ಇದೀಗ ವಲಸೆ ಕಾರ್ಮಿಕರ ರೇಲ್ವೆ ಪ್ರಯಾಣ ವೆಚ್ಚ ಭರಿಸಲು ಮುಂದಾದ ಕೆಪಿಸಿಸಿ
ಬೆಂಗಳೂರು, ಮೇ 04: ವಲಸೆ ಕಾರ್ಮಿಕರು ತಮ್ಮೂರಿಗೆ ಹೋಗಲು ಕೊನೆಗೂ ರಾಜ್ಯ ಸರ್ಕಾರ ಉಚಿತ ಸಾರಿಗೆ ವ್ಯವಸ್ಥೆ ಮಾಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ತಮ್ಮೂರಿಗೆ ವಲಸೆ ಕಾರ್ಮಿಕರು ತೆರಳುತ್ತಿದ್ದಾರೆ. ಮೊದಲು ದುಪ್ಪಟ್ಟು ದರ ನಿಗದಿ ಮಾಡಿದ್ದ ರಾಜ್ಯ ಸಾರಿಗೆ ಇಲಾಖೆ ಆಮೇಲೆ ಸಾರ್ವಜನಿಕ ಹಾಗೂ ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಉಚಿತ ಸೇವೆ ಆರಂಭಿಸಿದೆ. ಕಾರ್ಮಿಕರ ವಿಚಾರವಾಗಿ ನಿನ್ನೆ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಹೈಡ್ರಾಮಾ ನಡೆದಿತ್ತು. ಅದೇ ಹಿನ್ನೆಲೆಯಲ್ಲಿ ಈಗ ಮತ್ತೆರಡು ದಿನಗಳ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಮಾಡಿದ್ದಾರೆ.
ಇದೀಗ ಹೊರ ರಾಜ್ಯಗಳಲ್ಲಿನ ವಲಸೆ ಕಾರ್ಮಿಕರನ್ನು ರಾಜ್ಯಕ್ಕೆ ಕರೆ ತರಲು ಒತ್ತಡ ಹೆಚ್ಚಾಗುತ್ತಿದೆ. ಹೊರ ರಾಜ್ಯಗಳಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರನ್ನು ತಮ್ಮೂರಿಗೆ ತಲುಪಿಸುವಂತೆ ರಾಜ್ಯ ಕಾಂಗ್ರೆಸ್ ನಿಯೋಗ ಆಗ್ರಹಿಸಿ, ಮನವಿ ಮಾಡಿಕೊಂಡಿದೆ. ಇದೇ ಸಂದರ್ಭದಲ್ಲಿ ಅಣ್ಣ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಚಿವ ಸುರೇಶ್ ಕುಮಾರ್ ಅವರಿಗೆ ತಿರಗೇಟು ಕೊಟ್ಟಿದ್ದಾರೆ. ವಲಸೆ ಕಾರ್ಮಿಕರ ವಿಚಾರವಾಗಿ ಇದೀಗ ಭರ್ಜರಿ ರಾಜಕೀಯ ಶುರುವಾಗಿದೆ.
ಲಾಕ್ ಡೌನ್ ಮುಗಿದ ಬಳಿಕ ಭಾರತಕ್ಕೆ ಕಾದಿದೆ ಡೇಂಜರ್: WHO ಅಲರ್ಟ್
ರೇಲ್ವೆ ಖರ್ಚು ಭರಿಸಲು ಕಾಂಗ್ರೆಸ್ ಸಿದ್ಧ
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವಲಸೆ ಕಾರ್ಮಿಕರ ರೇಲ್ವೆ ಪ್ರಯಾಣ ದರ ಸೇರಿದಂತೆ ವೆಚ್ಚವನ್ನು ಕಾಂಗ್ರೆಸ್ ಪಕ್ಷ ಭರಿಸಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿದ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ನಾಯಕರು ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಜೊತೆಗೆ ಹೊರ ರಾಜ್ಯಗಳಲ್ಲಿನ ವಲಸೆ ಕಾರ್ಮಿಕರನ್ನು ಕರೆತರಲು ತಗಲುವ ವೆಚ್ಚವನ್ನು ಸರ್ಕಾರಕ್ಕೆ ಭರಿಸಲು ಕಾಂಗ್ರೆಸ್ ಪಕ್ಷ ಸಿದ್ಧವಿದೆ. ಕೇಂದ್ರ ಸರ್ಕಾರದ ಮೇಲೆ ಹಾಗೂ ರೇಲ್ವೆ ಇಲಾಖೆ ಮೇಲೆ ಒತ್ತಡ ಹಾಕಿ ತಕ್ಷಣ ಹೊರ ರಾಜಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ಕರೆದುಕೊಂಡು ಬನ್ನಿ ಎಂದು ಆಗ್ರಹಿಸಿದ್ದಾರೆ.
