ಸುಶಿಕ್ಷಿತ, ನಗರ ಪ್ರದೇಶದ ಜನರೇ ಮತಗಟ್ಟೆಗಳ ಬಳಿ ಸುಳಿಯದಿರಲು ಕಾರಣವೇನು?
ಮಂಗಳೂರು, ಏಪ್ರಿಲ್ 23 : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗ ರಾಜ್ಯದಲ್ಲಿ ಶೇಕಡವಾರು ಮತದಾನ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಸ್ವೀಪ್ ಸಮಿತಿ ಮೂಲಕ ಹಮ್ಮಿಕೊಳ್ಳುತ್ತಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಸ್ವೀಪ್ ಸಮಿತಿಗಳು ನಡೆಸುತ್ತಿರುವ ಕಾರ್ಯಕ್ರಮಗಳು ಸಾರ್ವಜನಿಕರಿಗೆ ತಲುಪುತ್ತಿದೆಯೇ ಎನ್ನುವ ಸಂಶಯ ಮೂಡಲಾರಂಭಿಸಿದೆ.
ಹೌದು, ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸ್ವೀಪ್ ಸಮಿತಿಗಳು ಜಿಲ್ಲೆಯ ಮತದಾರರನ್ನು ಸೆಳೆಯಲು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಜಲಥಾನ್, ಬೋಟಿಂಗ್, ಪ್ಯಾರಾಸೈಲಿಂಗ್, ಕ್ಯಾಂಪಸ್ ರಾಯಭಾರಿ, ಜಾಗೃತಿ ಗಾಯನ, ಕವಿಗೋಷ್ಠಿ, ಯಕ್ಷಗಾನ ತಳಮದ್ದಳೆ ಈ ತರಹದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ಮತದಾರರಿಗೆ ವೋಟರ್ಸ್ ಗೈಡ್ ಹಂಚಿಕೆ: ರಾಜ್ಯದಲ್ಲಿ ಮೊದಲ ಪ್ರಯೋಗ
ಆದರೆ ಈ ಕಾರ್ಯಕ್ರಮಗಳ ಫಲಿತಾಂಶದ ಬಗ್ಗೆ ಜನರೇ ಅನುಮಾನ ಪಡುವಂತಾಗಿದೆ. ಗರಿಷ್ಠ ಮತದಾನ ನಡೆಯಬೇಕೆಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಡೆಸುತ್ತಿರುವ ಕಾರ್ಯಕ್ರಮಗಳು ಕೇವಲ ಅಧಿಕಾರಿಗಳ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆಯೇ ಎಂಬ ಸಂಶಯಗಳು ಬರಲಾರಂಭಿಸಿದೆ.
ಕುಗ್ರಾಮದಲ್ಲೇ ಹೆಚ್ಚು ಮತದಾನ
ಪ್ರತಿಬಾರಿ ಚುನಾವಣೆಯಲ್ಲಿಯೂ ಹೈ ಪ್ರೊಫೈಲ್ಡ್ ಜನರು, ಅತೀ ಸುಶಿಕ್ಷಿತರು ಇರುವ ಮಂಗಳೂರು ನಗರದಲ್ಲೇ ಅತಿ ಕಡಿಮೆ ಮತದಾನ ನಡೆಯುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಧಿಕ ಮತದಾನ ನಡೆಯುತ್ತಿದೆ. ಕುಗ್ರಾಮಗಳು ಅಧಿಕ ಸಂಖ್ಯೆಯಲ್ಲಿರುವ ಸುಳ್ಯ ಹಾಗೂ ಬೆಳ್ತಂಗಡಿ ವಿಧಾನಸಭಾ ಪ್ರದೇಶಗಳಲ್ಲಿ ಅತ್ಯಧಿಕ ಮತದಾನ ನಡೆಯುತ್ತಿದೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಜನರು ಮತ ಚಲಾವಣೆಯಲ್ಲಿ ಮುಂದೆ ಇರುತ್ತಾರೆ.
ವೃದ್ಧರನ್ನು ಹೊತ್ತು ತಂದು ಮತ ಚಲಾಯಿಸುತ್ತಾರೆ. ಆದರೆ ನಗರದಲ್ಲಿ ಸುಶಿಕ್ಷಿತ ಜನರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದೇ ಇಲ್ಲ , ಬದಲಾಗಿ ಮತದಾನದ ದಿನ ಪ್ರತ್ಯೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಅಲ್ಲದೆ ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ನೌಕರರು ಕೂಡ ಮತದಾನದಿಂದ ವಂಚಿತರಾಗುತ್ತಿದ್ದಾರೆ. ಈ ವರ್ಗದ ಮತದಾರರನ್ನು ಸೆಳೆಯಲು ಸ್ವೀಪ್ ಸಮಿತಿ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ.
ಪ್ರವಾಸಿಗರಿಗೆ ಸೀಮಿತವಾದ ಕಾರ್ಯಕ್ರಮಗಳು
ಇತ್ತೀಚೆಗೆ ದಕ್ಷಿಣಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಮಂಗಳೂರಿನ ಬೊಕ್ಕಪಟ್ಣದಿಂದ ಸುಲ್ತಾನ್ ಬತ್ತೇರಿವರೆಗೆ ಫಲ್ಗುಣಿ ನದಿಯಲ್ಲಿ 10 ದೋಣಿಗಳಲ್ಲಿ 3 ಕಿಲೋ ಮೀಟರ್ ಸಂಚರಿಸಿ ಕಡ್ಡಾಯ ಮತದಾನಕ್ಕೆ ಪ್ರೇರೆಪಿಸುವ ಜಲಥಾನ್ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಸ್ವೀಪ್ ಸಮಿತಿಯವರು , ಸಾರ್ವಜನಿಕರು ಚಂಡೆ, ಜಾಗೃತಿ ಪತ್ರ ಹಿಡಿದು ಘೋಷಣೆ ಕೂಗುತ್ತಾ ಸಾಗಿದರು. ಆದರೆ ದೊಡ್ಡ ಮೊತ್ತ ವ್ಯಯಿಸಿ ನದಿಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಗಳು ನದಿ ತೀರದ ಕೆಲವರು ಹಾಗೂ ಪ್ರವಾಸಿಗರಿಗಷ್ಟೇ ಸೀಮಿತವಾಯಿತು.
