ಜಾತ್ರೆ, ಉತ್ಸವಗಳಿಗೆ ಅಸ್ತು: ಭಕ್ತಾದಿಗಳಿಗೆ ಸಂತಸದ ಸುದ್ದಿ ನೀಡಿದ ರಾಜ್ಯ ಸರ್ಕಾರ
ಬೆಂಗಳೂರು, ಫೆಬ್ರವರಿ 9: ಒಂದು ವರ್ಷದಿಂದ ಕೊರೊನಾ ವೈರಸ್ ಸೋಂಕಿನ ಕಾರಣದ ನಿರ್ಬಂಧಗಳಿಂದ ಧಾರ್ಮಿಕ ಉತ್ಸವಗಳನ್ನು ಅದ್ದೂರಿಯಾಗಿ ನೆರವೇರಿಸಲು ಸಾಧ್ಯವಾಗದೆ ಬೇಸರಗೊಂಡಿದ್ದ ಜನರಿಗೆ ಸರ್ಕಾರದಿಂದ ಸಂತಸ ಸುದ್ದಿ ಸಿಕ್ಕಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿನ ಎಲ್ಲ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಜಾತ್ರೆ ಮತ್ತು ರಥೋತ್ಸವ ಸೇರಿದಂತೆ ಎಲ್ಲ ಧಾರ್ಮಿಕ ಆಚರಣೆಗಳಿಗೆ ಮುಜರಾಯಿ ಇಲಾಖೆ ಅನುಮತಿ ನೀಡಿದೆ.
ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮಂಗಳವಾರ ಹೊರಡಿಸಿರುವ ಆದೇಶದಂತೆ ಜಾತ್ರೆ, ಉತ್ಸವ, ಅನ್ನದಾಸೋಹ, ವಿಶೇಷ ಪೂಜೆ ಮತ್ತು ಪ್ರಸಾದ ವಿತರಣೆಯಂತಹ ಧಾರ್ಮಿಕ ಚಟುವಟಿಕೆಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.
ರಾಜ್ಯದ ಖಾಸಗಿ ದೇವಸ್ಥಾನಗಳನ್ನೂ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಸರ್ಕಾರ: ಕೋಟಾ
ಕಳೆದ ವರ್ಷದ ಮಾರ್ಚ್ ತಿಂಗಳಿನಿಂದಲೂ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ಈ ಹಿಂದಿನಂತೆ ಸಂಪ್ರದಾಯಗಳಿಗೆ ಅನುಗುಣವಾಗಿ ಉತ್ಸವ ಮತ್ತು ಪೂಜಾ ಕೈಂಕರ್ಯಗಳು ನಡೆದಿಲ್ಲ. ಸರ್ಕಾರದ ನಿರ್ಬಂಧಗಳ ನಡುವೆಯೂ ಕೆಲವು ಭಾಗಗಳಲ್ಲಿ ಜನರು ಕಿಕ್ಕಿರಿದು ಜಾತ್ರೆ ಉತ್ಸವಗಳನ್ನು ನಡೆಸಿದ್ದರು. ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ಇರುವುದರಿಂದ ಭಕ್ತರು ಬೇಸರ ವ್ಯಕ್ತಪಡಿಸಿದ್ದರು. ಈಗ ಸರ್ಕಾರದಿಂದಲೇ ಅದಕ್ಕೆ ಅವಕಾಶ ಸಿಕ್ಕಂತಾಗಿದೆ. ಮುಂದೆ ಓದಿ.
ಮಾರ್ಗಸೂಚಿ ಪಾಲಿಸಬೇಕು
ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಪಾಲಿಸುವ ಷರತ್ತಿಗೆ ಒಳಪಟ್ಟಿರುವ ದೇವಾಲಯಗಳಲ್ಲಿ ಉತ್ಸವ ಹಾಗೂ ಆಚರಣೆಗಳನ್ನು ನೆರವೇರಿಸಲು ಅನುವು ಮಾಡಿಕೊಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿನ ದೇವಾಲಯಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಜಿಲ್ಲಾಧಿಕಾರಿಗಳು ಹೊರಡಿಸಿರುವ ಹಾಗೂ ಮುಂದೆ ಹೊರಡಿಸಲಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಈ ಬಾರಿ ಸರಳ ಸಂಪ್ರದಾಯಕ್ಕಷ್ಟೆ ಸುತ್ತೂರು ಜಾತ್ರೆ ಸೀಮಿತ
ಅರ್ಚಕರ ನಿಯೋಗದ ಮನವಿ
ದೇವಾಲಯಗಳಲ್ಲಿ ಎಲ್ಲ ಬಗೆಯ ಸೇವೆ ಹಾಗೂ ಉತ್ಸವಗಳನ್ನು ನಡೆಸಲು ಅವಕಾಶ ಕಲ್ಪಿಸಿಕೊಡುವಂತೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆಎಸ್ಎನ್ ದೀಕ್ಷಿತ್ ನೇತೃತ್ವದ ನಿಯೋಗವು ಇತ್ತೀಚೆಗೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಕಳೆದ ವರ್ಷ ನಿರ್ಬಂಧ ಜಾರಿ
ಕೋವಿಡ್ ಪ್ರಕರಣಗಳಲ್ಲಿ ಭಾರಿ ಹೆಚ್ಚಳವಾದ ಹಿನ್ನೆಲೆಯಲ್ಲಿ 2020ರ ಮಾರ್ಚ್ 20ರಂದು ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿತ್ತು. ಸೆಪ್ಟೆಂಬರ್ 1ರಂದು ಧಾರ್ಮಿಕ ಕೇಂದ್ರಗಳಲ್ಲಿ ಷರತ್ತು ಬದ್ಧ ಸೇವೆಗಳಿಗೆ ಅವಕಾಶ ನೀಡಲಾಗಿತ್ತು.
Recommended Video
ಖಾಸಗಿ ದೇವಾಲಯ ಸ್ವಾಧೀನ ಇಲ್ಲ
ರಾಜ್ಯಲ್ಲಿರುವ ಖಾಸಗಿ ಒಡೆತನದ ದೇವಸ್ಥಾನ ಮತ್ತು ಟ್ರಸ್ಟ್ ಗಳನ್ನು ಸ್ವಾಧೀನಪಡಿಸಿಕೊಳ್ಳುವ ಯಾವುದೇ ಉದ್ದೇಶ ಕರ್ನಾಟಕ ಸರ್ಕಾರಕ್ಕಿಲ್ಲ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸ್ಪಷ್ಟಪಡಿಸಿದ್ದರು. ರಾಜ್ಯ ಸರ್ಕಾರವು 2011ರ ಧಾರ್ಮಿಕ ದತ್ತಿ ಕಾಯ್ದೆ ಅಡಿಯಲ್ಲಿ ಖಾಸಗಿ ದೇವಸ್ಥಾನಗಳ ನೋಂದಣಿ ಮಾಡಿಕೊಳ್ಳುವ ಬಗ್ಗೆ ಉಲ್ಲೇಖಿಸಲಾಗಿದ್ದು, ದೇವಸ್ಥಾನಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂಬ ವದಂತಿ ಹೆಚ್ಚಿದ ಹಿನ್ನೆಲೆ ಸಚಿವರು ಈ ಕುರಿತು ಸ್ಪಷ್ಟನೆ ನೀಡಿದ್ದರು.