ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡುಗೆ
ಬೆಂಗಳೂರು, ಜೂನ್ 14: ಕಳೆದ ಸರ್ಕಾರ ಘೋಷಣೆ ಮಾಡಿದ್ದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿ ಮಾಡುವ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ.
ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಮನ್ವಯ ಸಮಿತಿಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಇದರ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಎಲ್ಲಾ ವರ್ಗದ, ಜಾತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡುವ ನಿರ್ಣಯವನ್ನು ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಕೊನೆಯ ಬಜೆಟ್ನಲ್ಲಿ ಘೋಷಿಸಿದ್ದರು. ಆದರೆ ಕುಮಾರಸ್ವಾಮಿ ಅವರು ಇತ್ತೀಚೆಗಷ್ಟೆ ಇದರಿಂದ ಸರ್ಕಾರಕ್ಕೆ ಹೊರೆ ಆಗುತ್ತದೆ ಎಂದಿದ್ದರು.
ಆದರೆ ಇಂದು ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಅವರ ಒತ್ತಾಸೆಯಿಂದಾಗಿ ಉಚಿತ ಬಸ್ ಪಾಸ್ ಯೋಜನೆಯನ್ನು ಅಂಗೀಕರಿಸಲಾಗಿದ್ದು. ವಿದ್ಯಾರ್ಥಿಗಳಿಗೆ ಬಂಪರ್ ಉಡುಗೊರೆ ದೊರೆತಿದೆ.
ಸಾರಿಗೆ ಸಚಿವ ತಮ್ಮಣ್ಣ ಅವರು ನಿನ್ನೆಯಷ್ಟೆ ಈ ಯೋಜನೆ ಅನುಷ್ಠಾನ ಕಷ್ಟ ಎಂದಿದ್ದರು. ಆದರೆ ಇಂದು ಯೋಜನೆಗೆ ಮನ್ನಣೆ ದೊರೆತಿದೆ. ಬಸ್ ಪಾಸ್ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದ್ದು, ಬಸ್ ಪಾಸ್ಗಳನ್ನು ನೇರವಾಗಿ ಶಾಲೆಗಳಿಗೆ ತಲುಪಿಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ.