ಇದೇ ವರ್ಷ ಗ್ರಾಮ ಪಂಚಾಯತಿ ಚುನಾವಣೆ: ಸರ್ಕಾರಕ್ಕೆ ಪತ್ರ ಬರೆದ ರಾಜ್ಯ ಚುನಾವಣಾ ಆಯೋಗ!
ಬೆಂಗಳೂರು, ಅ. 13: ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಕೋವಿಡ್ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಸದ್ಯ ನಡೆಸಬಾರದು ಎಂದು ರಾಜ್ಯ ಸರ್ಕಾರ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಆ ಬಗ್ಗೆ ಜಿಲ್ಲಾಧಿಕಾರಿಗಳ ಸಲಹೆಯನ್ನೂ ಆಯೋಗ ಪಡೆದುಕೊಂಡಿತ್ತು.
ಅದಾದ ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು SOP ಯನ್ನು ಸಿದ್ಧ ಮಾಡಿಕೊಂಡಿತ್ತು. ಆದರೆ ಅದಾದ ಬಳಿಕ ರಾಜ್ಯ ಬಿಜೆಪಿ ಸರ್ಕಾರ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದಕ್ಕೆ ಹಾಕುವಂತೆ ಆಯೋಗಕ್ಕೆ ಮನವಿ ಮಾಡಿಕೊಂಡಿತ್ತು. ಇದೀಗ ರಾಜ್ಯ ಚುನಾವಣಾ ಆಯೋಗ ತನ್ನ ನಿರ್ಧಾರವನ್ನು ಸರ್ಕಾರಕ್ಕೆ ತಿಳಿಸಿದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈಗಾಗಲೇ ಎಸ್.ಒ.ಪಿ. ಹೊರಡಿಸಲಾಗಿದೆ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಕಲಂ 8 (2) ರ ಪ್ರಕಾರ ಆಡಳಿತಾಧಿಕಾರಿಗಳು ನೇಮಕಗೊಂಡ 6 ತಿಂಗಳ ಒಳಗಾಗಿ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸಬೇಕಾಗಿರುತ್ತದೆ. ಕೋವಿಡ್-19 ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಸಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ರಾಜ್ಯ ಚುನಾವಣಾ ಆಯೋಗವು ಎಸ್.ಒ.ಪಿ.ಯನ್ನು ಈ ಹಿಂದೆಯೆ ಹೊರಡಿಸಿದೆ ಎಂದು ಪತ್ರದಲ್ಲಿ ರಾಜ್ಯ ಸರ್ಕಾರಕ್ಕೆ ಆಯೋಗ ತಿಳಿಸಿದೆ.
ಗ್ರಾಮ ಪಂಚಾಯಿತಿ ಚುನಾವಣೆ; ಆಯೋಗದ ಸ್ಪಷ್ಟನೆ
ಸಾಮಾನ್ಯವಾಗಿ ಜಿಲ್ಲಾವಾರು ಎರಡು ಹಂತಗಳಲ್ಲಿ ಚುನಾವಣೆಯನ್ನು ನಡೆಸಲಾಗುತ್ತಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ತಾಲ್ಲೂಕುಗಳನ್ನು ಪ್ರತ್ಯೇಕಿಸಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಬಹುದು.
ಸ್ಥಳೀಯ ಸಿಬ್ಬಂದಿ ಬಳಕೆ
ಚುನಾವಣಾಧಿಕಾರಿ ಸಿಬ್ಬಂದಿ ಚಲನವಲನಗಳನ್ನು ನಿಯಂತ್ರಿಸುವ ಉದ್ದೇಶದಿಂದ ಚುನಾವಣೆಗೆ ಆಯಾ ತಾಲ್ಲೂಕಿನ ಅಧಿಕಾರಿ, ಸಿಬ್ಬಂದಿಗಳನ್ನೇ ಮತಗಟ್ಟೆ ಅಧಿಕಾರಿಗಳನ್ನಾಗಿ ನೇಮಕ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರಕ್ಕೆ ಆಯೋಗ ತಿಳಿಸಿದೆ.
ಗ್ರಾಮ ಪಂಚಾಯತಿ ಚುನಾವಣೆಯು ಪಕ್ಷರಹಿತ ಚುನಾವಣೆಯಾಗಿದೆ. ಜೊತೆಗೆ ಕ್ಷೇತ್ರದ ವ್ಯಾಪ್ತಿಯೂ ಬಹಳ ಚಿಕ್ಕದಿರುವುದರಿಂದ ಅಭ್ಯರ್ಥಿಗಳ ಪ್ರಚಾರ ಆಯಾ ಕ್ಷೇತ್ರಕ್ಕೆ ಸೀಮಿತವಾಗಿರುತ್ತದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಗರಿಷ್ಟ 5 ಜನ ಬೆಂಬಲಿಗರೊಂದಿಗೆ ಮಾತ್ರ ಚುನಾವಣಾ ಪ್ರಚಾರ ಮಾಡುವಂತೆ ಸೂಚನೆ ನೀಡಲಾಗಿದೆ.
