ಸುಪ್ರೀಂಕೋರ್ಟ್ ಸೂಚನೆ ಹಿನ್ನೆಲೆ ಮಹತ್ವ ಪಡೆದುಕೊಂಡ ರಾಜ್ಯ ಸಚಿವ ಸಂಪುಟ ಸಭೆ!
ಬೆಂಗಳೂರು, ಮಾ. 22: ಲಿಂಗಾಯತ ಪಂಚಮಸಾಲಿ 2ಎ ಹಾಗೂ ಕುರುಬ ಸಮುದಾಯದ ಎಸ್ಟಿ ಹೋರಾಟದ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ. ಜೊತೆಗೆ ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವ ಬಗ್ಗೆ ರಾಜ್ಯ ಸರ್ಕಾರಗಳ ನಿಲುವು ತಿಳಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಆ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಸುಪ್ರೀಂ ಕೋರ್ಟ್ಗೆ ತಿಳಿಸುವ ಸಾಧ್ಯತೆ ಇದೆ.
ಸುಪ್ರೀಂ ಕೋರ್ಟ್ ಸೂಚನೆ ಕೊಟ್ಟಿರುವ ಹಿನ್ನಲೆಯಲ್ಲಿ ಎಲ್ಲ ರೀತಿಯಿಂದಲೂ ಚರ್ಚಿಸಿದ ಬಳಿಕ ರಾಜ್ಯ ಸರ್ಕಾರ ಒಂದು ನಿರ್ಣಯಕ್ಕೆ ಬರಲಿದೆ. ಆ ನಂತರ ಆ ಅಭಿಪ್ರಾಯವನ್ನು ಕೋರ್ಟ್ಗೆ ತಿಳಿಸಲಿದೆ. ಕಾನೂನು ಹಾಗೂ ಸಂಸದೀಯ ಬಸವರಾಜ್ ಬೊಮ್ಮಾಯಿ ಅವರು, ಮೀಸಲಾತಿ ಹೆಚ್ಚಳದ ಕುರಿತು ರಾಜ್ಯದ ನಿಲುವಿನ ಬಗ್ಗೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ, ಪರಿಶಿಷ್ಟ ಜಾತಿ-ಪಂಗಡಗಳ ಆಯೋಗ, ಅಲ್ಪಸಂಖ್ಯಾತ ಆಯೋಗಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಆಯೋಗಗಳ ಅಧ್ಯಕ್ಷರು ಮತ್ತು ಕಾನೂನು ತಜ್ಞರು, ಹೈಕೋರ್ಟ್, ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳು, ಹಿರಿಯ ನ್ಯಾಯವಾದಿಗಳು, ಅಡ್ವೋಕೇಟ್ ಜನರಲ್ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಕಾನೂನು ಇಲಾಖೆ ಸಂಗ್ರಹಿಸಿರುವ ಮಾಹಿತಿ ಆಧಾರದಲ್ಲಿ ಸಂಪುಟದಲ್ಲಿ ಇಂದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದಲ್ಲದೆ ಕರ್ನಾಟಕ ಕಳ್ಳಭಟ್ಟಿ, ಸಾರಾಯಿ ವ್ಯವಹಾರ, ಆನ್ಲೈನ್ ಜೂಜು ತಡೆಯುವುದು ಕುರುತಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯೆತೆಯಿದೆ. ಸಿಡಿ ಪ್ರಕರಣ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಹಿನ್ನಲೆಯಲ್ಲಿ ಆಡಿಯೋ, ವಿಡಿಯೋ ನಕಲಿ ಮಾಡಿ ತೇಜೋವಧೆ ಮಾಡುವುದನ್ನು ನಿಯಂತ್ರಣಕ್ಕೆ ತರಲು ಕಾಯ್ದೆಯನ್ನು ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಸಾಧ್ಯತೆಯೂ ಇದೆ.
Recommended Video
ಇಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಸಂಪುಟ ಸಭಾಂಗಣದಲ್ಲಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ.