೆ ರೀಗ ತೀವ್ರವಾಗಿ ಉಲ್ಬಣವಾದರೆ ಸಾಕಷ್ಟು ಸಂಖ್ಯೆಯಲ್ಲಿ ವೆಂಟಿಲೇಟರ್ಗಳನ್ನು ಇರುವಂತೆ ನೋಡಿಕೊಳ್ಳಳು ಸೂಚಿಸಿತ್ತು. ಆದರೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಪ್ರತ್ಯೇಕವಾಗಿ ರಾಜ್ಯ ಸರ್ಕಾರ ಕಾಯ್ದಿರಿಸಿರುವ ವೆಂಟಿಲೇಟರ್ಗಳ ಸಂಖ್ಯೆ ಕೇವಲ 178. ಈ ಮಾಹಿತಿಯನ್ನು ಸ್ವತಃ ರಾಜ್ಯ ಆರೋಗ್ಯ ಇಲಾಖೆ ಕೇಂದ್ರ ಆರೋಗ್ಯ ಇಲಾಖೆಗೆ ಕೊಟ್ಟಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 50, ಬೋರಿಂಗ್ ಆಸ್ಪತ್ರೆಯಲ್ಲಿ 4 (ಇನ್ನೂ ಸಿದ್ಧವಾಗಬೇಕಿದೆ), ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಲ್ಲಿ 5, ಮೈಸೂರು ಜಿಲ್ಲಾ ಆಸ್ಪತ್ರೆಯಲ್ಲಿ 18, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ 28, ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ 16, ಗದಗ್ ಜಿಲ್ಲಾಸ್ಪತ್ರೆಯಲ್ಲಿ 12, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 15 ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ 30 ವೆಂಟಿಲೇಟರ್ಗಳು ಲಭ್ಯವಿವೆ ಎಂದು ಕೇಂದ್ರಕ್ಕೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ.
ಐಸಿಯು ಹಾಗೂ ಐಸೋಲೆಟೆಡ್ ಹಾಸಿಗೆಗಳ ಸಂಖ್ಯೆ
ಇನ್ನು ಇದೇ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡಲು ಐಸಿಯು ಹಾಗೂ ಐಸೋಲೆಟೆಡ್ ಬೆಡ್ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 50 ಐಸಿಯು ಹಾಗೂ 500 ಐಸೋಲೆಟೆಡ್ ಬೆಡ್ಗಳು, ಬೋರಿಂಗ್ ಆಸ್ಪತ್ರೆಯಲ್ಲಿ 20 ಐಸಿಯು ಹಾಗೂ 240 ಐಸೋಲೆಟೆಡ್ ಬೆಡ್ಗಳು, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಲ್ಲಿ 20 ಐಸಿಯು ಹಾಗೂ 300 ಐಸೋಲೆಟೆಡ್ ಬೆಡ್ಗಳು, ಮೈಸೂರು ಜಿಲ್ಲಾ ಆಸ್ಪತ್ರೆಯಲ್ಲಿ 20 ಐಸಿಯು ಹಾಗೂ 150 ಐಸೋಲೆಟೆಡ್ ಬೆಡ್ಗಳು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ 23 ಐಸಿಯು ಹಾಗೂ 400 ಐಸೋಲೆಟೆಡ್ ಬೆಡ್ಗಳು, ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ 36 ಐಸಿಯು ಹಾಗೂ 250 ಐಸೋಲೆಟೆಡ್ ಬೆಡ್ಗಳು, ಗದಗ್ ಜಿಲ್ಲಾ ಆಸ್ಪತ್ರೆಯಲ್ಲಿ 20 ಐಸಿಯು ಹಾಗೂ 100 ಐಸೋಲೆಟೆಡ್ ಬೆಡ್ಗಳು, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿಆಸ್ಪತ್ರೆಯಲ್ಲಿ 25 ಐಸಿಯು ಹಾಗೂ 200 ಐಸೋಲೆಟೆಡ್ ಬೆಡ್ಗಳು, ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ 30 ಐಸಿಯು ಹಾಗೂ 350 ಐಸೋಲೆಟೆಡ್ ಬೆಡ್ಗಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಸೋಂಕಿತರ ಪ್ರಕರಣಗಳು
ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸಾವಿರಾರು ಜನರು ಹೊಂ ಕ್ವಾರಂಟೈನಲ್ಲಿದ್ದಾರೆ. ಮಾರ್ಚ್ 4ರ ಸಂಜೆ 5 ಗಂಟೆವರೆಗೆ ರಾಜ್ಯ ಆರೋಗ್ಯ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ 144 ಕೋವಿಡ್-19 ದೃಢಪಟ್ಟ ರೋಗಿಗಳಿದ್ದಾರೆ. ಇವರಲ್ಲಿ ನಾಲ್ವರು ಈಗಾಗಲೇ ಮೃತಪಟ್ಟಿದ್ದು, 11 ಜನರು ಗುಣಮುಖರಾಗಿದ್ದಾರೆ. ಒಟ್ಟು 32,647 ಜನರನ್ನು ನಿಗಾವಣೆ (ಕ್ವಾರಂಟೈನ್)ಯಲ್ಲಿಡಲಾಗಿದೆ.
ದಿನದಿಂದ ದಿನಕ್ಕೆ ಸೋಂಕು ದೃಢಪಟ್ಟಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದಕ್ಕೆ ತಕ್ಕಂತೆ ಐಸಿಯು ಹಾಗೂ ವೆಂಟಿಲೇಟರ್ಗಳ ಸಂಖ್ಯೆ ಹೆಚ್ಚಳ ಮಾಡಲಾಗಿಲ್ಲ ಎಂಬುದು ರಾಜ್ಯ ಸರ್ಕಾರವು ಕೇಂದ್ರ ಆರೋಗ್ಯ ಇಲಾಖೆಗೆ ಕೊಟ್ಟಿರುವ ಮಾಹಿತಿಯಲ್ಲಿಯೆ ಕಂಡುಬಂದಿದೆ.
ರಾಜ್ಯದ 16 ಜಿಲ್ಲೆಗಳಲ್ಲಿ ಸೋಂಕು ದೃಢಪಟ್ಟ ಪ್ರಕರಣಗಳಿವೆ
ಬೆಂಗಳೂರು ನಗರ, ಮೈಸೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಕಲಬುರಗಿ, ಬಿದರ್, ದಾವಣಗೇರೆ, ಉಡುಪಿ, ಧಾರವಾಡ, ಕೊಡಗು, ತುಮಕೂರು, ಬೀದರ್, ಬಾಗಲಕೋಟೆ, ಬೆಳಗಾವಿ ಹಾಗೂ ಬೆಂಗಳೂರು ಗ್ರಾಮಾಂತರ ಸೇರಿ ಒಟ್ಟು 16 ಜಿಲ್ಲೆಗಳಲ್ಲಿ ಕೋವಿಡ್-19 ದೃಢಪಟ್ಟ ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ರಾಜ್ಯದ 26 ಜಿಲ್ಲೆಗಳಲ್ಲಿ ಶಂಕಿತರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಇಷ್ಟಾದರೂ ಬಹಳಷ್ಟು ಜಿಲ್ಲೆಗಳಲ್ಲಿ ಕೋವಿಡ್-19 ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಿಕೊಂಡಿಲ್ಲ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ಕೊಟ್ಟಿದ್ದಾರೆ.
ಕೊರೊನಾ ವೈರಸ್ ಪರೀಕ್ಷೆಗೆ ಬೆರಳೆಣಿಕೆಯಷ್ಟು ಪ್ರಯೋಗಾಲಯಗಳು
ಕೊರೊನಾ ವೈರಸ್ ದೃಢಪಡುತ್ತಿರುವ ಸಂಖ್ಯೆ ವೇಗವಾಗಿ ಹೆಚ್ಚುತ್ತಿವೆ. ಆದರೆ ರಾಜ್ಯದಲ್ಲಿ ಪ್ರತಿ 10 ಲಕ್ಷ ಜನರಿಗೆ 25 ರಿಂದ 30 ಜನರನ್ನು ಮಾತ್ರ ಪರೀಕ್ಷೆ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ಪ್ರಯೋಗಾಲಯಗಳ ಸಂಖ್ಯೆ ಮಾತ್ರ 7ನ್ನು ಮೀರಿಲ್ಲ. ಇದರಿಂದಾಗಿ ಕೋವಿಡ್-19 ರೋಗಿಗಳ ಪತ್ತೆ ಕೂಡ ವಿಳಂಬವಾಗುತ್ತಿದೆ. ಹೀಗಾಗಿಯೆ ಶಂಕಿತರು ಮರಣ ಹೊಂದಿದ ಬಳಿಕ ಸೋಂಕು ದೃಢಪಡಿಸಲಾಗುತ್ತಿದೆ.