ಸಿಎಂ ಬಗ್ಗೆ ಅಪಾರ ಗೌರವವಿದೆ: ಡಿಕೆಶಿ
ನಮ್ಮ ಪಕ್ಷದ ಮನವಿಯನ್ನು ಒಪ್ಪಿಕೊಂಡು ಉಚಿತ ಬಸ್ ವ್ಯವಸ್ಥೆ ಮಾಡಿದ ಸಿಎಂ ಯಡಿಯೂರಪ್ಪ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕಾರ್ಮಿಕರ ಊರುಗಳಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಿದ ಸಿಎಂ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಯಡಿಯೂರಪ್ಪ ಅವರ ಸಮಯೋಚಿತ ನಿರ್ಧಾರವನ್ನು ಅಭಿನಂದಿಸುತ್ತೇವೆ. ಹಾಗೆ ಹೊರ ರಾಜ್ಯದಲ್ಲಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವಂತೆ ಮನವಿ ಮಾಡುತ್ತೇವೆ. ಹೊರ ರಾಜ್ಯದಲ್ಲಿರುವ ಕನ್ನಡಿಗರು ಹಾಗೂ ಕಾರ್ಮಿಕರನ್ನು ರೈಲಿನಲ್ಲಿ ಕರೆ ತರಬೇಕು. ರಾಜ್ಯದ ವಿವಿಧೆಡೆ ಅಂತರ್ ಜಿಲ್ಲೆಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ಅವರ ಸ್ವಂತ ಊರಿಗೆ ಹೋಗಲು ವ್ಯವಸ್ಥೆ ಮಾಡಬೇಕು ಎಂದು ಡಿಕೆಶಿ ಆಗ್ರಹಿಸಿದ್ದಾರೆ.
ವಿರೋಧ ಪಕ್ಷವಾಗಿ ನಮ್ಮ ಕೆಲಸ ಮಾಡುತ್ತಿದ್ದೇವೆ
ವಿರೋಧ ಪಕ್ಷವಾಗಿ ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಚಿವ ಎಸ್. ಸುರೇಶಕುಮಾರ್ ಅವರ ಫೇಸ್ಬುಕ್ನಲ್ಲಿ ಬರೆದು ಕೊಂಡಿದ್ದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ವಿರೋಧ ಪಕ್ಷದವರ ಬಾಯಿ ಮುಚ್ಚಿಸುವ ಕೆಲಸ ಮಾಡಲು ಸಚಿವರಿಗೆ ನಾವು ಬಿಡಲ್ಲ. ನಮಗೆ ಪ್ರತಿಭಟನೆ ಮಾಡುವಷ್ಟು ಸ್ವಾತಂತ್ರ್ಯ ಇಲ್ಲವಾ? ಎಂದು ಸಚಿವ ಸುರೇಶ್ ಕುಮಾರ್ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕೊರೊನಾ ವೈರಸ್ವಿರುದ್ಧ ಹೋರಾಟದಲ್ಲಿ ಸರ್ಕಾರಕ್ಕೆ ಸಂಪೂರ್ಣ ಕೊಡುತ್ತೇವೆ ಎಂದು ಹೇಳಿದವರು ನೀಡಿರುವ ಸಹಕಾರ ಸಹಕಾರದ ಅರ್ಥವನ್ನೆ ಸುಳ್ಳಾಗಿಸಿದೆ ಎಂದು ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.
ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು
ಇನ್ನು ಕಾಂಗ್ರೆಸ್ ನಾಯಕರ ಮೆಜೆಸ್ಟಿಕ್ ಭೇಟಿಗೆ ಸಂಬಂಧಿಸಿದಂತೆ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ್, ಅವರು ಉತ್ತರಕುಮಾರನ ಪೌರುಷ ತೋರಿಸುತ್ತಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. ಕರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಬೇಡ, ವರ್ಡ್ ಬ್ಯಾಂಕ್ ಬೇಡ ಎನ್ನುವ ರೀತಿ ಕಾಂಗ್ರೆಸ್ ಬಿಂಬಿಸಿಕೊಳ್ಳುತ್ತಿದೆ.
ನಮ್ಮ ಬಳಿ ಕೋಟ್ಯಾಂತರ ರೂಪಾಯಿ ಇದೆ ಎಂದು ಹೋದಲ್ಲಿ ಬಂದಲ್ಲಿ ಬಸ್ಸ್ಟಾಂಡ್ಗೆ ಹೋಗಿ ಹೇಳಿಕೊಳ್ಳುತ್ತಿದ್ದಾರೆ. ನೊಂದ ಜನರಿಗೆ ಕಾಂಗ್ರೆಸ್ ಆ ಮೂಲಕ ಅವಮಾನ ಮಾಡಿದೆ. ಕರೋನಾ ಪರಿಹಾರಕ್ಕೆ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡುರಾವ್ ದೇಣಿಗೆ ನೀಡಿರಲಿಲ್ಲ. ಈಗ ಡಿ.ಕೆ. ಶಿವಕುಮಾರ್ ಅಧ್ಯಕ್ಷರಾಗುತ್ತಾ ಇದ್ದಂತೆ ಏಕಾಏಕಿ ದುಡ್ಡು ಬಂದಿದೆ. ಅದೇ ನಮಗೆ ಆಶ್ಚರ್ಯವಾಗಿದೆ. ಹೀಗಾಗಿ ಅವರು ನೀಡಿದ ಚೆಕ್ನ್ನು ನಾವು ಹುಷಾರಾಗಿ ನೋಡುತ್ತಾ ಇದ್ದೇವೆ. ಅವರ ಒಂದು ಕೋಟಿ ರೂ.ಗಳ ಚೆಕ್ನ್ನು ನಾವು ತಗೊಂಡಿಲ್ಲ. ನಾವು ನೂರಾರೂ ಕೋಟಿ ಈಗಾಗಲೇ ಖರ್ಚು ಮಾಡಿದ್ದೇವೆ. ಈಗ ನೀವು ಒಂದು ಕೋಟಿ ನೀಡಿ ನಂದು ಎಲ್ಲಿ ಇಡ್ಲಿ ಪೂಜಾರಪ್ಪ ಎನ್ನಬೇಡಿ. ಕಾಂಗ್ರೆಸ್ ದೇಶದಿಂದ ಪಡೆದಿದ್ದೆ ಹೆಚ್ಚು. ಅರವತ್ತು ವರ್ಷದಲ್ಲಿ ನೀವು ಎಷ್ಟು ಪಡೆದಿದ್ದೀರಿ?ಈಗ ತೀರ್ಥ ಕೊಟ್ಟಂತೆ ಕೊಡಬೇಡಿ. ನಿಮ್ಮ ಪಕ್ಷಕ್ಕೆ 120 ವರ್ಷದ ಇತಿಹಾಸ ಇದೆ, ಕೊಡೊದಿದ್ರೆ 120 ಕೋಟಿ ಕೊಡಿ. ಪ್ರಚಾರಕ್ಕೆ ಹಣ ಕೊಡಬೇಡಿ ಎಂದು ಡಿಕೆಶಿ ಅವರಿಗೆ ಆರ್ ಅಶೋಕ್ ತಿರುಗೇಟು ಕೊಟ್ಟಿದ್ದಾರೆ.