ನಗರ ಪ್ರದೇಶಗಳಲ್ಲಿ ಕೋವಿಡ್ ಹೆಚ್ಚಿದೆ
ಮತದಾರರು ಗುಂಪುಗೂಡುವುದನ್ನು ತಡೆಗಟ್ಟಲು ಹಾಗೂ ಕೋವಿಡ್ ಮುನ್ನೆಚ್ಚರಿಕೆಯನ್ನು ಪರಿಪಾಲಿಸಲು ಅನುವಾಗುವಂತೆ ಪ್ರತಿ ಮತಗಟ್ಟೆಗೆ 1,400 ಮತದಾರರ ಬದಲಿಗೆ ಗರಿಷ್ಠ 1,000 ಮತದಾರರು ಇರುವಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಈಗಾಗಲೇ ಆಗಸ್ಟ್ 31 ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಚುನಾವಣೆಯಲ್ಲಿ ಶಿಕ್ಷಕರ ಬಳಕೆ: ಆಯೋಗದ ಮಹತ್ವದ ಆದೇಶ!
ಕೋವಿಡ್ ಪ್ರಕರಣಗಳು ಅತ್ಯಧಿಕವಾಗಿ ನಗರ ಪ್ರದೇಶಗಳಲ್ಲಿ ಕಂಡುಬರುತ್ತಿರುವುದರಿಂದ, ಗ್ರಾಮಾಂತರ ಮತದಾರರು ಭಾಗವಹಿಸುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ನಡೆಸುವುದು ಸೂಕ್ತವಾಗಿರುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮುಂದೆಯೂ ಚುನಾವಣೆಗಳಿವೆ
ಇದಲ್ಲದೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳ ಅವಧಿ 2021 ಮೇ, ಜೂನ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಈ ಮಧ್ಯೆ ಸರ್ಕಾರವು 50 ಹೊಸ ತಾಲ್ಲೂಕುಗಳನ್ನು ರಚನೆ ಮಾಡಿರುವುದರಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿಯನ್ನು ಕಾರ್ಯವನ್ನು 2020ರ ಡಿಸೆಂಬರ್ ತಿಂಗಳಿಂದ ಪ್ರಾರಂಭಿಸಬೇಕಾಗಿರುತ್ತದೆ. ಹಾಗೂ ಬಿಬಿಎಂಪಿ ಚುನಾವಣೆ ಸಿದ್ದತೆ, 2021 ರ ಮೇ ತಿಂಗಳಲ್ಲಿ 55 ನಗರ ಸ್ಥಳೀಯ ಸಂಸ್ಥೆಗಳ ಅವಧಿಯು ಪೂರ್ಣಗೊಳ್ಳುತ್ತಿರುವುದರಿಂದ, ಅವುಗಳಿಗೂ ಸಹ ಸಾರ್ವತ್ರಿಕ ಚುನಾವಣೆ ನಡೆಸಲು ಆಯೋಗ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗಿರುತ್ತದೆ.
ಚುನಾವಣೆಗೆ ಸಿದ್ಧವಾಗುವಂತೆ ಆಯೋಗದ ಸೂಚನೆ
ಕೇಂದ್ರ ಚುನಾವಣಾ ಆಯೋಗವು ಕೊರೊನಾ ನಿಯಂತ್ರಣ ಎಸ್.ಒ.ಪಿ.ಯನ್ನು ಸಿದ್ಧಪಡಿಸಿಕೊಂಡು ಅದರ ಅನುಸಾರ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ ನಡೆಸುತ್ತಿದೆ. ಅಲ್ಲದೆ, ಬಿಹಾರ್ ವಿಧಾನಸಭೆ ಚುನಾವಣೆ ಸಹ ನಡೆಯುತ್ತಿದೆ. ಗ್ರಾಮ ಪಂಚಾಯತಿಗಳ ಚುನಾವಣೆಯನ್ನು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಹೀಗಾಗಿ 2020ನೇ ಸಾಲಿನಲ್ಲಿಯೇ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಯನ್ನು ಮುಕ್ತಾಯಗೊಳಿಸುವುದು ಸೂಕ್ತವಾಗಿದೆ ಎಂದು ಪತ್ರದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ.
Recommended Video