ಮತ್ತೊಂದು ಉಪ ಚುನಾವಣೆ ಸಿದ್ಧತೆ ಆರಂಭಿಸಿದ ಬಿಎಸ್ವೈ ಪುತ್ರ ವಿಜಯೇಂದ್ರ!
ಬೆಂಗಳೂರು, ನ. 15: ಶಿರಾ ಉಪ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮತ್ತೊಂದು ಚುನಾವಣೆ ಸಿದ್ಧತೆ ಆರಂಭಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹ ಶಾಸಕರಾಗಿರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಪ್ರತಾಪಗೌಡ ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಎದುರು ಮಹತ್ವದ ಬೇಡಿಕೆಯೊಂದನ್ನು ಇಟ್ಟಿದ್ದರು. ಶಿರಾ ಕ್ಷೇತ್ರದ ಉಪ ಚುನಾವಣೆ ಬಳಿಕ ಮಸ್ಕಿ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯ ಉಸ್ತುವಾರಿಯನ್ನೂ ವಿಜಯೇಂದ್ರ ಅವರಿಗೆ ಕೊಡಬೇಕು ಎಂದು ಮನವಿ ಮಾಡಿದ್ದರು.
ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರು ಜೆಡಿಎಸ್ ಭದ್ರಕೋಟೆಗಳಾಗಿದ್ದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಹಾಗೂ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಕಮಲ ಅರಳುವಂತೆ ಮಾಡಿರುವುದು ಬಿಜೆಪಿಯಲ್ಲಿ ಹೊಸ ಭರವಸೆ ಮೂಡಿಸಿದೆ. ಹೀಗಾಗಿ ತಮ್ಮ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯ ಉಸ್ತುವಾರಿಯನ್ನೂ ವಹಿಸಿಕೊಳ್ಳುವಂತೆ ಪ್ರತಾಪಗೌಡ ಪಾಟೀಲ್ ಅವರು ಮಾಡಿದ್ದರು.
ವಿಜಯೇಂದ್ರ ಹೋದಲೆಲ್ಲಾ ಜಯ, ಅವರು ಬಿಜೆಪಿಯ ದೊಡ್ಡ 'ಬಾಹುಬಲಿ'
ಆದರೆ ವಿಜಯೇಂದ್ರ ಅವರು ಪ್ರತಾಪಗೌಡ ಪಾಟೀಲ್ ಅವರ ಮನವಿಯನ್ನು ಒಪ್ಪಿಲ್ಲ ಎನ್ನಲಾಗಿದೆ. ಆದರೂ ಮತ್ತೊಂದು ಮಹತ್ವದ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಆ ಕ್ಷೇತ್ರ ಯಾವುದು? ಅಭ್ಯರ್ಥಿ ಯಾರಾಗ್ತಾರೆ? ಇಲ್ಲಿದೆ ಮಾಹಿತಿ!
ಉಪ ಚುನಾವಣೆ ತಯಾರಿ
ಮತ್ತೊಂದು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಸಿಎಂ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿಯೆ ಬೀದರ್ ಪ್ರವಾಸವನ್ನೂ ಮಾಡಿ ಮುಗಿಸಿದ್ದಾರೆ.
ಕಾಂಗ್ರೆಸ್ ಶಾಸಕರಾಗಿದ್ದ ಬಿ. ನಾರಾಯಣರಾವ್ ಅವರ ಅಕಾಲಿನ ನಿಧನದಿಂದ ಬೀದರ್ನ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಆ ಕ್ಷೇತ್ರದ ಚುನಾವಣೆ ತಯಾರಿಯನ್ನು ವಿಜಯೇಂದ್ರ ಅವರು ಆರಂಭಿಸಿದ್ದಾರೆ.
