ಡಿಸಿಎಂ ಅಶ್ವತ್ಥನಾರಾಯಣ, ಮೈಸೂರು ಐಜಿಪಿಗೆ ಚುನಾವಣಾ ಆಯೋಗ ನೋಟಿಸ್
ಬೆಂಗಳೂರು, ಡಿಸೆಂಬರ್ 5: ಮಂಡ್ಯದ ಕೆಆರ್ ಪೇಟೆಯ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಿಕೆ ಮಾಡಲಾಗುತ್ತಿದೆ. ಇದಕ್ಕೆ ಮೈಸೂರು ಐಜಿಪಿ ನೆರವು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಮೈಸೂರು ಐಜಿಪಿ ವಿಪುಲ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರಿಗೆ ರಾಜ್ಯ ಚುನಾವಣಾ ಆಯೋಗದಿಂದ ಬುಧವಾರ ಕಾರಣ ಕೇಳಿ ನೋಟಿಸ್ ಜಾರಿಮಾಡಲಾಗಿದೆ.
100% ಕೆ.ಆರ್.ಪೇಟೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಹಣ ಹಂಚುತ್ತಿದ್ದಾರೆ: ಆರೋಪ
ಮೈಸೂರು ಐಜಿಪಿ ವಿಪುಲ್ ಕುಮಾರ್ ಮತ್ತು ಡಿಸಿಎಂ ಅಶ್ವತ್ಥ ನಾರಾಯಣ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಆರೋಪಿಸಿದ್ದರು.
'ಕೆ.ಆರ್.ಪೇಟೆ ಗಡಿ ದಡದಳ್ಳಿ ಎನ್ನುವಲ್ಲಿ ಖುದ್ದಾಗಿ ಡಿಸಿಎಂ ಹಣ ಹಂಚಿದ್ದಾರೆ. ಅಲ್ಲೇ ವಾಸ್ತವ್ಯ ಹೂಡಿ, ಹಣ ಹಂಚುವ ಕೆಲಸವನ್ನು ಮಾಡುತ್ತಿದ್ದಾರೆ. ಐಜಿಪಿ ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ' ಎಂದು ರೇವಣ್ಣ ಆರೋಪಿಸಿದ್ದರು.
ಹಣ ಹಂಚಿಕೆ ಮತ್ತು ಕಿತ್ತಾಟ: ಎಚ್.ಡಿ.ರೇವಣ್ಣ ಪುತ್ರನ ವಿರುದ್ಧ ಎಫ್ಐಆರ್ ದಾಖಲು
'ಮೈಸೂರು ಐಜಿಪಿ, ಎಲ್ಲಾ ಪೊಲೀಸ್ ಭದ್ರತೆಗಳನ್ನು ನೀಡಿ, ಅಶ್ವಥ್ ನಾರಾಯಣ ಅವರಿಗೆ ದುಡ್ಡು ಹಂಚುವ ಕೆಲಸಕ್ಕೆ ಸಹಾಯ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರನ್ನು ಬೆದರಿಸುವ ಕೆಲಸವನ್ನೂ ಮಾಡುತಿದ್ದಾರೆ. ನನ್ನ ಮಗನ ಮೇಲೆ ಸುಳ್ಳು ಆರೋಪವನ್ನು ಹೊರಿಸಿ ಎ1 ಆರೋಪಿಯನ್ನಾಗಿ ಮಾಡಲಾಗಿದೆ. ಕೂಡಲೇ ಐಜಿಪಿಯನ್ನು ಬದಲಾಯಿಸಬೇಕು. ಇಲ್ಲದಿದ್ದರೆ, ನ್ಯಾಯಯುತ ಚುನಾವಣೆ ನಡೆಯಲು ಸಾಧ್ಯವಿಲ್ಲ' ಎಂದು ರೇವಣ್ಣ, ಆಯೋಗಕ್ಕೆ ಮನವಿ ಮಾಡಿದ್ದರು.