ಏ. 4 ರವೆಗೆ 5061 ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇಟಿಯಲಿಗಿಂತ ಹೆಚ್ಚು ಜನಸಂಖ್ಯೆಯನ್ನು ಕರ್ನಾಟಕ ರಾಜ್ಯ ಹೊಂದಿದ್ದು, ಇಲ್ಲಿ ಪರೀಕ್ಷೆಗೆ ಒಳಪಡಿಸಿದ ಮಾದರಿಗಳು ಸಾಕಷ್ಟಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಎದ್ದು ಕಾಣುತ್ತಿದೆ ರಾಜ್ಯ ಸರ್ಕಾರದಲ್ಲಿನ ಸಮನ್ವಯದ ಕೊರತೆ
ಇನ್ನು ಕೊರೊನಾ ವೈರಸ್ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಕರೆ ಕೊಟ್ಟಿರುವ ರಾಜ್ಯ ಸರ್ಕಾರದಲ್ಲಿಯೆ ಸಮನ್ವಯದ ಕೊರತೆ ಜನರಿಗೆ ಎದ್ದು ಕಾಣುತ್ತಿದೆ. ಕೋವಿಡ್-19 ಕುರಿತಾಗಿ ಯಾರು ಮಾಹಿತಿಯನ್ನು ಕೊಡಲಬೇಕು ಎಂಬುದು ಸೇರಿದಂತೆ ಹಲವು ವಿಚಾರಗಳಲ್ಲಿ ಸಮನ್ವಯದ ಕೊರತೆ ಆರಂಭದಿಂದಲೂ ಎದ್ದು ಕಾಣುತ್ತಿದೆ. ಕೊರೊನಾ ವೈರಸ್ ಕುರಿತಾಗಿ ಒಬ್ಬರನ್ನು ಉತ್ತರದಾಯಿತ್ವರನ್ನಾಗಿ ಮಾಡಬೇಕು ಎಂದು ಬಹಿರಂಗವಾಗಿಯೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾಧ್ಯಗಳಿಗೆ ಹೇಳಿಕೆ ಕೊಟ್ಟಿದ್ದರು. ನಂತರ ಬೆಂಗಳೂರು ಮಹಾನಗರಕ್ಕೆ ಡಾ. ಸುಧಾಕರ್ ಹಾಗು ಜಿಲ್ಲೆಗಳ ಜವಾಬ್ದಾರಿಯನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಂಚಿಕೆ ಮಾಡಿದ್ದರು. ಜೊತೆಗೆ ಕೋವಿಡ್-19 ಟಾಸ್ಕ್ಪೋರ್ಸ್ಗೆ ಡಾ. ಸುಧಾಕರ್ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು.
ಎರಡು ದಿನಗಳ ಹಿಂದೆ ಮತ್ತೆ ನಿರ್ಧಾರ ಬದಲಿಸಿದ ಸಿಎಂ ಯಡಿಯೂರಪ್ಪ ಅವರು ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರನ್ನು ರಾಜ್ಯದಲ್ಲಿ ಕೋವಿಡ್-19 ಕುರಿತಂತೆ ಮಾಹಿತಿ ಕೊಡಲು ನೇಮಕ ಮಾಡಿದ್ದಾರೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಗಳಲ್ಲಿ ಸಮನ್ವಯದ ಕೊರತೆ ಉಂಟಾಗಿದೆಯಾ ಎಂಬ ಸಂಶಯ ಜನರಲ್ಲಿ ಮೂಡುವಂತಾಗಿದೆ.
ವೆಂಟಿಲೇಟರ್ ಹೆಚ್ಚಿಸಲು ಆಗ್ರಹಿಸಿದ್ದ ವಿಪಕ್ಷಗಳ ನಾಯಕರು
ರಾಜ್ಯದಲ್ಲಿ ಕೊರೊನಾ ವೈರಸ್ಗೆ ಚಿಕಿತ್ಸೆ ಕೊಡಲು ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ಆಸ್ಪತ್ರೆ ಗುರುಯತಿಸುವಂತೆ, ವೆಂಟಿಲೇಟರ್ಗಳ ಸಂಖ್ಯೆ ಹೆಚ್ಚಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸುತ್ತಲೇ ಇದ್ದಾರೆ. ಶೀಘ್ರದಲ್ಲೆ ವೆಂಟಿಲೇಟರ್ಗಳನ್ನು ಹೆಚ್ಚಿಸಲಾಗುವುದು ಎಂಬ ಭರವಸೆಯನ್ನು ವಿಧಾನಸಭೆ ಹಾಗೂ ಸರ್ವಪಕ್ಷಗಳ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಕೊಟ್ಟಿದ್ದಾರೆ. ಆದರೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಏಪ್ರೀಲ್ 2ರಂದು ಕೊಟ್ಟಿರುವ ಮಾಹಿತಿಯನ್ನು ನೋಡಿದ್ರೆ ಕೊಟ್ಟ ಭರವಸೆಯಂತೆ ರಾಜ್ಯ ಸರ್ಕಾರ ನಡೆದುಕೊಂಡಿಲ್ಲ ಎಂಬುದು ಕಂಡುಬಂದಿದೆ.
ಮಾರಕ ಕೋರೊವಾ ವೈರಸ್ನಿಂದ ರಾಜ್ಯದ ಜನರನ್ನು ರಕ್ಷಿಸಲು ಈಗಾಲಾದರೂ ಸಾಕಷ್ಟು ವೈದ್ಯಕೀಯ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರ ಮಾಡಿಕೊಳ್ಳಬೇಕಾದ ಅಗತ್ಯವಿದೆ.