ಸ್ವಚ್ಛತೆ ಕಾಪಾಡುವುದೇ ಸವಾಲಾಯಿತು
ಉಡುಪಿಯ ಸ್ವೀಪ್ ಸಮಿತಿ ಕೆಲವು ದಿನಗಳ ಹಿಂದೆ ಕಾರ್ಕಳದಲ್ಲಿ ಪ್ಯಾರಾಗ್ಲೈಡಿಂಗ್ ಮೂಲಕ ಇವಿಎಂ ಮತ್ತು ವಿವಿಪಿಎಟಿ ಬಳಸಿ ಮತದಾನ ಮಾಡುವುದು ಹೇಗೆ ಎಂಬ ಶಿರ್ಷಿಕೆಯಡಿ ಮಾಹಿತಿಯುಳ್ಳ ಕರ ಪತ್ರಗಳನ್ನು ಹಂಚಿದ್ದರು.
ಆದರೆ ಈ ಕರಪತ್ರಗಳು ಸಾರ್ವಜನಿಕರಿಗೆ ಸಿಗುವ ಬದಲು ಬಿಲ್ಡಿಂಗ್ ಮೇಲೆ , ಮರದ ಮೇಲೆ ಬಿದ್ದಿದ್ದವು. ಕೆಲವು ರಸ್ತೆಗಳಲ್ಲಿ ಬಿದ್ದು, ಉಪಯೋಗಕ್ಕಿಂತ ಸ್ವಚ್ಛತೆ ಕಾಪಾಡುವುದೇ ಸವಾಲಾಗಿತ್ತು. ಉಡುಪಿಯಲ್ಲಿ ಇದೇ ರೀತಿ ಪ್ಯಾರಾ ಸೈಲಿಂಗ್ ಮೂಲಕವು ಮತದಾನದ ಜಾಗೃತಿ ಮೂಡಿಸಲು ಉಡುಪಿ ಸ್ವೀಪ್ ಸಮಿತಿ ಕಾರ್ಯಕ್ರಮ ನಡೆಸಿತ್ತು.
ಪ್ರತಿಜ್ಞಾ ವಿಧಿ ಭೋಧನೆ
ಕರಾವಳಿ ಜಿಲ್ಲೆಗಳಲ್ಲಿ ನಡೆಯುವ ಎಲ್ಲಾ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಜಿಲ್ಲಾಡಳಿತದಿಂದ ಮತದಾನದ ಕುರಿತು ಪ್ರತಿಜ್ಞಾ ವಿಧಿ ಭೋಧಿಸಲಾಗುತ್ತಿದೆ. ಆದರೆ ಮತದಾನದಿಂದ ದೂರ ಉಳಿಯಲು ಇರುವ ಕಾರಣಗಳೇನು ಎನ್ನುವುದನ್ನು ಅಧಿಕಾರಿಗಳು ತಿಳಿದುಕೊಳ್ಳುವ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗಲಿಲ್ಲ. ಪ್ರತಿಯೊಂದು ಜಿಲ್ಲೆಗಳಿಗೂ ಮತದಾನದ ಜಾಗೃತಿಗಾಗಿ ಚುನಾವಣಾ ಆಯೋಗ ಲಕ್ಷಗಟ್ಟಲೇ ಹಣ ವ್ಯಯಿಸುತ್ತಿದೆ. ಆದರೆ ಕಾರ್ಯಕ್ರಮಗಳು ಬರೀ ಫೋಟೋಗಳಿಗೆ ಸೀಮಿತವಾದಂತೆ ಕಾಣುತ್ತಿದೆ.
ಮತದಾನದಿಂದ ದೂರ ಉಳಿಯಲು ನೈಜ ಕಾರಣ ಅರಿಯದೇ, ಈ ರೀತಿಯಾಗಿ ಬಾನೆತ್ತರದಿಂದ ಕರಪತ್ರ ಎಸೆಯುವುದು. ನದಿಯಲ್ಲಿ ಬೋಟಿಂಗ್ ಮಾಡುವುದು, ಕವಿಗೋಷ್ಠಿಗಳು, ವಿದ್ಯಾರ್ಥಿಗಳ ಮಾನವ ಸರಪಳಿಯಿಂದ ಮತದಾರರು ಮತಗಟ್ಟೆ ಬರುತ್ತಾರೆಯೇ ? ಪ್ರಮುಖವಾಗಿ ಮತದಾರರು ಮತಗಟ್ಟೆಗಳ ಬಳಿಗೆ ಸುಳಿಯದಿರಲು ಕಾರಣವೇನು ಎಂದು ತಿಳಿದುಕೊಳ್ಳುವ ಅಗತ್ಯವಿದ್ದು, ಸಮಸ್ಯೆಯ ಮೂಲ ಕಂಡುಕೊಳ್ಳುವುದು ಮುಖ್ಯವಾಗಿದೆ ಎನ್ನುವುದು ಇಂಥ ಕಾರ್ಯಕ್ರಮಗಳಿಂದ ವಂಚಿತರಾದ ಸಾರ್ವಜನಿಕರ ಪ್ರಶ್ನೆಗಳು.