ಅನರ್ಹ ಶಾಸಕರ ಗಾಯದ ಮೇಲೆ ಬರೆ ಎಳೆದ ರಾಜ್ಯ ಸರ್ಕಾರ
ಬೆಂಗಳೂರು, ಸೆಪ್ಟೆಂಬರ್ 17: ಅನರ್ಹ ಶಾಸಕರ ವಿಚಾರಣೆ ಸುಪ್ರಿಂಕೋರ್ಟ್ನಲ್ಲಿ ತಡವಾಗುತ್ತಿರುವ ಬೆನ್ನಲ್ಲೆ ಆತಂಕಕ್ಕೆ ಒಳಗಾಗಿರುವ ಅನರ್ಹ ಶಾಸಕರಿಗೆ ಈಗ ರಾಜ್ಯ ಸರ್ಕಾರ ಮತ್ತೊಂದು ಭಾರಿ ಆಘಾತ ನೀಡಿದೆ.
ಅನರ್ಹ ಶಾಸಕರ ಅರ್ಜಿಯನ್ನು ಸೋಮವಾರ ವಿಚಾರಣೆಗೆ ತೆಗೆದುಕೊಳ್ಳುವಂತೆ ಈಗಾಗಲೇ ಸುಪ್ರೀಂ ಹೇಳಿದೆ. ವಿಚಾರಣೆ ಇನ್ನಷ್ಟು ತಡವಾಗುವ ಸಾಧ್ಯತೆ ಇದೆ.
ಅನರ್ಹ ಶಾಸಕರು ಬಚಾವಾಗಲು ಹೊಸ ಪ್ಲ್ಯಾನ್
ಆದರೆ ಈ ನಡುವೆ ರಾಜ್ಯ ವಿಧಾನಸಭೆ ಕಾರ್ಯಾಲಯವು ಕೇಂದ್ರ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದು, ಉಪ ಚುನಾವಣೆಗೆ ಅಧಿಸೂಚನೆ ಹೊರಡಿಸುವಂತೆ ಕೋರಿದೆ.
ಕೇಂದ್ರ ಚುನಾವಣೆ ಆಯೋಗವು ಉಪಚುನಾವಣೆಗೆ ಅಧಿಸೂಚನೆ ಹೊರಡಿಸಿದಲ್ಲಿ ಅನರ್ಹ ಶಾಸಕರ ರಾಜಕೀಯ ಭವಿಷ್ಯ ನುಚ್ಚು ನೂರಾಗಲಿದೆ.
ಕಾಂಗ್ರೆಸ್ ಸಭೆ: ಏಕಾಂಗಿಯಾಗಿ ಉಪಚುನಾವಣೆ ಎದುರಿಸಲು ನಿರ್ಧಾರ?
ಉಪಚುನಾವಣೆಗೆ ಸ್ಪರ್ಧಿಸುವಂತಿಲ್ಲ ಅನರ್ಹ ಶಾಸಕರು
ಅನರ್ಹತೆ ಇರುವ ಕಾರಣ ಪ್ರಸ್ತುತ ಅವರು ಉಪಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ. ಅಲ್ಲದೆ ಸಚಿವರೂ ಆಗುವಂತಿಲ್ಲ. ಮತ್ತೆ ಶಾಸಕರಾಗಲು ಸುಪ್ರೀಂಕೋರ್ಟ್ ಮಾತ್ರವೇ ಸದ್ಯಕ್ಕೆ ಉಳಿದಿರುವ ದಾರಿ. ಉಪಚುನಾವಣೆ ಘೋಷಣೆಗೆ ಮುನ್ನಾ ಸುಪ್ರೀಂಕೋರ್ಟ್ ತೀರ್ಪು ಬರಲೆಂದು ಅನರ್ಹ ಶಾಸಕರು ಧಾವಂತದಲ್ಲಿದ್ದಾರೆ.
ಜನವರಿ 25 ರ ಒಳಗಾಗಿ ಖಾಲಿ ಸ್ಥಾನ ಭರ್ತಿ ಮಾಡಬೇಕು
ಆದರೆ ರಾಜ್ಯ ವಿಧಾನಸಭಾ ಕಾರ್ಯಾಲಯವು ಕೇಂದ್ರ ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ, ಜುಲೈ 25 ರಂದು ಶಾಸಕರು ಅನರ್ಹಗೊಂಡಿದ್ದು, ಜನರಿ 25 ರ ಒಳಗಾಗಿ ಆ ಸ್ಥಾನಗಳನ್ನು ತುಂಬಬೇಕಿದೆ ಹಾಗಾಗಿ ಶೀಘ್ರವಾಗಿ ಚುನಾವಣೆ ಅಧಿಸೂಚನೆ ಹೊರಡಿಸಬೇಕು ಎಂದು ವಿಧಾನಸಭಾ ಕಾರ್ಯಾಲಯ ಹೇಳಿದೆ.
ಅರ್ಜಿ ಇತ್ಯರ್ಥವಾಗುವ ಮುನ್ನಾ ಚುನಾವಣೆ ಬಂದರೆ ಕಷ್ಟ
ವಿಚಾರಣೆ ಇತ್ಯರ್ಥವಾಗುವ ಮುನ್ನಾ ಅಧಿಸೂಚನೆ ಹೊರಟು, ನಾಮಪತ್ರ ಸಲ್ಲಿಕೆ ಆದದ್ದೇ ಆದಲ್ಲಿ, ಅನರ್ಹ ಶಾಸಕರು ತಮ್ಮ ರಾಜಕೀಯ ಭವಿಷ್ಯವನ್ನು ಮರೆಯಬೇಕಾಗುತ್ತದೆ. ಅನರ್ಹ ಶಾಸಕರು ಕನಿಷ್ಟ ಆರು ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
ಬಿಜೆಪಿ ಸಂಪರ್ಕದಲ್ಲಿರುವ ಅನರ್ಹ ಶಾಸಕರು
ಒಟ್ಟು ಹದಿನೇಳು ಶಾಸಕರನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅನರ್ಹಗೊಳಿಸಿದ್ದರು. ಪಕ್ಷಾಂತರ ನಿಷೇಧ ಕಾಯ್ದೆಯಡಿ ಇವರನ್ನು ಅನರ್ಹ ಮಾಡಲಾಗಿತ್ತು. ಇಷ್ಟೂ ಮಂದಿ ಶಾಸಕರು ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಆಯ್ಕೆಯಾಗಿ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಹಕರಿಸಿದ್ದರು. ಅನರ್ಹ ಶಾಸಕರು ಪ್ರಸ್ತುತ ಬಿಜೆಪಿ ಸಂಪರ್ಕದಲ್ಲಿದ್ದಾರೆ.