ಮರಾಠಾ ಸಮುದಾಯದ ಸಭೆ
ಶಿರಾ ಉಪಚುನಾವಣೆಯಲ್ಲಿ ಭರ್ಜರಿ ಜಯದೊಂದಿಗೆ ಬಿ.ವೈ. ವಿಜಯೇಂದ್ರ ಅವರಿಗೆ ಬಿಜೆಪಿಯಲ್ಲಿ ಜವಾಬ್ದಾರಿ ಹೆಚ್ಚಾಗಿದೆ. ಉಪ ಚುನಾವಣೆಯ ಗೆಲ್ಲಿಸಿ ಕೊಡುವ ಮಾಸ್ಟರ್ ಮೈಂಡ್ ಎಂದೇ ಬಿಜೆಪಿ ನಾಯಕರು ಹೊಗಳಿದ್ದಾರೆ. ಜೊತೆಗೆ ಹಲವು ನಾಯಕರಿಗೆ ತಮ್ಮ ಅಸ್ತಿತ್ವದ ಪ್ರಶ್ನೆಯೂ ಕಾಡುತ್ತಿದೆ. ಆದರೂ ಅನಿವಾರ್ಯವಾಗಿ ವಿಜಯೇಂದ್ರ ಅವರನ್ನು ಹೊಗಳದೆ ಬೇರೆ ದಾರಿಯೂ ಕಾಣುತ್ತಿಲ್ಲ.
ಪುತ್ರನ ರಾಜಕೀಯ ಭವಿಷ್ಯದ ಕುರಿತು ಯಡಿಯೂರಪ್ಪ ಮಹತ್ವದ ಹೇಳಿಕೆ!
ಇದೇ ಸಂದರ್ಭದಲ್ಲಿ ವಿಜಯೇಂದ್ರ ಅವರು ಉಪ ಚುನಾವಣೆ ನಡೆಯಲಿರುವ ಬಸವ ಕಲ್ಯಾಣಕ್ಕೆ ಒಂದು ದಿನದ ಪ್ರವಾಸ ಮಾಡಿದ್ದಾರೆ. ಅಲ್ಲಿನ ಮರಾಠ ಸಮುದಾಯದ ನಾಯಕರೊಂದಿಗೆ ಸಭೆಯನ್ನೂ ಮಾಡಿ ಮುಗಿಸಿದ್ದಾರೆ. ಆ ಮೂಲಕ ಉಪ ಚುನಾವಣೆ ಸಿದ್ಧತೆ ಆರಂಭಿಸಿದ್ದಾರೆ.
ಅನುಭವ ಮಂಟಪಕ್ಕೆ ಭೇಟಿ
ಮರಾಠ ಸಮುದಾಯದ ನಾಯಕರೊಂದಿಗೆ ಸಭೆಯ ಜೊತೆಗೆ ಅನುಭವ ಮಂಟಪಕ್ಕೂ ವಿಜಯೇಂದ್ರ ಅವರು ಭೇಟಿ ಕೊಟ್ಟಿದ್ದಾರೆ. ಹಾಗೆ ಅಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ಸ್ಥಳೀಯರೊಂದಿಗೆ ಬೆರೆತಿದ್ದಾರೆ.
ಕಳೆದ ಚುನಾವಣಾ ಫಲಿತಾಂಶ
ಕಳೆದ 2018ರಲ್ಲಿ ನಡೆದಿದ್ದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ದಿ. ಬಿ. ನಾರಾಯಣರಾವ್ ಅವರು 61,425 ಮತಗಳನ್ನು ಪಡೆದು ಗೆದ್ದಿದ್ದರು. ಬಿಜೆಪಿಯಿಂದ ಮಲ್ಲಿಕಾರ್ಜುನ್ ಖೂಬಾ ಸ್ಪರ್ಧಿಸಿ 44,153 ಮತಗಳನ್ನು, ಜೆಡಿಎಸ್ನಿಂದ ಪಿಜಿಆರ್ ಸಿಂಧ್ಯಾ ಅವರು ಸ್ಪರ್ಧಿಸಿ 31,414 ಮತಗಳನ್ನು ಪಡೆದಿದ್ದರು.
ಈ ಉಪ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಪ್ರಮುಖ ಮೂವರು ಸ್ಪರ್ಧಿಗಳಿದ್ದಾರೆ. ಗುಂಡಾರೆಡ್ಡಿ, ಶರಣು ಸಲಗರ್ ಹಾಗೂ ಮಲ್ಲಿಕಾರ್ಜುನ್ ಖೂಬಾ ಅವರು ಬಿಜೆಪಿ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದಾರೆ.